ಕನ್ನಡನಾಡಿನ ಚಿನ್ನದ ರಾಜ - ಅಮೋಘವರ್ಷ ನೃಪತುಂಗ
ಅಮೋಘವರ್ಷ ನೃಪತುಂಗ! - ಈ ಹೆಸರಿನಲ್ಲಿಯೇ ಕನ್ನಡಿಗರ ಮೈನವಿರೇಳಿಸುವ ದಿವ್ಯ ಶಕ್ತಿಯಿದೆ! ಕನ್ನಡಿಗರ ಸಾಹಸ, ಸಾಮರ್ಥ್ಯ, ಸಹನೆ, ಸೌಹಾರ್ದ, ಸಂಸ್ಕೃತಿಗೆ ಸಂಕೇತವಾಗಿ ನಿಲ್ಲುತ್ತದೆ ಈ ಧೀರ ದೊರೆಯ ಸುಂದರ ಹೆಸರು! ಈತನ ಕನ್ನಡ ಪ್ರೇಮ ಅಪಾರ. ತರಾಸು ಅವರು ಚಿತ್ರದುರ್ಗದ ಇತಿಹಾಸವನ್ನು ತಮ್ಮ ಕಾದಂಬರಿಗಳಿಂದ ಕಣ್ಣೆದುರು ನಿಲ್ಲಿಸಿದಂತೆ, ಕನ್ನಡ ಮಣ್ಣಿನ ಹೆಮ್ಮೆಯ ಮಗನಾದ "ಅಮೋಘವರ್ಷ" ಬಾಳಿಬದುಕಿದ ಬಗೆಯನ್ನು ಯಾರಾದರೂ ಕಾದಂಬರಿಯಾಗಿಸಿದ್ದಾರೆಯೇ ಎಂದು ಕುತೂಹಲದಿಂದ ಅರಸುತ್ತಿದ್ದ ನನ್ನ ಪ್ರಯತ್ನಕ್ಕೆ ಈವರೆಗೆ ಫಲ ದೊರಕಿರಲಿಲ್ಲ. ಈ ಕುರಿತು ಯಾವುದಾದರೂ ಕಾದಂಬರಿ ಈ ಹಿಂದೆ ಬಂದಿದೆಯೇ ಇಲ್ಲವೋ ತಿಳಿಯದು. ಆದರೆ, ಹಲವಾರು ಉತ್ತಮ ನಾಟಕಗಳನ್ನು ನಿರ್ದೇಶಿಸಿ, 'ಕರ್ನಾಟಕದ ರಾಜಮನೆತನಗಳು" ಎನ್ನುವ ಲೇಖನಮಾಲೆಯನ್ನು ವಿದ್ಯಾರಣ್ಯ ಕನ್ನಡಕೂಟದ 'ಸಂಗಮ" ಪತ್ರಿಕೆಯಲ್ಲಿ ಪ್ರಕಟಿಸಿ, ಶಿಕಾಗೊ ಕನ್ನಡಿಗರೆಲ್ಲರಿಗೂ ಚಿರಪರಿಚಿತರಾಗಿರುವ ಪ್ರಕಾಶ್ ಹೇಮಾವತಿಯವರು ಆ ಬಗ್ಗೆ ಕಾದಂಬರಿಯೊಂದನ್ನು ಹೊರತರುವ ಪ್ರಯತ್ನದಲ್ಲಿದ್ದಾರೆಂದು ತಿಳಿದಾಗ ಬಹಳ ಸಂತೋಷವಾಗಿತ್ತು. ಇದೀಗ ಪ್ರಕಾಶ್ ಹೇಮಾವತಿಯವರ ಬಹುವರ್ಷಗಳ ಅಧ್ಯಯನ, ಆಶಯಗಳ ಫಲವೇ 'ಅಮೋಘವರ್ಷ" ಕಾದಂಬರಿಯ ರೂಪದಲ್ಲಿ ಹೊರಬಂದಿದೆ. ಐಬಿಎಚ್ ಪ್ರಕಾಶನದವರು ಈ ಪುಸ್ತಕವನ್ನು ಪ್ರಕಟಿಸಿದ್ದಾರೆ.
ರಾಷ್ಟ್ರಕೂಟ ಅರಸನಾದ ಮೂರನೆಯ ಗೋವಿಂದನ ಮರಣದೊಂದಿಗೆ ಪ್ರಾರಂಭವಾಗುವ ಕಾದಂಬರಿ, ನಂತರ ಹಂತಹಂತವಾಗಿ ರಾಜ್ಯದಲ್ಲೇಳುವ ಬಂಡಾಯ, ಹದಿನಾಲ್ಕು ವರ್ಷದ ಬಾಲಕ ಅಮೋಘವರ್ಷನಿಗೆ ಅನಿವಾರ್ಯವಾಗುವ ಪಟ್ಟಾಭಿಷೇಕ, ರಾಜ್ಯಾಡಳಿತ, ರಾಜ್ಯವನ್ನು ಬಲಪಡಿಸಲು ನಡೆಯುವ ಕಾಳಗ, ಯುವರಾಜನ ವಿವಾಹ.... ಹೀಗೆ ಹಂತಹಂತವಾಗಿ ನೃಪತುಂಗ ದೊರೆಯ ಧೀರೋದಾತ್ತ ವ್ಯಕ್ತಿತ್ವವನ್ನು ನಮ್ಮ ಕಣ್ಣುಗಳೆದುರು ಕಟೆಯುತ್ತಾ ಹೋಗುತ್ತದೆ. ಪ್ರತಿ ಅಧ್ಯಾಯಕ್ಕೂ ಸೂಕ್ತ ಹೆಸರು ನೀಡಿ ಮಾಡಿರುವ ವಿಂಗಡಣೆ ನಮ್ಮ ಓದನ್ನು ಸುಗಮಗೊಳಿಸುತ್ತದೆ. ಕಾಲದ ಕರಿತೆರೆಯಲ್ಲಿ ಮುಚ್ಚಿಹೋಗಿರುವ ಇತಿಹಾಸವನ್ನು ಕಾಗದಕ್ಕಿಳಿಸುವುದು ಬಹಳ ಕಷ್ಟದ ಕೆಲಸ. ಎಂದೋ ನಡೆದ ಘಟನೆಗಳನ್ನು ಕಲ್ಪನೆಯ ಎಳೆಯಲ್ಲಿ ಸೇರಿಸಿ, ಹೆಣೆಯಬೇಕಾಗುತ್ತದೆ. ಸಿಕ್ಕಿಲ್ಲದ, ತೊಡರಿಲ್ಲದ ಸುಸೂತ್ರ ಓದನ್ನು ಓದುಗರಿಗೆ ಒದಗಿಸುವ ಚಾತುರ್ಯ ಲೇಖಕನಿಗೆ ಇರಬೇಕಾಗುತ್ತದೆ. ಕೆಲವೊಮ್ಮೆ ಕಲ್ಪನೆಗಳ ಬಣ್ಣವೇ ಹೆಚ್ಚಾಗಿ ಸೇರಿ ನೈಜ ಚಿತ್ರವೇ ಮಸುಕಾಗುವ ಸಾಧ್ಯತೆಗಳಿರುತ್ತವೆ. ಆದರೆ ಈ ಕಾದಂಬರಿಯಲ್ಲಿ ಕಲ್ಪನೆಗಿಂತ ಇತಿಹಾಸಕ್ಕೆ ಒತ್ತುಕೊಟ್ಟಿರುವುದನ್ನು ಗಮನಿಸಬಹುದು. [ಓದಲೇಬೇಕಾದ ಕಾದಂಬರಿ...]