ಎಚ್ಚರಿಕೆ ಮೀರಿದ್ದು ಪ್ರವೀಣ್ ಪೂಜಾರಿ ಜೀವಕ್ಕೆ ಎರವಾಯಿತೆ?
ಉಡುಪಿ, ಆಗಸ್ಟ್ 20: 'ಕೋಳಿ ಮಾಂಸ ವ್ಯಾಪಾರ, ಅಂಗಡಿ ವ್ಯವಹಾರ ಉಂಟಲ್ಲ ಅಷ್ಟೇ ಸಾಕು. ಅತಿಯಾಸೆಗೆ ರಾತ್ರಿ ದನ ಸಾಗಿಸುವ ತಂಟೆಗೆ ಹೋಗಬೇಡ' -ಹೀಗೆಂದು ಹೆಬ್ರಿ ಸಂತೆ ಕಟ್ಟೆಯ ಕೆಂಜೂರು ಪರಿಸರದ ಹಿಂದೂ ಜಾಗರಣ ವೇದಿಕೆ ಪ್ರಮುಖರು ಕೊಲೆಯಾದ ಪ್ರವೀಣ್ ಪೂಜಾರಿಗೆ ಈ ಹಿಂದೆ ನೀಡಿದ್ದ ಎಚ್ಚರಿಕೆ ಮೀರಿದ್ದೇ ಜೀವಕ್ಕೆ ಎರವಾಯಿತೇ?
ಕೂಡಿದ ಮತ್ತಿನಲ್ಲಿದ್ದ 10 ಆರೋಪಿಗಳು, ಪ್ರವೀಣ್ ಪೂಜಾರಿಯನ್ನು ತಮ್ಮ ವಶಕ್ಕೆ ತೆಗೆದುಕೊಂಡು ತೀವ್ರ ವಿಚಾರಣೆ ನಡೆಸಿದ್ದರು. ನೀಡಿದ ಎಚ್ಚರಿಕೆಯನ್ನು ಪಾಲಿಸದ ಸಿಟ್ಟಿನ ಬೆಂಕಿಗೆ ಮದ್ಯದ ಅಮಲು ಸೇರಿ ಅವಾಂತರಕ್ಕೆ ಕಾರಣವಾಯಿತು.[ದನ ಸಾಗಿಸುತ್ತಿದ್ದ ಬಿಜೆಪಿ ಕಾರ್ಯಕರ್ತನ ಕೊಲೆ]
ಅದೇ ಬಿಸಿಯಲ್ಲಿ ಪ್ರವೀಣ್ ಗೆ ಈ ಬಾರಿ ಸೂಕ್ತ ಪಾಠ ಕಲಿಸಲು ನಿರ್ಧರಿಸಿದ ಆರೋಪಿಗಳು, ಅನ್ಯಕೋಮಿನವರಿಗೆ ಗೋವನ್ನು ಅಕ್ರಮವಾಗಿ ಸಾಗಿಸುತ್ತಿರುವುದಕ್ಕೆ ರಾಜಕೀಯ ದ್ವೇಷವನ್ನು ತೀರಿಸಿದ್ದಾರೆ. ಆದರೆ ಇವೆಲ್ಲವೂ ಪ್ರವೀಣ್ ಸಾವಿನಲ್ಲಿ ಪರ್ಯವಸಾನ ಆಗಿದ್ದರಿಂದ 18 ಯುವಕರು ಜೈಲು ಪಾಲಾಗಿದ್ದಾರೆ.
ಬಿಜೆಪಿ ಕೆಂಜೂರು ಸ್ಥಾನೀಯ ಸಮಿತಿ ಅಧ್ಯಕ್ಷನಾಗಿದ್ದ ಪ್ರವೀಣ್ ಹಲವು ಚುನಾವಣೆಗಳಲ್ಲಿ ಬಿಜೆಪಿ ಪರ ಪ್ರಚಾರ ನಡೆಸಿದ್ದ. ಕೆಂಜೂರಿನ ರಸ್ತೆ ಬದಿಯ ಮನೆಯಲ್ಲೇ ಜೀನಸು ಅಂಗಡಿ, ವಾಹನದಲ್ಲಿ ಕೋಳಿ ತರಿಸಿ ತಂದೆಯ ನೆರವಿನಿಂದ ಸ್ವಚ್ಛಗೊಳಿಸಿ ಮಾಂಸ ಮಾರುತ್ತಿದ್ದ ಪ್ರವೀಣ್, ಕಟ್ಟಿಂಗ್ ಮೆಷಿನ್ ಹಾಕಲು ಉದ್ದೇಶಿಸಿದ್ದ. ಶೇಂದಿ ಮಾರಾಟದಲ್ಲೂ ತೊಡಗಿದ್ದ.[ಗೋವು ಸಾಗಾಟ ವಿವಾದ, ದಕ್ಷಿಣ ಕನ್ನಡದ ಹಿಂದಿನ ಘಟನೆಗಳು]
ಅಮಾನುಷ ಹಲ್ಲೆಗೆ ಸಾಕ್ಷಿ: ಹೃದಯ, ಯಕೃತ್, ಕಿಡ್ನಿಯೇ ಒಡೆದು ಹೋಗಿದೆ. ಇದು ಹೆಬ್ರಿ ಕೆಂಜುರಿನ ಪ್ರವೀಣ್ ಪೂಜಾರಿ ಶವದ ಮರಣೋತ್ತರ ಪರೀಕ್ಷೆ ನಡೆಸಿದ ಮಣಿಪಾಲ ಕೆಎಂಸಿ ವೈದ್ಯರ ನೋವಿನ ನುಡಿಗಳು.