ಪೇಜಾವರ ಶ್ರೀಗಳ ಪರ್ಯಾಯಕ್ಕೆ ಯಾರು ಬರ್ತಾರೆ, ಯಾರು ಬರೋಲ್ಲ
ನಾಡಿನ ಹಿರಿಯ ಯತಿ ಉಡುಪಿ ಪೇಜಾವರ ಅಧೋಕ್ಷಜ ಮಠದ ವಿಶ್ವೇಶ್ವರತೀರ್ಥ ಶ್ರೀಗಳ ಪಂಚಮ ಪರ್ಯಾಯಕ್ಕೆ (ಜ 18ಕ್ಕೆ) ದಿನಗಣನೆ ಆರಂಭವಾಗುತ್ತಿದ್ದಂತೆಯೇ , ಈ ಬೃಹತ್ ಧಾರ್ಮಿಕ ಕಾರ್ಯಕ್ರಮಕ್ಕೆ ಯಾರು ಬರುತ್ತಾರೆ, ಯಾರು ಬರೋಲ್ಲ ಎನ್ನುವ ಚರ್ಚೆ ಈ ಭಾಗದಲ್ಲಿ ವ್ಯಾಪಕವಾಗಿ ನಡೆಯುತ್ತಿದೆ.
ಪರ್ಯಾಯ ಮಹೋತ್ಸವಕ್ಕೆ ಪೂರ್ವಭಾವಿಯಾಗಿ ನಡೆದ ಪೇಜಾವರ ಶ್ರೀಗಳ ಪುರಪ್ರವೇಶ ಅತ್ಯಂತ ಅದ್ದೂರಿಯಾಗಿ ನಡೆದಿದ್ದು, ದಕ್ಷಿಣಕನ್ನಡ ಮತ್ತು ಉಡುಪಿ ಜಿಲ್ಲೆಯ ವಿವಿಧ ಭಾಗಗಳಿಂದ ಹೊರೆಕಾಣಿಕೆಯ ಮಹಾಪೂರವೇ ಹರಿದು ಬರಲಾರಂಭಿಸಿದೆ. ಇದು ಜನವರಿ 16ರ ವರೆಗೆ ನಡೆಯಲಿದೆ. (ಉಡುಪಿಗೆ ಹೋಗಿದ್ದ ಸಿಎಂ ಕೃಷ್ಣಮಠಕ್ಕೆ ಹೋಗಲಿಲ್ಲ)
ಶ್ರೀಕೃಷ್ಣಮಠದ ಪೂಜಾಕೈಂಕರ್ಯದ ಪರ್ಯಾಯ ಮಹೋತ್ಸವಕ್ಕೆ ಈ ಎರಡು ಜಿಲ್ಲೆಗಳಿಂದ ಹೊರೆಕಾಣಿಕೆ (ತರಕಾರಿ, ದವಸಧಾನ್ಯ, ಹಣ್ಣುಹಂಪಲು ಇತ್ಯಾದಿ) ಸಲ್ಲಿಸುವುದು ಶತಮಾನಗಳಿಂದ ನಡೆದುಕೊಂಡು ಬರುತ್ತಿರುವ ಪದ್ದತಿ.
ಪ್ರಮುಖವಾಗಿ ಈ ಎರಡು ಜಿಲ್ಲೆಗಳಿಂದ ಬರುವ ಹೊರೆಕಾಣಿಕೆಯ ಪದಾರ್ಥವನ್ನು ಪರ್ಯಾಯದ ದಿನ ನಡೆಯುವ ಮಹಾ ಅನ್ನಸಂತರ್ಪಣೆಗೆ ಬಳಸಿಕೊಳ್ಳಲಾಗುತ್ತದೆ. ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಜನ ಈ ಬಾರಿ ಪರ್ಯಾಯದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. (ಕೃಷ್ಣಮಠಕ್ಕೆ ಬನ್ನಿ, ಸಿದ್ದುಗೆ ಪೇಜಾವರ ಶ್ರೀ)
ಪರ್ಯಾಯ ಕಾರ್ಯಕ್ರಮದ ರಾಯಸದಲ್ಲಿ (ಆಮಂತ್ರಣ ಪತ್ರಿಕೆ) ಯಾವುದೇ ಧಾರ್ಮಿಕ, ರಾಜಕೀಯ ಮುಖಂಡರ ಹೆಸರನ್ನು ಉಲ್ಲೇಖಿಸದೇ, ಕಾರ್ಯಕ್ರಮದ ಬಗ್ಗೆ ಮಾತ್ರ ಹೇಳಲಾಗಿದೆ.
ಪೇಜಾವರ ಮಠದ ಪ್ರಕಾರ, ಪರ್ಯಾಯಕ್ಕೆ ಯಾರು ಬರುತ್ತಾರೆ.. ಮುಂದೆ ಓದಿ..
ಪ್ರಧಾನಿ ಮೋದಿ
ಮೋದಿ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದಾಗ ವಿಶೇಷ ಆಮಂತ್ರಿತರ ಪಟ್ಟಿಯಲ್ಲಿದ್ದ ಪೇಜಾವರ ಶ್ರೀಗಳು, ಪ್ರಮಾಣವಚನ ಸಮಾರಂಭದಲ್ಲಿ ಮೊದಲ ಸಾಲಿನಲ್ಲಿ ಆಸೀನರಾಗಿದ್ದರು. ಪ್ರಧಾನಮಂತ್ರಿ ಕಾರ್ಯಾಯಲಯಕ್ಕೆ ಪರ್ಯಾಯದ ಆಮಂತ್ರಣ ಹೋಗಿದ್ದರೂ, ಮೋದಿ ಪರ್ಯಾಯ ಕಾರ್ಯಕ್ರಮದಲ್ಲಿ ಭದ್ರತಾ ಕಾರಣದಿಂದ ಭಾಗವಹಿಸುತ್ತಿಲ್ಲ ಎನ್ನುವ ಖಚಿತ ಮಾಹಿತಿಯಿದೆ.
ಮೂರು ರಾಜ್ಯಗಳ ಸಿಎಂ
ಪರ್ಯಾಯ ಮಹೋತ್ಸವಕ್ಕೆ ಆಂಧ್ರಪ್ರದೇಶದ ಸಿಎಂ ಚಂದ್ರಬಾಬು ನಾಯ್ಡು, ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾ ಮತ್ತು ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಬರುವುದು ಹೆಚ್ಚುಕಮ್ಮಿ ಖಚಿತ, ಆದರೂ ಒಂದು ವೇಳೆ ಭಾಗವಹಿಸಲು ಕೊನೇ ಕ್ಷಣದಲ್ಲಿ ಆಗದಿದ್ದರೆ ಸಿಎಂ ಪ್ರತಿನಿಧಿಯಾಗಿ ಆಯಾಯ ರಾಜ್ಯಗಳ ಪ್ರಮುಖ ಕ್ಯಾಬಿನೆಟ್ ಸಚಿವರೊಬ್ಬರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಸಿದ್ದು ಬರೋಲ್ಲ
ಉಡುಪಿಗೆ ಹಲವಾರು ಬಾರಿ ಭೇಟಿ ನೀಡಿದ್ದಾಗಲೂ ಕೃಷ್ಣಮಠಕ್ಕೆ ಭೇಟಿ ನೀಡದ ಸಿಎಂ ಸಿದ್ದರಾಮಯ್ಯ, ಕರ್ನಾಟಕದ ಪ್ರಮುಖ ಧಾರ್ಮಿಕ ಸಮಾರಂಭಗಳಲ್ಲೊಂದಾದ ಉಡುಪಿ ಪರ್ಯಾಯ ಮಹೋತ್ಸವದಲ್ಲಿ ಭಾಗವಹಿಸುವುದು ಬಹುತೇಕ ಅನುಮಾನ. ಆದರೆ ತನ್ನ ಸಚಿವ ಸಂಪುಟದ ಸದಸ್ಯರನ್ನು ಮುಖ್ಯಮಂತ್ರಿಗಳು ತನ್ನ ಪ್ರತಿನಿಧಿಯಾಗಿ ಕಳುಹಿಸಲಿದ್ದಾರೆ ಎನ್ನುತ್ತದೆ ಸಿಎಂ ಕಚೇರಿ.
ಭಾರತ ಸರಕಾರ ಮತ್ತು ಆರ್ ಎಸ್ ಎಸ್ ನಿಂದ ಯಾರು?
ಬಿಜೆಪಿಯ ಹಿರಿಯ ಮುಖಂಡ ಎಲ್ ಕೆ ಅಡ್ವಾಣಿ, ಕೇಂದ್ರ ಗೃಹಸಚಿವ ರಾಜನಾಥ್ ಸಿಂಗ್, ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ರಕ್ಷಣಾ ಸಚಿವ ಮನೋಹರ್ ಪಾರಿಕ್ಕರ್, ಮಾನವ ಸಂನ್ಮೂಲ ಖಾತೆಯ ಸ್ಮೃತಿ ಇರಾನಿ, ರೈಲ್ವೆ ಸಚಿವ ಸುರೇಶ್ ಪ್ರಭು, ಕಾನೂನು ಸಚಿವ ಸದಾನಂದ ಗೌಡ, ಪೇಜಾವರಶ್ರೀಗಳನ್ನು ಗುರುವೆಂದು ಆಂಗೀಕರಿಸಿರುವ ಕೇಂದ್ರ ಸಚಿವೆ ಉಮಾಭಾರತಿ, ಆರೋಗ್ಯ ಸಚಿವ ಡಾ. ಹರ್ಷವರ್ಧನ್, ರಸಗೂಬ್ಬರ ಖಾತೆಯ ಸಚಿವ ಅನಂತ್ ಕುಮಾರ್, ಕಾರ್ಮಿಕ ಖಾತೆಯ ಬಂಡಾರು ದತ್ತಾತ್ರೇಯ, ಪರಿಸರ ಖಾತೆಯ ಪ್ರಕಾಶ್ ಜಾವ್ಡೇಕರ್, ಆರ್ ಎಸ್ ಎಸ್ ಮುಖಂಡ ಮೋಹನ್ ಭಾಗವತರ್, ವಿಎಚ್ಪಿ ಮುಂಖಡರೂ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಾಧ್ಯತೆಯಿದೆ.
ರಾಜ್ಯದಿಂದ ಯಾರು?
ಪರ್ಯಾಯ ಸಮಿತಿಯ ಗೌರವಾಧ್ಯಕ್ಷರೂ ಆಗಿರುವ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಸೇರಿದಂತೆ, ರಾಜ್ಯದ ಕೆಲವು ಕ್ಯಾಬಿನೆಟ್ ಸಚಿವರು, ದಕ್ಷಿಣಕನ್ನಡ, ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಯ ಎಲ್ಲಾ ಸಂಸದರು ಮತ್ತು ಶಾಸಕರು ಪರ್ಯಾಯ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.