ಬಹರೇನ್ನಲ್ಲಿ ಬಿಲ್ಲವರ ದಶಮಾನೋತ್ಸವ ಸಂಭ್ರಮ
ಬಹರೇನ್, ಅ. 15 : ದಶಕದ ಹೊಸ್ತಿಲಲ್ಲಿರುವ ಅನಿವಾಸಿ ಬಿಲ್ಲವರ ಸಂಘಟನೆ ಬಹರೇನ್ ಬಿಲ್ಲವಾಸ್, ದಶಮಾನೋತ್ಸವ ಸಂಭ್ರಮಕ್ಕೆ ಸಜ್ಜಾಗಿ ನಿಂತಿದೆ. ದಶಮಾನೋತ್ಸವವು ಇದೆ ಅಕ್ಟೋಬರ್ ತಿಂಗಳ 16ರ ಬುಧವಾರ ಸಂಜೆ 4 ಗಂಟೆಗೆ ಮನಾಮದಲ್ಲಿರುವ ಅಲ್ ರಾಜಾ ಶಾಲೆಯ ಭವ್ಯ ಸಭಾಂಗಣದಲ್ಲಿ ಜರುಗಲಿದೆ.
ತಮ್ಮನ್ನು ನಂಬಿಕೊಂಡಿರುವ ಕುಟುಂಬದವರಿಗೂ, ತಮಗೂ ಒಂದು ನೆಮ್ಮದಿಯ ಬದುಕನ್ನು ಕಟ್ಟಿಕೊಳ್ಳಲು ಹತ್ತಾರು ವರುಷಗಳಿಂದ ಹಿಂದೆಯೇ ಬಹರೇನ್ ದ್ವೀಪ ರಾಷ್ಟ್ರವನ್ನು ತಮ್ಮ ಕರ್ಮಭೂಮಿಯನಾಗಿಸಿಕೊಂಡು ಇಲ್ಲಿಗೆ ಬಂದು ನೆಲೆಸಿರುವ ಬಿಲ್ಲವರು ನಂತರದ ದಿನಗಳಲ್ಲಿ ಸ್ವಲ್ಪ ಗಟ್ಟಿಯಾಗಿ ಬೇರೂರಿದಾಗ ತಮ್ಮ ಒಟ್ಟು ಸಮುದಾಯದ ನೋವು, ನಲಿವುಗಳಿಗೆ ಸ್ಪಂದಿಸುವಂತಹ ವೇದಿಕೆಯೊಂದು ಬೇಕೆನ್ನಿಸಿತು. ಹಾಗೆ ಗರಿಕೆದರಿದ ಕಲ್ಪನೆಗೆ ಸ್ಪಷ್ಟವಾದ ಒಂದು ರೂಪು ಸಿಕ್ಕಿದ್ದು 2003ರಲ್ಲಿ.
ಬಿಲ್ಲವರು ಒಟ್ಟಾಗಿ ಅಂದು ಕಟ್ಟಿದ ಈ ಸಂಘಟನೆಗೆ ಈಗ ಬರೋಬರಿ ಹತ್ತು ವರುಷಗಳು ತುಂಬಿವೆ. ತಮ್ಮ ಸಮುದಾಯದವರ ನೋವು, ನಲಿವುಗಳಿಗೆ ಸ್ಪಂದಿಸಲಿಕ್ಕಾಗಿಯೇ ಒಂದು ಸಂಘಟನೆಯನ್ನು ಕಟ್ಟುವುದು ಅಷ್ಟೇನೂ ಸುಲಭವಲ್ಲ. ಒಂದು ವೇಳೆ ಹಾಗೆ ಕಟ್ಟಿಕೊಂಡರೂ ಅದನ್ನು ಮೂಲ ಉದ್ದೇಶಗಳಿಗೆ ಬದ್ಧವಾಗಿ ಹತ್ತು ವರುಷಗಳಷ್ಟು ದೀರ್ಘ ಕಾಲ ಮುನ್ನಡೆಸಿಕೊಂಡು ಬರುವುದಂತೂ ಇನ್ನೂ ಕಷ್ಟದ ಕೆಲಸ.
ಕಾವೇರಿಯಲ್ಲಿ ನೀರು ಹರಿದಂತೆ ಈ ಸಂಘಟನೆಯಿಂದ ಈ ಹತ್ತು ವರುಷಗಳಲ್ಲಿ ಸಾಕಷ್ಟು ಸಮಾಜಮುಖಿ ಕಾರ್ಯಕ್ರಮಗಳು ಜರುಗಿವೆ. ದ್ವೀಪದಲ್ಲೂ, ತಾಯ್ನಾಡಿನಲ್ಲೂ ನೊಂದಿರುವ ಬಿಲ್ಲವ ಸಮುದಾಯದ ಅನೇಕ ಕುಟುಂಬಗಳಿಗೆ ಈ ಸಂಘಟನೆ ಆಸರೆಯಾಗಿದೆ. ವೈದ್ಯಕೀಯ ನೆರವು, ಶೈಕ್ಷಣಿಕ ನೆರವಿಗಾಗಿ ಸಹಾಯ ಹಸ್ತ ಚಾಚಿದೆ. ಬಡ ಕುಟುಂಬ ತನ್ನ ಮೇಲಿನ ಸೂರನ್ನೇ ಕಳೆದು ಕೊಂಡಾಗಲೂ ಆ ಕುಟುಂಬದ ನೆರವಿಗಾಗಿ ಆರ್ಥಿಕ ಸಹಾಯ ನೀಡಿದೆ.
ದ್ವೀಪದಲ್ಲಿರುವ ಬಿಲ್ಲವ ಸಮುದಾಯದ ಪ್ರತಿಯೊಬ್ಬನನ್ನೂ ತನ್ನ ಮುಖ್ಯವಾಹಿನಿಯಲ್ಲಿ ಸೇರಿಸಿಕೊಂಡು ಅವರುಗಳ ಕಷ್ಟ ಸುಖಗಳಿಗೆ ಸಮಾನವಾಗಿ ಸ್ಪಂದಿಸುತ್ತಾ ಇದೀಗ ಹತ್ತು ವರುಷಗಳ ಸಾರ್ಥಕತೆಯನ್ನು ಕಂಡಿದೆ. ಈ ಹತ್ತು ವರುಷಗಳ ಸಾರ್ಥಕತೆಯನ್ನು ವಿಜೃಂಭಣೆಯಿಂದ ಆಚರಿಸಬೇಕು ಎನ್ನುವ ನಿಟ್ಟಿನಲ್ಲಿ ಬಹರೇನ್ ಬಿಲ್ಲವಾಸ್ ಈಗಾಗಲೇ ಎಲ್ಲಾ ರೀತಿಯ ತಯಾರಿಗಳನ್ನು ಮುಗಿಸಿದ್ದು ಕಾರ್ಯಕ್ರಮಕ್ಕೆ ಇದಾಗಲೇ ಕ್ಷಣಗಣನೆ ಪ್ರಾರಂಭವಾಗಿದೆ.
ಯಾರ್ಯಾರು ಬರುತ್ತಿದ್ದಾರೆ? : ನಾಡಿನ ಖ್ಯಾತ ಲೇಖಕಿ, ಸಾಹಿತಿ ಜಾನಕಿ ಬ್ರಹ್ಮಾವರ್ ಈ ದಶಮಾನೋತ್ಸವ ಸಮಾರಂಭದ ಮುಖ್ಯ ಅತಿಥಿಯ ಸ್ಥಾನವನ್ನು ಅಲಂಕರಿಸಲಿದ್ದರೆ. ಕಾರ್ಯಕ್ರಮದ ಮುಖ್ಯ ಪ್ರಾಯೋಜಕತ್ವ ವಹಿಸಿಕೊಂಡಿರುವ ಮಾಂಡವಿ ಬಿಲ್ಡೆರ್ಸ್ ಆಂಡ್ ಡೆವಲಪ್ಪರ್ಸ್, ಉಡುಪಿ ಆಡಳಿತ ನಿರ್ದೇಶಕರಾದ ಜೆರಿ ವಿನ್ಸೆಂಟ್ ಡಯಾಸ್ ಹಾಗು ಸಹ ಪ್ರಾಯೋಜಕತ್ವ ವಹಿಸಿಕೊಂಡಿರುವ ನಾರ್ದರ್ನ್ ಸ್ಕೈ ಪ್ರಾಪರ್ಟೀಸ್ ಮಂಗಳೂರು ಆಡಳಿತ ನಿರ್ದೇಶಕ ಧೀರಜ್ ಅಮೀನ್, ಶ್ರೀ ಮಾತಾ ಎಂಟರ್ ಪ್ರೈಸಸ್ ಮಣಿಪಾಲ ಆಡಳಿತ ನಿರ್ದೇಶಕರಾದ ದರ್ಪಣ್ ಪೂಜಾರಿ ಇವರುಗಳು ಈ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಗಳಾಗಿ ಆಗಮಿಸಲಿದ್ದಾರೆ.
ತುಳು ಅಕಾಡೆಮಿಯ ಮಾಜಿ ಅಧ್ಯಕ್ಷರಾದ ಉಮಾನಾಥ್ ಕೋಟ್ಯಾನ್ ಹಾಗು "ಎನ್ಕೌಂಟರ್ ದಯಾನಾಯಕ್" ಖ್ಯಾತಿಯ ನಟ, ನಿರ್ದೇಶಕ, ನಿರ್ಮಾಪಕ ಸಚಿನ್ ಸುವರ್ಣರವರು ಗೌರಾನ್ವಿತ ಅತಿಥಿಗಳಾಗಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ಕೊಲ್ಲಿ ರಾಷ್ಟ್ರಗಳ ವಿವಿಧ ಬಿಲ್ಲವ ಸಂಘಟನೆಗಳ ಪ್ರತಿನಿಧಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ದ್ವೀಪಕ್ಕೆ ಆಗಮಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಬಹರೇನ್ ಬಿಲ್ಲವಾಸ್ ಕಳೆದ ಹತ್ತು ವರುಷಗಳಿಂದ ನಡೆದು ಬಂಡ ಹಾದಿಯ ಸಮಗ್ರ ಪರಿಚಯವನ್ನು ಒಳಗೊಂಡಿರುವ ವರ್ಣಮಯ ದಶಮಾನೋತ್ಸವ ವಿಶೇಷ ಸ್ಮರಣ ಸಂಚಿಕೆ "ತುಡರ್" ಅನ್ನು ಬಿಡುಗಡೆಗೊಳಿಸಲಾಗುವುದು.
ನಾಟಕ ಪ್ರದರ್ಶನ : ದ್ವೀಪದ ಕಲಾರಸಿಕರಿಗೆ ಇದೊಂದು ಸಾಂಸ್ಕ್ರತಿಕ ಹಬ್ಬವಾಗಿದ್ದು ವೈವಿಧ್ಯಮಯ ಸಾಂಸ್ಕ್ರತಿಕ ಕಾರ್ಯಕ್ರಮಗಳು ದ್ವೀಪದ ತುಳು, ಕನ್ನಡ ಕಲಾ ಪ್ರೇಮಿಗಳಿಗೆ ಉತ್ಕೃಷ್ಟ ಮಟ್ಟದ ಮನೋರಂಜನೆ ನೀಡಲಿವೆ. ತುಳು ರಂಗಭೂಮಿಯ "ಕುಸಲ್ಧರಸೆ " ಖ್ಯಾತಿಯ ನವೀನ ಡಿ ಪಡೀಲ್, ಭೋಜರಾಜ್ ವಾಮಂಜೂರ್ ಹಾಗು ತಂಡದವರಿಂದ "ರಂಬಾರೂಟಿ " ಎನ್ನುವ ಹಾಸ್ಯ ನಾಟಕ ಈ ಕಾರ್ಯಕ್ರಮದ ಪ್ರಧಾನ ಆಕರ್ಷಣೆಯಾಗಿ ಪ್ರದರ್ಶನಗೊಳ್ಳಲಿದೆ.
ತುಳು ರಂಗಭೂಮಿಯ ಖ್ಯಾತ ರಂಗಕರ್ಮಿ ಪರಮಾನಂದ ಸಾಲ್ಯಾನ್ ರವರ ನಿರ್ದೇಶನದಲ್ಲಿ ತುಳುನಾಡಿನ ಭವ್ಯ ಪರಮಪರೆಯನ್ನು ಸಾರುವ ನೃತ್ಯ ರೂಪಕ, "ತುಳುನಾಡ್ ಡಯೆಗಿಂಚಾಂಡ್...?"ವನ್ನು ಬಿಲ್ಲವ ಸಮುದಾಯದ ಕಲಾವಿದರು ಪ್ರಸ್ತುತ ಪಡಿಸುತಿದ್ದಾರೆ. ಸಾಂಸ್ಕ್ರತಿಕ ಕಾರ್ಯಕ್ರಮದ ಸಾರಥ್ಯವನ್ನು ಹೊತ್ತಿರುವ ಸಾಂಸ್ಕ್ರತಿಕ ಕಾರ್ಯದರ್ಶಿ ಹಾಗು ದ್ವೀಪದ ಕ್ರಿಯಾಶೀಲ ನೃತ್ಯ ನಿರ್ದೇಶಕಿ ಚಂದ್ರಕಲಾ ಮೋಹನ್ ರವರ ನಿರ್ದೇಶನದಲ್ಲಿ ದ್ವೀಪದ ಪ್ರತಿಭಾವಂತ ನೃತ್ಯ ಪಟುಗಳು ವೈವಿಧ್ಯಮಯ ನೃತ್ಯಗಳ ಪ್ರದರ್ಶನ ನೀಡಲಿದ್ದಾರೆ. ದ್ವೀಪದ ಎಲ್ಲಾ ಕನ್ನಡಿಗರಿಗೂ ಮುಕ್ತ ಪ್ರವೇಶವಿದೆ.
ಕಾರ್ಯಕ್ರಮದ ಬಗೆಗಿನ ಹೆಚ್ಚಿನ ವಿವರಗಳಿಗೆ ಬಹರೇನ್ ಬಿಲ್ಲವಾಸ್ ನ ಅಧ್ಯಕ್ಷರಾದ ರಾಘು ಪೂಜಾರಿಯವರನ್ನು ದೂರವಾಣಿ ಸಂಖ್ಯೆ 00973-33299073, ಪ್ರಧಾನ ಕಾರ್ಯದರ್ಶಿ ಹರೀಶ್ ಜತ್ತನರವರನ್ನು ದೂರವಾಣಿ ಸಂಖ್ಯೆ 00973-35309551 ಮುಖೇನ ಸಂಪರ್ಕಿಸಬಹುದು.