ಅಕ್ಕ ಸಂಚಾಲಕರು : ಹೊನ್ನವಳ್ಳಿ ನಾಡಿಗ ರಾಮಸ್ವಾಮಿ
ಈ ಮೂರು ದಿನಗಳಲ್ಲಿ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳು, ಸ್ಪರ್ಧೆಗಳು, ಗೋಷ್ಠಿಗಳನ್ನು ಆಯೋಜಿಸಲಾಗಿದೆ. ಬಂದ ಅತಿಥಿಗಳಿಗೆ ಯಾವುದೇ ರೀತಿಯಲ್ಲಿ ಕೊರತೆಯಾಗದಂತೆ, ಎಲ್ಲ ಕಾರ್ಯಕ್ರಮಗಳೂ ಅಂದುಕೊಂಡಂತೆ ಅಚ್ಚುಕಟ್ಟಾಗಿ ನಡೆಸಿಕೊಡಲು ಹಲವಾರು ಸ್ವಯಂಸೇವಕರು, ಸಂಚಾಲಕರು ತಮ್ಮ ವೈಯಕ್ತಿಕ ಕೆಲಸಗಳನ್ನೆಲ್ಲ ಬದಿಗಿಟ್ಟು ಟೊಂಕಕಟ್ಟಿ ದುಡಿಯುತ್ತಿದ್ದಾರೆ. ಸಂಚಾಲಕರು ಇಂಥ ಕಾರ್ಯಕ್ರಮದ ಬೆನ್ನೆಲುಬಿದ್ದಂತೆ. ಕನ್ನಡಕ್ಕಾಗಿ ಏನ್ನನ್ನಾದರೂ ಮಾಡಲು ಸಿದ್ಧ ಎಂದು ನಿಂತಿರುವ ಕೆಲ ಸಂಚಾಲಕರ ಕಿರುಪರಿಚಯ ಇಲ್ಲಿ ನೀಡುತ್ತಿದ್ದೇವೆ.
ಡಾ. ಹೊನ್ನವಳ್ಳಿ ನಾಡಿಗ ರಾಮಸ್ವಾಮಿ : ಸುಮಾರು 40 ವರ್ಷಗಳಿಂದ ನೃಪತುಂಗ ಕನ್ನಡ ಕೂಟದ ಬೆಳವಣಿಗಾಗಿ ಶ್ರಮಿಸುತ್ತಿರುವ ಹೊನ್ನವಳ್ಳಿ ನಾಡಿಗ ರಾಮಸ್ವಾಮಿಯವರು 7ನೇ ಅಕ್ಕ ಕನ್ನಡ ವಿಶ್ವ ಸಮ್ಮೇಳನದ ಪ್ರಧಾನ ಸಂಚಾಲಕರಾಗಿ, ಅಟ್ಲಾಂಟಾ ನಗರದಲ್ಲಿ ನಡೆಯಲಿರುವ ಸಮ್ಮೇಳನದ ಭರದ ಸಿದ್ಧತೆಗಳ ಮೇಲ್ವಿಚಾರಣೆಯನ್ನು ನೋಡಿಕೊಳ್ಳುತ್ತಿದ್ದಾರೆ. ಹಿರಿಯರೊಬ್ಬರು ಮುಂದೆ ಬಂದು ನಿಂತರೆ ಹಿಂದಿನ ಕೆಲಸಗಳೆಲ್ಲ ಸರಾಗವಾಗಿ ನಡೆಯುತ್ತವೆ ಎಂಬುದರಲ್ಲಿ ಸಂಶಯವೇ ಇಲ್ಲ.
ರಾಮಸ್ವಾಮಿಯವರು ಟುಲೇನ್ ವಿಶ್ವವಿದ್ಯಾಲಯದಲ್ಲಿ 1967ರಲ್ಲಿ ರಸಾಯನ ಶಾಸ್ತ್ರದಲ್ಲಿ ಡಾಕ್ಟೋರಲ್ ಪದವಿಯನ್ನು ಪಡೆದು, ಅನೇಕ ಸಂಸ್ಥೆಗಳಲ್ಲಿ ಸಂಶೋಧನೆ ನಡೆಸಿ 2000ರಲ್ಲಿ ನಿವೃತ್ತರಾದರು. ತುಮಕೂರು ಜಿಲ್ಲೆ ತಿಪಟೂರು ತಾಲೂಕಿನ ಹೊನ್ನವಳ್ಳಿಯ ತಮ್ಮ ಊರಿನ ಶಾಲೆಗಳಿಗೆ ವಿದ್ಯಾರ್ಥಿವೇತನ, ಶೌಚಾಲಯ ಮತ್ತು ಗ್ರಂಥಾಲಯ ಸೌಲಭ್ಯ ದೊರಕಲು, ಅನೇಕ ರೀತಿಯಲ್ಲಿ ಧನ ಸಹಾಯ ಮಾಡಿದ್ದಾರೆ. ಇದರ ಜೊತೆಗೆ ಕನ್ನಡ ಭಾಷೆಯನ್ನು ವ್ಯಾಪಿಸಲು, ಕನ್ನಡಿಗರನ್ನು ಒಂದುಗೂಡಿಸಲು ಮತ್ತು ಕನ್ನಡಿಗರಿಗೆ ಅನುಕೂಲ ಕಲ್ಪಿಸಲು ಸಾಕಷ್ಟು ದುಡಿದಿದ್ದಾರೆ.
ಇವರ ಪತ್ನಿ ಶ್ರೀಮತಿ ಇಂದಿರಾವರು ಸಹ ಇವರೊಂದಿಗೆ ಜೊತೆಜೊತೆಯಾಗಿ ಸಾಗಿದ್ದಾರೆ. 2001 ನವೆಂಬರ್ ನಲ್ಲಿ ರಕ್ಷಾ ಸ್ವಯಂಸೇವಕ ಸಂಸ್ಥೆಯು ರಾಮಸ್ವಾಮಿ ಮತ್ತು ಅವರ ಪತ್ನಿ ಇಂದಿರಾ ಅವರಿಗೆ "Community Change Award" ಅನ್ನು ನೀಡಿ ಸನ್ಮಾನಿಸಿದೆ. ಅನೇಕ ಲೇಖಕರು, ಸಾಹಿತಿಗಳು ಮತ್ತು ಕಲಾವಿದರನ್ನು ಆಮಂತ್ರಿಸಿ ಅವರ ಪ್ರತಿಭೆಗಳನ್ನು ಸ್ಥಳೀಯರು ಅನುಭವಿಸಲು ಕಾರಣಕರ್ತರಾಗಿದ್ದಾರೆ. 1963ರಲ್ಲಿ ಕರ್ನಾಟಕದಿಂದ ವಲಸೆ ಬಂದ ಇವರ ಕನ್ನಡ ಅಭಿಮಾನ ಇಂದಿಗೂ ಅಷ್ಟೇ ಹಸಿರಾಗಿದೆ.
ಶ್ರೀವಿಜಯ ಶ್ರೀನಿವಾಸ್ : ಇವರು 7ನೇ ಅಕ್ಕ ಕನ್ನಡ ವಿಶ್ವ ಸಮ್ಮೇಳನದ ಸಹ ಸಂಚಾಲಕರಾಗಿ ಅತಿ ಉತ್ಸಾಹದಿಂದ, ಹುರುಪಿನಿಂದ ಕೆಲಸ ಮಾಡುತ್ತಿದ್ದಾರೆ. ಇವರು ಕಳೆದ 18 ವರ್ಷಗಳಿಂದ ಅಟ್ಲಾಂಟಾದಲ್ಲಿ, ಅವರ ಪತ್ನಿ ಶ್ರೀಮತಿ ಲತಾ ಮತ್ತು ಇಬ್ಬರು ಮಕ್ಕಳೊಂದಿಗೆ ವಾಸವಾಗಿರುತ್ತಾರೆ.
ಇವರು ಬೆಂಗಳೂರಿನಲ್ಲಿ ಯಂತ್ರಶಾಸ್ತ್ರದಲ್ಲಿ ಪದವಿ ಪಡೆದು, ಅಮೆರಿಕಾದಲ್ಲಿ ಯಂತ್ರಶಾಸ್ತ್ರ ಮತ್ತು ವ್ಯವಹಾರದಲ್ಲಿ ಉನ್ನತ ಪದವೀಧರರಾಗಿದ್ದಾರೆ. ಅನೇಕ ಸಂಸ್ಥೆಗಳಿಗೆ ಸ್ವಯಂ ಸೇವಕರಾಗಿ ದುಡಿಯುತ್ತಿದ್ದಾರೆ. ಇವರ ತಂತ್ರಜ್ನಾನ ಮತ್ತು ವಿಶ್ವಜಾಲದ ಅನುಭವ ಸಮ್ಮೇಳನದ ಆಯೋಜನೆಗೆ ಬಹಳ ಉಪಯೋಗವಾಗಿದೆ. ಇವರು ತಮ್ಮದೇ ಆದ ಕಂಪ್ಯೂಟರ್ ಸಂಸ್ಥೆಯೊಂದನ್ನು ಸ್ಥಾಪಿಸಿ ಯಶಸ್ವಿಯಾಗಿ ನಡೆಸಿಕೊಂಡು ಹೋಗುತ್ತಿದ್ದಾರೆ.