800 ಕಾರ್ಮಿಕರ ಪ್ರತಿಭಟನೆಗೆ ಮಣಿದ ಸುಜ್ಲಾನ್, ನಿರ್ಧಾರ ವಾಪಸ್
ಸೋಮವಾರ ಎಂದಿನಂತೆ ಕೆಲಸಕ್ಕೆ ಬಂದಿದ್ದ ಸುಮಾರು 800 ಗುತ್ತಿಗೆ ಆಧಾರಿತ ಕಾರ್ಮಿಕರಿಗೆ ಕೆಲಸದಿಂದ ವಜಾ ಮಾಡಲಾಗಿದೆ ಎಂದು ಸುಜ್ಲಾನ್ ಕಂಪನಿಯ ಅಧಿಕಾರಿಗಳು ಹೇಳಿದ್ದರು. ಇದೀಗ ಕಂಪೆನಿ ವಿರುದ್ಧ ಹೋರಾಡಿ ಕಾರ್ಮಿಕರು ಜಯ ದಕ್ಕಿಸಿಕೊಂಡಿದ್ದಾರೆ.
ಉಡುಪಿ, ಎಪ್ರಿಲ್ 11: ಇದ್ದಕ್ಕಿದ್ದಂತೆ ಕೆಲಸದಿಂದ ವಜಾಗೊಳಿಸಿರುವುದನ್ನ ಖಂಡಿಸಿ ಎರಡು ದಿನ ಬೃಹತ್ ಪ್ರತಿಭಟನೆ ನಡೆಸಿದ್ದ ಸುಜ್ಲಾನ್ ಗುತ್ತಿಗೆ ನೌಕರರಿಗೆ ಕೊನೆಗೂ ಜಯ ಸಿಕ್ಕಿದೆ.
ಸೋಮವಾರ ಎಂದಿನಂತೆ ಕೆಲಸಕ್ಕೆ ಬಂದಿದ್ದ ವೈಎಸ್ಎಫ್, ಎಸ್ಎಸ್ಪಿಎಲ್, ಯುನಿಟೆಕ್ ಗುತ್ತಿಗೆ ಏಜೆನ್ಸಿಯ ಸುಮಾರು 800 ಗುತ್ತಿಗೆ ಆಧಾರಿತ ಕಾರ್ಮಿಕರಿಗೆ ಹಾಜರಾತಿ ಪುಸ್ತಕ ನೀಡದೇ ಕೆಲಸದಿಂದ ವಜಾ ಮಾಡಲಾಗಿದೆ ಎಂದು ಸುಜ್ಲಾನ್ ಕಂಪನಿಯ ಅಧಿಕಾರಿಗಳು ಹೇಳಿದ್ದರು.
ಇದರಿಂದ ಕಕ್ಕಾಬಿಕ್ಕಿಯಾದ ಗುತ್ತಿಗೆ ನೌಕರರು ಕಾರಣವಿಲ್ಲದೇ ಏಕಾಏಕಿ ಕೆಲಸದಿಂದ ವಜಾ ಮಾಡಿರುವುದು ಎಷ್ಟು ಸರಿ..? ಎಂದು ಪ್ರಶ್ನಿಸಿ ಅನ್ನ, ನೀರು ತ್ಯಜಿಸಿ ಪ್ರತಿಭಟನೆ ನಡೆಸಿದ್ದರು. ಮಂಗಳವಾರ ಮಧ್ಯಾಹ್ನವಂತೂ ಪ್ರತಿಭಟನಕಾರರು ಕಂಪೆನಿಗೆ ಮುತ್ತಿಗೆಯನ್ನೇ ಹಾಕಿದರು. ಹೀಗಾಗಿ ಉದ್ವಿಗ್ನ ಪರಿಸ್ಥಿತಿ ಸೃಷ್ಟಿಯಾಗಿತ್ತು. [800 ಕಾರ್ಮಿಕರಿಂದ ಸುಜ್ಲಾನ್ ಕಂಪೆನಿಗೆ ಮುತ್ತಿಗೆ, ಪರಿಸ್ಥಿತಿ ಉದ್ವಿಗ್ನ]
ಪ್ರತಿಭಟನೆಯ ಕಾವು ಜೋರಾಗುತ್ತಿದ್ದಂತೆ ಶಾಸಕ ವಿನಯ್ ಕುಮಾರ್ ಸೊರಕೆ, ಉಡುಪಿ ತಹಶೀಲ್ದಾರ್ ಮಹೇಶ್ಚಂದ್ರ, ಕಾರ್ಮಿಕ ಅಧಿಕಾರಿ ವಿಶ್ವನಾಥ್, ಉಡುಪಿ ಡಿವೈಎಸ್ಪಿ ಕುಮಾರ ಸ್ವಾಮಿ ಹಾಗೂ ಕಾಪು, ಪಡುಬಿದ್ರೆ ಪೊಲೀಸ್ ಅಧಿಕಾರಿಗಳು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದರು.
ಅಲ್ಲದೇ ಕಾರ್ಮಿಕರು, ಗುತ್ತಿಗೆದಾರರು ಹಾಗೂ ಕಂಪೆನಿಯ ಆಡಳಿತ ವರ್ಗದೊಂದಿಗೆ ಮಾತುಕತೆ ನಡೆಸಿದರು. ಈ ವೇಳೆ ಆಡಳಿತ ವರ್ಗ 'ಮಾರುಕಟ್ಟೆ ಸಮಸ್ಯೆ ಹಾಗೂ ಬೇಡಿಕೆ ಕೊರತೆಯಿಂದ ಬ್ಲೇಡ್ಗಳ ತಯಾರಿಕೆ ಸ್ಥಗಿತಗೊಂಡಿದೆ. ಹೀಗಾಗಿ ಕೆಲಸ ನೀಡಲು ಸಾಧ್ಯವಿಲ್ಲ. ಕಂಪೆನಿ ಈಗ ಸಂಪೂರ್ಣ ನಷ್ಟದಿಂದ ನಡೆಯುತ್ತಿದೆ ' ಎಂದು ಸಮಜಾಯಿಷಿ ನೀಡಿದರು. [ಉಡುಪಿ ಡಿಸಿ ಕೊಲೆ ಯತ್ನ ಕೇಸ್: ಬಂಧಿತರ ಸಂಖ್ಯೆ 20ಕ್ಕೆ ಏರಿಕೆ]
ಈ ವೇಳೆ ಮಾತಿನ ಚಕಮಕಿ ನಡೆಯಿತು. ಈ ಸಂದರ್ಭ ಮಧ್ಯಪ್ರವೇಶಿಸಿದ ಕಾಪು ಶಾಸಕ ವಿನಯ ಕುಮಾರ್ ಸೊರಕೆ , ಕಾರ್ಮಿಕರನ್ನು ಮತ್ತೆ ಕೆಲಸಕ್ಕೆ ತೆಗೆದುಕೊಳ್ಳುವಂತೆ ಆಡಳಿತ ವರ್ಗಕ್ಕೆ ತಿಳಿಸಿದರು. ಈ ಕುರಿತು ಸಭೆ ನಡೆಸಿ ಹಲವಾರು ಸಲಹೆ ಸೂಚನೆಗಳ ಬಗ್ಗೆ ಚರ್ಚಿಸಲಾಯಿತು. ಹಾಗೆಯೇ ಬಾಕಿ ಉಳಿಸಿರುವ ಬೋನಸ್, ಸಂಬಳ ನೀಡಲು ಸೂಚನೆ ನೀಡಲಾಯಿತು.