ಮಂಗಳೂರು: ಖುರೇಷಿ ಮೇಲಿನ ದೌರ್ಜನ್ಯ ವಿರೋಧಿಸಿ ಪ್ರತಿಭಟನೆ
ಮಂಗಳೂರು : ಖುರೇಷಿ ಮೇಲೆ ಪೊಲೀಸರು ನಡೆಸಿದ ದೌರ್ಜನ್ಯವನ್ನು ಖಂಡಿಸಿ ಎ.28ರಂದು ನಗರದ ನೆಹರೂ ಮೈದಾನದಲ್ಲಿ 'ಮಂಗಳೂರು ಚಲೋ' ಕಾರ್ಯಕ್ರಮ ನಡೆಯಲಿದ್ದು , 60 ಸಂಘಟನೆಗಳ ಸುಮಾರು 25 ಸಾವಿರ ಮಂದಿ ಇದರಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ಯುನೈಟೆಡ್ ಮುಸ್ಲಿಂ ಫ್ರಂಟ್ನ ಮುಖಂಡರು ತಿಳಿಸಿದ್ದಾರೆ .
ಖುರೇಷಿ ಮೇಲೆ ಪೊಲೀಸರು ನಡೆಸಿದ ದೌರ್ಜನ್ಯವನ್ನು ಖಂಡಿಸಿ ಮುಸ್ಲಿಮ್ ಸಂಘಟನೆಗಳು ಎ.4ರಿಂದ ಹೋರಾಟ ನಡೆಸುತ್ತಿದ್ದರೂ ಮುಸ್ಲಿಮ್ ಸಮುದಾಯವನ್ನು ಪ್ರತಿನಿಧಿಸುವ ಜನಪ್ರತಿನಿಧಿಗಳಿಂದ ಯಾವುದೇ ನ್ಯಾಯ ಸಿಕ್ಕಿಲ್ಲ ಎಂದು ಯುನೈಟೆಡ್ ಮುಸ್ಲಿಂ ಫ್ರಂಟ್ನ ಮುಖಂಡರು ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ 'ಜಸ್ಟೀಸ್ ಫಾರ್ ಖುರೈಷಿ' ಯುನೈಟೆಡ್ ಮುಸ್ಲಿಂ ಫ್ರಂಟ್ನ ಸಂಚಾಲಕ ಹಾಗೂ ಮಾಜಿ ಮೇಯರ್ ಕೆ.ಅಶ್ರಫ್, ''ಜಿಲ್ಲೆಯಲ್ಲಿ ನಾಲ್ಕು ಲಕ್ಷ ಮುಸ್ಲಿಮ್ ಮತದಾರರಿದ್ದಾರೆ. ಇವರ ಮತಗಳನ್ನು ಪಡೆದು ಈವತ್ತು ಅಧಿಕಾರ ಚಲಾಯಿಸುತ್ತಿರುವ ಮುಸ್ಲಿಮ್ ಸಮುದಾಯದ ಜನಪ್ರತಿನಿಧಿಗಳು ಸಮುದಾಯದ ಮೇಲಾಗುವ ದೌರ್ಜನ್ಯದ ಬಗ್ಗೆ ಸೊಲ್ಲೆತ್ತುತ್ತಿಲ್ಲ'' ಎಂದು ಆರೋಪಿಸಿದರು.
''ಈ ಘಟನೆಯ ಮಧ್ಯೆ ಉಡುಪಿ ಮತ್ತು ಕೊಣಾಜೆಯಲ್ಲಿ ನಡೆದ ಪ್ರಕರಣಕ್ಕೆ ಸಂಬಂಧಿಸಿ ಮೂವರು ಪೊಲೀಸರ ಅಮಾನತು ಆಗಿದೆ. ಆದರೆ, ಅಹ್ಮದ್ ಖುರೇಷಿ ಮೇಲೆ ದೌರ್ಜನ್ಯ ಎಸಗಿದ್ದಲ್ಲದೆ, ನ್ಯಾಯ ಕೇಳಿ ಪ್ರತಿಭಟನೆ ನಡೆಸಿದವರ ಮೇಲೆ ಲಾಠಿಜಾರ್ಜ್ ನಡೆಸಿದ ಪೊಲೀಸರ ಅಮಾನತು ಆಗಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ನಮಗೆ ನ್ಯಾಯದ ಭರವಸೆ ನೀಡಿದ್ದರೂ ಕೂಡ ಜಿಲ್ಲೆಯ ಆಡಳಿತಾರೂಢ ಪಕ್ಷದ ಜನಪ್ರತಿನಿಧಿಗಳು ಈ ವಿಷಯದಲ್ಲಿ ನಿರೀಕ್ಷಿತ ರೀತಿಯಲ್ಲಿ ಸ್ಪಂದಿಸಿಲ್ಲ'' ಎಂದರು.
''ಅಹ್ಮದ್ ಖುರೇಷಿಗೆ ನ್ಯಾಯ ಸಿಗಬೇಕು. ಮತ್ತೆಂದೂ ಯಾರಿಗೂ ಇಂತಹ ಅನ್ಯಾಯವಾಗಬಾರದು. ಈ ನಿಟ್ಟಿನಲ್ಲಿ ಎ.28ರಂದು ಅಪರಾಹ್ನ 3ಕ್ಕೆ ನಗರದ ನೆಹರೂ ಮೈದಾನದಲ್ಲಿ 'ಮಂಗಳೂರು ಚಲೋ' ಕಾರ್ಯಕ್ರಮ ನಡೆಯಲಿದೆ. 60 ಸಂಘಟನೆಗಳ ಸುಮಾರು 25 ಸಾವಿರ ಮಂದಿ ಇದರಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ'' ಎಂದು ಕೆ.ಅಶ್ರಫ್ ಹೇಳಿದರು.