'ನಾವು ಯಾರಿಗೂ ಹೆದರಲ್ಲ,’ ಉಡುಪಿ ಡಿಸಿ ಪ್ರಿಯಾಂಕಾ ಖಡಕ್ ಮಾತು
"ನಾವು ಯಾರಿಗೂ ಹೆದರಲ್ಲ. ಜಿಲ್ಲೆಯಲ್ಲಿ ಮರಳು ದಂಧೆ ಅವ್ಯಾಹತವಾಗಿ ನಡೆಯುತ್ತಿದೆ. ಈ ದಂಧೆಯನ್ನ ಹತ್ತಿಕ್ಕುವುದು ನಮ್ಮ ಗುರಿ,” ಅಂತ ಉಡುಪಿ ಡಿಸಿ ಪ್ರಿಯಾಂಕಾ ಅಕ್ರಮ ಮರಳುಗಾರಿಕೆಯಲ್ಲಿ ತೊಡಗಿರುವವರ ವಿರುದ್ಧ ಮತ್ತೊಮ್ಮೆ ಗುಡುಗಿದ್ದಾರೆ.
ಉಡುಪಿ, ಎಪ್ರಿಲ್ 5 : ಮರುಳು ಮಾಫಿಯಾದವರ ಹಲ್ಲೆಯಿಂದ ಪಾರಾದ ಉಡುಪಿ ಜಿಲ್ಲೆಯ ನೂತನ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಅಕ್ರಮ ಮರಳುಗಾರಿಕೆಯಲ್ಲಿ ತೊಡಗಿರುವವರ ವಿರುದ್ಧ ಮತ್ತೊಮ್ಮೆ ಗುಡುಗಿದ್ದಾರೆ.
"ನಾವು ಯಾರಿಗೂ ಹೆದರಲ್ಲ. ಉಡುಪಿ ಜಿಲ್ಲೆಯಲ್ಲಿ ಮರಳು ದಂಧೆ ಅವ್ಯಾಹತವಾಗಿ ನಡೆಯುತ್ತಿದೆ. ಈ ದಂಧೆಯನ್ನ ಹತ್ತಿಕ್ಕುವುದು ನಮ್ಮ ಗುರಿ. ಮರಳು ದಂಧೆಕೋರರು ಕಾನೂನಿಗೆ, ವ್ಯವಸ್ಥೆಗೆ ಬೆಲೆ ಕೊಡಲ್ಲ. ನಾವು ದಾಳಿ ನಡೆಸಿದ ವೇಳೆ ದಂಧೆಕೋರರು ತೋರಿಸಿದ ಕ್ರೂರತನ ನೋಡಿ ದಂಗಾಗಿದ್ದೇವೆ. ಏನೇ ಆದರೂ ನಮ್ಮ ದಾಳಿ ನಿರಂತರ. ಉಡುಪಿ ಜಿಲ್ಲೆಯಲ್ಲಿ ಎಲ್ಲೆಲ್ಲಿ ಮರಳು ದಂಧೆ ಇದೆಯೋ, ಅಲ್ಲಿ ನಾವು ದಾಳಿ ಮಾಡುತ್ತೇವೆ," ಎಂದು ಖಡಕ್ ಆಗಿ ಹೇಳಿದ್ದಾರೆ.[ಮರಳು ಮಾಫಿಯಾ ಅಡ್ಡೆ ಮೇಲೆ ದಾಳಿ, ಉಡುಪಿ ಡಿಸಿ ಕೊಲೆ ಯತ್ನ]
ಕಳೆದ ಭಾನುವಾರ ಮಧ್ಯರಾತ್ರಿ ಮರಳು ದಂಧೆ ನಡೆಯುತ್ತಿದ್ದ ಸ್ಥಳಕ್ಕೆ ದಿಢೀರ್ ದಾಳಿ ನಡೆಸಿದ್ದ ಪ್ರಿಯಾಂಕಾ ಮತ್ತು ಕುಂದಾಪುರ ಸಹಾಯಕ ಆಯುಕ್ತೆ ಶಿಲ್ಪಾ ನಾಗ್ ಹಾಗೂ ಗ್ರಾಮ ಲೆಕ್ಕಿಗರ ಮೇಲೆ ಕೊಲೆ ಯತ್ನ ನಡೆದಿತ್ತು. ಇದರ ಬೆನ್ನಲ್ಲೇ ಆರೋಪಿಗಳನ್ನ ಬಂಧಿಸಲಾಗಿತ್ತು. ಜತೆಗೆ ಸರ್ಕಾರಿ ನೌಕರರು ಮಂಗಳವಾರ ಸಾಮೂಹಿಕ ರಜೆ ಹಾಕಿ ಪ್ರತಿಭಟಿಸಿ ಇವರಿಗೆ ಬೆಂಬಲ ನೀಡಿದ್ದರು.
ಇದೇ ವೇಳೆ ಈ ಕುರಿತು ಮಾತನಾಡಿದ ಉಡುಪಿ ಜಿಲ್ಲಾ ನಾಗರಿಕಾ ಸಮಿತಿಯ ಕಾರ್ಯಕರ್ತ ನಿತ್ಯಾನಂದ ವೊಲಕಡ್, ' ಈ ದಾಳಿ ಹಿಂದೆ ರಾಜಕೀಯ ಕೈವಾಡ ಇದೆ. ಶೀಘ್ರವೇ ರಾಜ್ಯ ಸರ್ಕಾರ ತನಿಖೆ ನಡೆಸಿ ದಂಧೆ ಹಿಂದಿನ ಕಾಣದ ಕೈಗಳನ್ನು ಪತ್ತೆ ಹಚ್ಚಬೇಕಾಗಿದೆ' ಅಂದರು. ಒಟ್ಟಿನಲ್ಲಿ ಮರಳು ದಂಧೆ ವಿರುದ್ಧ ಸಮರ ಸಾರಿರುವ ಉಡುಪಿ ಡಿಸಿಯವರಿಗೆ ಜನರು ಸಹ ಬೆಂಬಲ ನೀಡಿದ್ದಾರೆ.[ಉಡುಪಿ ಡಿಸಿ, ಎಸಿ ಕೊಲೆ ಯತ್ನ, ಬಂಧಿತರ ಸಂಖ್ಯೆ 13ಕ್ಕೆ ಏರಿಕೆ]
"ಜಿಲ್ಲಾಧಿಕಾರಿ-ಎಸಿ ಕಾರ್ಯ ಮೆಚ್ಚತ್ತಕ್ಕದ್ದು" ಪ್ರಮೋದ್ ಮಧ್ವರಾಜ್
ಇನ್ನು ಇದೇ ವೇಳೆ ಅಕ್ರಮ ಮರಳು ದಂಧೆ ವಿರುದ್ಧ ದಾಳಿಗೆ ಮುಂದಾದ ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಹಾಗೂ ಎಸಿ ಶಿಲ್ಪಾ ನಾಗ್ ಯತ್ನವನ್ನು ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಶ್ಲಾಘಿಸಿದ್ದಾರೆ.
ಉಡುಪಿ ಜಿಲ್ಲಾಧಿಕಾರಿಯವರ ಮೇಲೆ ನಡೆದ ಹಲ್ಲೆಯನ್ನು ನಾನು ಖಂಡಿಸುತ್ತೇನೆ, "ಜಿಲ್ಲಾಧಿಕಾರಿ, ಸಹಾಯಕ ಕಮಿಷನರ್ ಇಬ್ಬರೇ ತೋರಿದ ಧೈರ್ಯ ಮೆಚ್ಚತಕ್ಕದ್ದು. ಆರೋಪಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಲು ಎಸ್ಪಿಯವರಿಗೆ ಸೂಚನೆ ನೀಡಿದ್ದೇನೆ," ಎಂದು ಗುಂಡ್ಲುಪೇಟೆ ಉಪಚುನಾವಣೆಯಲ್ಲಿ ಪ್ರಚಾರದಲ್ಲಿರುವ ಉಡುಪಿಯ ಸಚಿವ ಪ್ರಮೋದ್ ಮಧ್ವರಾಜ್ ತಿಳಿಸಿದ್ದಾರೆ.
"ನಮ್ಮ ಜಿಲ್ಲೆಯ ಮರಳು ಹೊರಜಿಲ್ಲೆಗಳಿಗೆ ಹೋಗಬಾರದು ಎಂದು ಜಿಲ್ಲಾಧಿಕಾರಿ, ಸಹಾಯಕ ಕಮಿಷನರ್ ಅವರಿಗೆ ಸ್ಪಷ್ಟ ಸೂಚನೆ ನೀಡಿದ್ದೆ. ನನ್ನದೇ ಆದೇಶದ ಪ್ರಕಾರ ಚೆಕ್ಪೋಸ್ಟ್ ಗಳನ್ನೂ ನಿರ್ಮಿಸಿದ್ದರು. ಕೆಳಹಂತದ ಅಧಿಕಾರಿಗಳ ಮೇಲೆ ವಿಶ್ವಾಸವಿಲ್ಲದ ಕಾರಣ ಜಿಲ್ಲಾಧಿಕಾರಿ, ಸಹಾಯಕ ಕಮಿಷನರ್ ಸ್ವತಃ ಕಾರ್ಯಾಚರಣೆ ನಡೆಸಿದರು. ತಪ್ಪಿತಸ್ಥ ಅಧಿಕಾರಿಗಳ ಮೇಲೂ ಕ್ರಮ ಕೈಗೊಳ್ಳಲು ಸೂಚನೆ ನೀಡಿದ್ದೇನೆ," ಎಂದು ತಿಳಿಸಿದರು.
"ಡಿಸಿ, ಎಸಿ ಧೈರ್ಯ, ಪ್ರಾಮಾಣಿಕತೆ ಶ್ಲಾಘನೀಯವಾದರೂ ಇಂತಹ ಸಂದರ್ಭ ಪೂರ್ವಸಿದ್ಧತೆ ಮಾಡಿಕೊಳ್ಳಬೇಕು ಎಂದು ನನ್ನ ಸಲಹೆ," ಎಂದರು ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.