ಆಕ್ಟರ್, ಡೈರೆಕ್ಷರ್ ಉಪ್ಪಿಗಿಂತ ರೈಟರ್ ಉಪ್ಪೀನೇ ಇಷ್ಟ
ವೈಶಾಲಿ : ನೀವು ಹೀಗೆ ತುಂಬಾ ಸಿನಿಮಾಗಳನ್ನು ನಿರ್ದೇಶಿಸಿದ್ದೀರ, ಅಭಿನಯಿಸಿದ್ದೀರ. ನನಗೆ ಪರ್ಸನಲಿ ಚಿತ್ರನಟ ಉಪ್ಪಿಗಿಂತ ನಿರ್ದೇಶಕ ಉಪೇಂದ್ರ ಹೆಚ್ಚು ಇಷ್ಟ. ನಿಮಗೆ ವೈಯಕ್ತಿಕವಾಗಿ ಆಕ್ಟಿಂಗ್ ಇಷ್ಟನೋ, ಡಿರೆಕ್ಟಿಂಗ್ ಇಷ್ಟನೋ?
ಉಪ್ಪಿ : ಆಕ್ಚುವಲೀ, ನಂಗೆ ಇವರಡರಿಗಿಂತ ರೈಟಿಂಗ್ ಇಷ್ಟ. ಬರೆಯೋದಿಷ್ಟ. ಅದು ಮೂಲ. ಬರೆದಾಗ ನಾನು ತುಂಬಾ ಎಂಜಾಯ್ ಮಾಡಿ ಬರೀತೀನಿ. ಅದಾಮೇಲೆ ಉಳಿದೆಲ್ಲ ತಾನಾಗೆ ಆಗುತ್ತೆ.
ವೈಶಾಲಿ : ಒಹ್ ನಿಜಕ್ಕೂ ಖುಷಿ ಆಯ್ತು ನಿಮಗೆ ಮೂಲವಾದ ಬರವಣಿಗೆ ಇಷ್ಟ ಅಂತ ತಿಳಿದು. ಈ ವಿಷಯ ಬಹಳಷ್ಟು ನಮ್ಮಲ್ಲಿ ಜನರಿಗೆ ಗೊತ್ತಿರಲಿಲ್ಲ. ನಿಮ್ಮ ಸಿನಿಮಾಗಳಲ್ಲಿ ನಿಮ್ಮ ಡೈಲಾಗ್ ಹೇಳೋ ಪರಿ ಇದೆಯಲ್ಲ, ರಂಗಭೂಮಿಯ ಹಿನ್ನೆಲೆಯಿಂದ ಬಂದವರು ಕೂಡ ಅಷ್ಟು ನಿರರ್ಗಳವಾಗಿ ಡೈಲಾಗ್ ಹೇಳಲ್ಲ. ಅದು ಪರಿಶುದ್ಧ ಕನ್ನಡ ಆಗಿರಬಹುದು, ಅಥವಾ ಈಗಿನ ಪಡ್ಡೆ ಹುಡುಗರ ಸ್ಟ್ರೀಟ್ ಲಾಂಗ್ವೇಜ್ ಆಗಿರಬಹುದು. ಇಲ್ಲ ಆಧ್ಯಾತ್ಮ ಚಿಂತನೆಯ ಸ್ಟೈಲ್ ಆದ್ರೂ ಆಗಿರಬಹುದು. ಅಷ್ಟು ನಿರರ್ಗಳವಾಗಿ ಡೈಲಾಗ್ ಹೇಳ್ತೀರಲ್ಲ ಹೇಗೆ ಬಂತು ಅದು? ಏನು ಸ್ಪೂರ್ತಿ?
ಉಪ್ಪಿ : ಹಹಹ, ಚಿಕ್ಕಂದಿನಲ್ಲಿ ನಮ್ಮಪ್ಪ ಅಮ್ಮ ತುಂಬಾ ಜಗಳಾಡೋರು. ಅದನ್ನು ನೋಡ್ತಾ ನೋಡ್ತಾ ಬಂತು ಅನ್ಕೋತೀನಿ. ನಮ್ ತಂದೆ ಕನ್ನಿಕಾ ಪರಮೇಶ್ವರಿ ಅಂತ ವಿಶ್ವೇಶ್ವರಮ್ ಅಲ್ಲಿ ಒಂದು ದೇವಸ್ಥಾನ ಇದೆ, ಅಲ್ಲಿ ಅಡಿಗೆ ಕೆಲಸ ಮಾಡೋರು. ಅಲ್ಲಿ ಯಾವಾಗಲೂ ಹರಿಕತೆ ಕೇಳೋರು. ಆಮೇಲೆ ಮನೆಗ್ ಬಂದು ಫುಲ್ ಕತೆ ನಮಗೆ ಹೇಳೋರು. ಈ ಕಲ್ಪನೆ ಅಂತ ನಮಗೆಲ್ಲ ಶುರುವಾಗಿದ್ದೆ ಅಲ್ಲಿಂದ. ಅದೇ ನಂಗೆ ಯಾವಾಗಲೂ ಅನ್ಸುತ್ತೆ ಓದೋ ಅಭ್ಯಾಸ ಮಾಡ್ಕೊಂಡ್ರೆ ಕಲ್ಪನೆ ತುಂಬಾ ಚೆನ್ನಾಗಿ ಬರುತ್ತೆ.
ಈಗೇನಾಗ್ತಿದೆ ಅಂದ್ರೆ, ನಂ ಮಕ್ಳೆ ನೋಡ್ತೀನಿ, 24 ಗಂಟೆ ಟ್ಯಾಬು, ಟೀವಿ, ಫೋನ್ ಹಿಂದ್ಕೊಂಡು ಕೂತಿರ್ತಾರೆ. ಎಲ್ಲವೂ ರೆಡಿಮೇಡ್ ಆಗೋಗ್ಬಿಟ್ಟಿದೆ ಈವಾಗ. ನಮ್ಗೆನಂದ್ರೆ ಆಗ ಚಂದಮಾಮ ಅಂತ ಕತೆ ಪುಸ್ತಕ ಬರ್ತಿತ್ತು. ಚಂದಮಾಮ ಓದ್ತಾ ಇದ್ರೆ ಅಲ್ಲೊಬ್ಬ ರಾಜ ಇದ್ದ, ಒಂದು ಊರಿತ್ತು, ಒಂದು ಕಾಡಿತ್ತು ಅಂತ ನಮಗೊಂದು ಕಲ್ಪನೆ, ಒಹ್ ಕಾಡಂದ್ರೆ ಹೀಗಿರಬಹುದು, ಊರಂದ್ರೆ ಹಿಂಗಿರ್ಬಹುದು ಅಂತ ಕಲ್ಪನೆ. ಈ ಕಲ್ಪನೆ ಅನ್ನೋದು ಬೇಕು ಮನುಷ್ಯನಿಗೆ. ಅದು ಓದೋದರಿಂದ ಮಾತ್ರ ಸಾಧ್ಯ. ನಾನೇನೋ ಹಳೇ ಕಾಲ್ದವ್ನ ತರಹ ಮಾತಾಡ್ತಿದೀನಿ ಅನ್ಕೊಬಹುದು ನೀವು.