ಗೋಹತ್ಯೆ ನಿಷೇಧ ಕಾಯ್ದೆ ಬಗ್ಗೆ ಪೇಜಾವರ ಶ್ರೀ ಹೇಳಿದ್ದಿಷ್ಟು...
ಉಡುಪಿ, ಮೇ 27: ದೇಶಾದ್ಯಂತ ಗೋ ಹತ್ಯೆ ನಿಷೇಧದ ಕಾನೂನು ಜಾರಿಗೆ ಮುಂದಾಗಿರುವ ಕೇಂದ್ರ ಸರಕಾರದ ಕ್ರಮವನ್ನು ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿ ಸ್ವಾಗತಿಸಿದ್ದಾರೆ. ಈ ಬಗ್ಗೆ ಒನ್ ಇಂಡಿಯಾ ಕನ್ನಡದ ಜತೆಗೆ ಮಾತನಾಡಿದ ಅವರು, ಸರಕಾರ ಸರಿಯಾದ ರೀತಿಯಲ್ಲಿ ಕಾನೂನು ಜಾರಿ ಮಾಡಬೇಕು ಎಂದು ಹೇಳಿದರು.
ಆದರೆ, ಯಾರೂ ಕಾನೂನು ಕೈಗೆತ್ತಿಕೊಳ್ಳಬಾರದು. ಪೂರ್ವಾಪರ ತಿಳಿಯದಂತೆ ನಿರಪರಾಧಿಗಳ ಹತ್ಯೆ ನಡೆಯಬಾರದು ಎಂದರು. ಕೆಲವು ಯುವಕರು ಆವೇಶದಿಂದ ಕಾನೂನು ಕೈಗೆತ್ತಿಕೊಂಡು ಹಲ್ಲೆ, ಕೊಲೆ ಮಾಡುವ ಮಟ್ಟಕ್ಕೆ ಹೋಗುತ್ತಾರೆ. ಆದ್ದರಿಂದ ಕಾನೂನು ದುರುಪಯೋಗ ಆಗದ ರೀತಿಯಲ್ಲಿ ಸರಕಾರ ಎಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದರು.[ಗೋಹತ್ಯೆ ನಿಷೇಧದ ವಿರುದ್ಧ ಗೋಮಾಂಸ ಭಕ್ಷಣೆ ಉತ್ಸವ]
ಕೇಂದ್ರ ಸರಕಾರದ ಗೋ ಹತ್ಯೆ ನಿಷೇಧ ಕಾನೂನಿನ ಬಗ್ಗೆ ಅಧಿಸೂಚನೆ ಮಾಹಿತಿ ಹೊರಬಿದ್ದ ನಂತರ ಕೇರಳ ಸೇರಿದಂತೆ ನಾನಾ ರಾಜ್ಯಗಳಲ್ಲಿ ಭಾರೀ ವಿರೋಧ ವ್ಯಕ್ತವಾಗಿದೆ. ಕೇಂದ್ರ ಸರಕಾರವು ಮತ್ತೆ ಹಿಂದುತ್ವ ರಾಜಕಾರಣ ಆರಂಭಿಸಿದೆ ಎಂಬ ಆರೋಪ ಕೇಳಿಬಂದಿದೆ. ಇನ್ನು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ, ಗೋ ಹತ್ಯೆಗಿಂತಲೂ ದೊಡ್ಡ ಸಮಸ್ಯೆಗಳು ಇವೆ. ಅವುಗಳನ್ನು ಬಗೆಹರಿಸಲಿ ಎಂದಿದ್ದಾರೆ.