ಸ್ವಿಟ್ಜರಲಂಡಲ್ಲಿ ಭೂತಕೋಲ ಮುಖವಾಡ ಪ್ರಾತ್ಯಕ್ಷಿಕೆ
ರಾಜೇಶ್ ಅವರು ತಮ್ಮ ಭೇಟಿಯ ಸಂದರ್ಭದಲ್ಲಿ ಕರ್ಣಾಟಕದ ಕರಾವಳಿಯ 'ಭೂತ ಕೋಲ'ದ ಮುಖವಾಡಗಳು ಯಾವ ರೀತಿಯಲ್ಲಿ ಕಂಚಿನಿಂದ ತಯಾರಿಸಲ್ಪಡುತ್ತವೆ ಎಂಬುದನ್ನು ಹಂತ ಹಂತವಾಗಿ ತಯಾರಿಸಿ ಕಲಾ ಪ್ರದರ್ಶನದ ವೀಕ್ಷಕರಿಗೆ ಸವಿವರವಾಗಿ ವಿವರಿಸಲಿದ್ದಾರೆ. ಇದೇ ಮೊದಲ ಬಾರಿಗೆ 'ಭೂತ ಕೋಲ'ದ ಮುಖವಾಡದ ತಯಾರಿಕೆಯ ಬಗ್ಗೆ ಇಂತಹ ಒಂದು ಪ್ರಾತ್ಯಕ್ಷತೆಯು ಈ ಮ್ಯೂಸಿಯಂ ನಲ್ಲಿ ನಡೆಯಲಿದೆ.
ರಾಜೇಶ್ ಅವರು ಕಂಚಿನಿಂದ ತಯಾರಿಸಿದ ಹಲವಾರು ಭೂತದ ಮುಖವಾಡಗಳು, ವೇಷ ಭೂಷಣಗಳು ಇಲ್ಲಿ ಪ್ರದರ್ಶಿಸಲ್ಪಡುತ್ತಿವೆ. ಇನ್ನೊಂದು ವಿಶೇಷವೆಂದರೆ ಈ ಮ್ಯೂಸಿಯಂ ಈಗಾಗಲೇ ಭೂತದ ಕೋಲದ ಬಹಳ ವರ್ಷಗಳ ಹಿಂದಿನ ಹಲವಾರು ಕಂಚಿನ ಮುಖವಾಡಗಳು, ಭೂತದ ಖಡ್ಗಗಳು, ಕಾಲಿನ ಬಳೆ ಮತ್ತು ಗಂಟೆಗಳ ಸಂಗ್ರಹವನ್ನು ಹೊಂದಿದೆ. ಅವುಗಳ ಪ್ರದರ್ಶನವೂ ಸಹ ಈ ಸಂದರ್ಭದಲ್ಲಿ ನಡೆಯಲಿವೆ.
ಅಂತಾರಾಷ್ಟ್ರೀಯ ಮಟ್ಟದ ಖ್ಯಾತಿ ಗಳಿಸಿರುವ ರಾಜೇಶ್ ಅವರು ಉಡುಪಿಯಲ್ಲಿ ಅವರ ತಂದೆ ಟಿ. ರಾಘವಾಚಾರ್ಯ ಅವರ ಮಾರ್ಗದರ್ಶನದಲ್ಲಿ 'ಕೌಶಲ' ಲೋಹಶಿಲ್ಪ ಮಳಿಗೆ ಮತ್ತು ಕಲಾಕೇಂದ್ರವನ್ನು ನಡೆಸಿಕೊಂಡು ಬರುತ್ತಿದ್ದಾರೆ. ಮಣಿಪಾಲ್ ಇನ್ ಸ್ಟಿಟ್ಯೂಟ್ ಆಫ್ ಜುವೆಲ್ಲರಿ ಡಿಸೈನ್ ಅಂಡ್ ಮ್ಯಾನೇಜ್ ಮೆಂಟ್ ಶಿಕ್ಷಣ ಸಂಸ್ಥೆ ಸೇರಿದಂತೆ ಅನೇಕ ಕಡೆಗಳಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿ ತಮ್ಮ ಕೌಶಲವನ್ನು ಧಾರೆಯೆರೆದಿದ್ದಾರೆ.