ಸಿಂಗಪುರದಲ್ಲಿ ಎಂಟಿಆರ್ ಮಾಲೀಕರ ಸಂದರ್ಶನ
26ನೇ ಮೇ 2013 - ಸಿಂಗಪುರದ ಸ್ವಾದಿಷ್ಟ ಆಹಾರಪ್ರೇಮಿ ಕನ್ನಡಿಗರ ಪಾಲಿಗೆ ಸುದಿನ. 1924ರಲ್ಲಿ ಬೆಂಗಳೂರಿನಲ್ಲಿ ಪ್ರಾರಂಭವಾದ ಪರಿಶುದ್ಧತೆಯ ಸಂಕೇತವಾಗಿದ್ದ "ಬ್ರಾಹ್ಮಣರ ಕಾಫಿ ಕ್ಲಬ್", 1951ರಲ್ಲಿ ಪರಿಶುದ್ಧತೆ ಮತ್ತು ಪರಿಪೂರ್ಣತೆಗಳ ಸಾಕಾರವಾಗಿ "ಮಾವಳ್ಳಿ ಟಿಫಿನ್ ರೂಮ್ಸ್ (ಎಮ್.ಟಿ.ಆರ್.) ಎಂಬ ಉಪಾಹಾರ ಮಂದಿರ ಇಂದು ಸಿಂಗಪುರದ ಸೆರಂಗೂನ್ ರಸ್ತೆಯಲ್ಲಿ (ಶ್ರೀ ಶ್ರೀನಿವಾಸ ಪೆರುಮಾಳ್ ದೇವಸ್ಥಾನದ ಎದುರು) ತನ್ನ ಮೊಟ್ಟಮೊದಲ ವಿದೇಶೀ ಶಾಖೆಯನ್ನು ತೆರೆದಿದೆ. ಹೋಟೆಲ್ನ ಸ್ಥಾಪನೆ ಮತ್ತು ಉದ್ಘಾಟನೆಗೆ ಸಿಂಗಪುರಕ್ಕೆ ಆಗಮಿಸಿದ್ದ ಎಂ.ಟಿ.ಆರ್.ನ ಪಾಲುಗಾರರಾದ ಹೇಮಮಾಲಿನಿ ಮಯ್ಯ, ವಿಕ್ರಮ್ ಮಯ್ಯ ಮತ್ತು ಸ್ಥಳೀಯ ಮಾಲೀಕರಾದ ಆಡ್ರಿ ಅವರನ್ನು ಸಂದರ್ಶಿಸುವ ಅವಕಾಶ ನನಗೆ ಒದಗಿಬಂದಿತ್ತು. ಒನ್ಇಂಡಿಯಾ ಕನ್ನಡ ಅಂತರ್ಜಾಲ ತಾಣದ ಪರವಾಗಿ ಮಾಡಿದ ಈ ಸಂದರ್ಶನದ ತುಣುಕುಗಳು ಇಲ್ಲಿವೆ.
ಸುರೇಶ : ನಮಸ್ಕಾರ. ಸಿಂಗಪುರದ ಜನರಿಗೂ ಸ್ವಾದಿಷ್ಟ ಊಟ ಬಡಿಸಲು ಬಂದಿದ್ದೀರಿ ಅಂತ kannada.oneindia.com(thatskannada.com) ಎಂಬ ಅಂತರ್ಜಾಲ ಪತ್ರಿಕೆಯ ಮೂಲಕ ತಿಳಿಯಿತು. ನಿಮ್ಮೊಂದಿಗೆ ಒಂದು ಕಿರು-ಸಂದರ್ಶನ ಮಾಡಬಹುದೇ?
ಹೇಮಮಾಲಿನಿ : ಹೊರನಾಡಿನಲ್ಲಿ ಕನ್ನಡಿಗರನ್ನು ಭೇಟಿ ಮಾಡುವುದು ತುಂಬಾ ಸಂತೋಷದ ವಿಷಯ. ಅಗತ್ಯವಾಗಿ ಮಾಡಿ.
ಪ್ರಶ್ನೆ : ಇದೇ ಮೊದಲ ಬಾರಿಗೆ ಹೊರದೇಶದಲ್ಲಿ ಅದರಲ್ಲೂ ಸಿಂಗಪುರದಲ್ಲಿ ಎಂಟಿಆರ್ ತೆರೆಯುತ್ತಿರುವುದು ಅತ್ಯಂತ ಸಂತೋಷದ ವಿಷಯ ಮತ್ತು ಅದಕ್ಕಾಗಿ ಧನ್ಯವಾದಗಳು. ಆದರೆ ನೀವು ಸಿಂಗಪುರವನ್ನೇ ಆಯ್ದುಕೊಂಡದ್ದು ಏಕೆ?
ಹೇಮಮಾಲಿನಿ : ದಕ್ಷಿಣ ಭಾರತದ ಹೋಟೆಲಿನ ಶಾಖೆ ತೆಗೆಯಬೇಕೆಂದರೆ ಮೊದಲು ಶಿಫಾರಸು ಮಾಡುವ ದೇಶದ ಹೆಸರುಗಳು ಸಿಂಗಪುರ, ದುಬೈ ಮತ್ತು ಅಮೆರಿಕ. ನಮ್ಮ ಕುಟುಂಬದ ಹತ್ತಿರದ ಸ್ನೇಹಿತರಾದ ರಾಘವೇಂದ್ರ ಶಾಸ್ತ್ರಿಯವರು "ನೀವು ಸಿಂಗಪುರದಲ್ಲಿ ನಿಮ್ಮ ಹೋಟೆಲ್ಲನ್ನು ತೆರೆಯಿರಿ" ಅಂತ ಶಿಫಾರಸ್ಸು ಮಾಡಿದರು. ಹೊರದೇಶದಲ್ಲಿ ನಮ್ಮ ಹೋಟೆಲಿನ ಶಾಖೆ ತೆಗೆಯಬೇಕೆಂಬ ಅಪೇಕ್ಷೆ ಇದ್ದರೂ ರಾಷ್ಟ್ರೀಯವಾಗಿ ಮೊದಲು ಮತ್ತು ಆನಂತರ ಅಂತರರಾಷ್ಟ್ರೀಯವಾಗಿ ಅಂತಲೇ ನಮ್ಮ ಅಪೇಕ್ಷೆ ಇದ್ದುದು. ಆದರೆ ಇಷ್ಟು ಬೇಗ, ಇಲ್ಲಿ ತೆರೆಯುವಂತಾದದ್ದು ವಿಧಿಯೆಂದೇ ಹೇಳಬಹುದು.