ಮರಳುಗಾರಿಕೆ ನಿಯಂತ್ರಣ ವಿಫಲ: ಪರಿಸರವಾದಿಗಳ ಆಕ್ರೋಶ
ಉಡುಪಿ, ಫೆಬ್ರವರಿ 6: ಜಿಎನ್ ಟಿ- ನ್ಯಾಷನಲ್ ಗ್ರೀನ್ ಟ್ರಿಬ್ಯೂನಲ್ ಆದೇಶದ ಹೊರತಾಗಿಯೂ ಅಕ್ರಮ ಮರಳುಗಾರಿಕೆಯನ್ನು ತಡೆಗಟ್ಟಲು ಉಡುಪಿ ಜಿಲ್ಲಾಡಳಿತ ವಿಫಲವಾಗಿದೆ ಎಂದು ಪರಿಸರವಾದಿಗಳು ಆರೋಪಿಸಿದ್ದಾರೆ. ಅಲ್ಲದೇ ಪರಿಸರ ಹೋರಾಟಗಾರ ಶಶಿಧರ್ ಶೆಟ್ಟಿ ಜಿಎನ್ ಟಿ ಅಧ್ಯಕ್ಷರಿಗೆ ದೂರು ನೀಡಿದ್ದಾರೆ.
ಉಡುಪಿ ಜಿಲ್ಲೆಯ ಸಿ ಆರ್ ಝೆಡ್ ವ್ಯಾಪ್ತಿಯಲ್ಲಿ ಅಕ್ರಮ ಮರಳುಗಾರಿಕೆ ನಡೆಸುತ್ತಿರುವವರ ವಿರುದ್ಧ ಗ್ರಾಮಸ್ಥರು ಹಸಿರು ಪೀಠಕ್ಕೆ ದೂರು ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಚೆನ್ನೈನ ಹಸಿರು ಪೀಠವು ಜಿಲ್ಲಾಡಳಿತಕ್ಕೆ ಮೇ 17, 2016ರಂದು ಆದೇಶ ನೀಡಿ ಅಕ್ರಮ ಮರಳುಗಾರಿಕೆಗೆ ತಡೆ ಹಾಕಿತ್ತು.
ಆದರೆ ಈ ಪೀಠದ ಆದೇಶವನ್ನೂ ಧಿಕ್ಕರಿಸಿ ಹಟ್ಟಿಕುದ್ರು, ಹಟ್ಟಿಯಗಡಿ, ಆನಗಳ್ಳಿ, ತಲ್ಲೂರು, ಹೇರಿಕುದ್ರು, ಹಕ್ಲಾಡಿ, ಬೈಕೂರು, ನಾಡಗುಡ್ಡೆಯಂಗಡಿ, ಹೈನಾಡು, ಶಂಕರನಾರಾಯಣ, ಜಮ್ಮುಖಂಡಿ, ಮೊಳಹಳ್ಳಿ, ಗುಲ್ವಾಡಿ ಮತ್ತು ಸಬ್ಲಾಡಿಯಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ. ಪೀಠದ ಆದೇಶದ ಹೊರತೂ ಜಿಲ್ಲಾಡಳಿತ ಅಕ್ರಮ ಮರಳುಗಾರಿಕೆಯನ್ನು ತಡೆಗಟ್ಟಲು ಯಾವುದೇ ಕ್ರಮ ಕೈಗೊಂಡಿಲ್ಲ ಎಂಬುದು ಪರಿಸರವಾದಿಗಳ ಆಕ್ರೋಶ ವ್ಯಕ್ತಪಡಿಸಿದರು.
ಅಕ್ರಮ ಮರಳುಗಾರಿಕೆ ನಡೆಸುತ್ತಿರುವವರು ಯಾವುದೇ ಭಯವಿಲ್ಲದೇ ರಾಜಾರೋಷವಾಗಿ ಗಣಿಗಾರಿಕೆ ನಡೆಸುತ್ತಿರುವುದು ಅಧಿಕಾರಿಗಳು ಏನು ಮಾಡುತ್ತಿದ್ದಾರೆ ಅನ್ನುವುದು ಸಾರ್ವಜನಿಕರ ಪ್ರಶ್ನೆ.