ಯಾದಗಿರಿಯಲ್ಲಿ ಚಿರತೆ ಹಾವಳಿ, ಸುತ್ತಲಿನ ಗ್ರಾಮಸ್ಥರಲ್ಲಿ ಆತಂಕ
ಯಾದಗಿರಿ, ನವೆಂಬರ್ 04: ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ರಾಯನಗೋಳ, ಹಣಮಸಾಗರ, ಹುಲ್ಲಿಕೇರಾ ಸೇರಿದಂತೆ ಸುಮಾರು ಎಂಟತ್ತು ಗ್ರಾಮಗಳ ಸುತ್ತಮುತ್ತ ಚಿರತೆ ಹಾವಳಿ ಹೆಚ್ಚಾಗಿದೆ.
ಯಾದಗಿರಿಯ ಗಡಿ ಭಾಗಗಳಲ್ಲಿ ಕನ್ನಡದ ಸ್ಥಿತಿಗತಿ ಅಯೋಮಯ
ಕಣ್ಣಾಡಿಸಿದಷ್ಟು ಗುಡ್ಡ-ಗಾಡು ಪ್ರದೇಶವಿರೋದ್ರಿಂದ ಚಿರತೆಗಳು ಆಗಾಗ ಪ್ರತ್ಯಕ್ಷವಾಗುತ್ತಿವೆ. ಇತ್ತೀಚೆಗೆ ಚಿರತೆ ಪ್ರತ್ಯಕ್ಷವಾಗಿದ್ದು, ಸುತ್ತಲಿನ ಗ್ರಾಮಸ್ಥರಲ್ಲಿ ಆಂತಕ ಮನೆ ಮಾಡಿದೆ. ಚಿರತೆ ಸೆರೆ ಹಿಡಿಯಲು ಎಷ್ಟೇ ಪ್ರಯತ್ನ ಪಟ್ಟರೂ ಸಾಧ್ಯವಾಗುತ್ತಿಲ್ಲ. ಹೀಗಾಗಿ ಸಾರ್ವಜನಿಕರು ಕೂಡ ಎಚ್ಚರಿಕೆಯಿಂದ ಇರುವುದು ಒಳಿತು.
ಕಳೆದ ಎರಡ್ಮೂರು ವರ್ಷಗಳಿಂದ ಚಿರೆತಗಳು ಪ್ರತ್ಯಕ್ಷವಾಗುತ್ತಿರುತ್ತವೆ. ಕಳೆದ ಒಂದು ವರ್ಷದ ಅವಧಿಯಲ್ಲಿ ಚಿರತೆ ಹಾವಳಿ ಹೆಚ್ಚಾಗಿದೆ. ಇತ್ತೀಚೆಗೆ ರಾಯನಗೋಳ ಗ್ರಾಮದಲ್ಲಿ ನಾಯಿ ಮೇಲೆ ದಾಳಿ ಮಾಡಿತ್ತು.
ಇದಕ್ಕೂ ಮೊದಲು ಜಮೀನಿನಲ್ಲಿದ್ದ ಹೋರಿಯನ್ನ ತಿಂದು ಹಾಕಿತ್ತು. ಅಲ್ಲದೇ ಚಿರತೆಯ ಹೆಜ್ಜೆ ಗುರುತುಗಳು ಪತ್ತೆಯಾಗಿವೆ. ಇದರಿಂದ ಗ್ರಾಮಸ್ಥರಲ್ಲಿ ಚಿರತೆ ಭೀತಿ ಕಾಡುತ್ತಿದೆ.
ಸುರಪುರ ವಲಯದ ರಾಯನಗೋಳ ಸುತ್ತಮುತ್ತ ಸುಮಾರು ಸಾವಿರ ಪ್ರದೇಶದಲ್ಲಿ ಗುಡ್ಡಗಾಡು ಪ್ರದೇಶವಿದೆ. ಗುಡ್ಡಗಳ ನಡುವೆ ಗವಿಗಳಿದ್ದು ಚಿರತೆ ವಾಸಿಸಲು ಅನುಕೂಲವಿದೆ.
ದಾಳಿ ಮತ್ತು ಹೆಜ್ಜೆ ಗುರುತು ಪತ್ತೆಯಾದ ಮೇಲೆ ಚಿರತೆ ಸೆರೆ ಹಿಡಿಯಲು ಅರಣ್ಯ ಇಲಾಖೆಯವರು ಪ್ರಯತ್ನ ಮಾಡುತ್ತಿದ್ದಾರೆ. ಚಿರತೆ ಸೆರೆಗೆ ಅಲ್ಲಲ್ಲಿ ಬೋನ್ಗಳನ್ನ ಇಡಲಾಗಿದೆ. ಆದರೆ, ಚಿರತೆ ಮಾತ್ರ ಸಿಗುತ್ತಿಲ್ಲ. ಇದರಿಂದ ಕುರಿ, ದನಗಾಯಿಗಳು ಬೆಟ್ಟದ ಕಡೆ ಹೋಗುವುದನ್ನ ಬಿಡಬೇಕಾದ ಪರಿಸ್ಥಿತಿ ಎದುರಾಗಿದೆ.