ನಗದು ರಹಿತ ಎಲ್ಪಿಜಿ ಗ್ಯಾಸ್ ವಿತರಣೆಗೆ ಸಂಸದೆ ಶೋಭಾ ಚಾಲನೆ
ಉಡುಪಿ, ಡಿಸೆಂಬರ್. 22 : ರಾಜ್ಯದಲ್ಲೇ ಪ್ರಥಮ ಬಾರಿಗೆ ನಗದು ರಹಿತ ಎಲ್ಪಿಜಿ ವಿತರಣೆಗೆ ಉಡುಪಿ- ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಬುಧವಾರ ಸಂಜೆ ಉಡುಪಿಯ ರಾಘವೇಂದ್ರ ಆಚಾರ್ಯ ಗ್ಯಾಸ್ ಏಜೆನ್ಸಿಯಲ್ಲಿ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ದೇಶದಲ್ಲಿ ಪ್ರತಿದಿನ ಸುಮಾರು 1.25 ಕೋಟಿ ಜನರು ರೈಲಿನಲ್ಲಿ ಸಂಚರಿ ಸುತ್ತಿದ್ದು, ಇವರಲ್ಲಿ ಶೇ.50ರಷ್ಟು ಜನ ಆನ್ಲೈನ್ ಮೂಲಕ ಟಿಕೆಟ್ ಖರೀದಿ ಸುತ್ತಿದ್ದಾರೆ. ನಗದುರಹಿತ ವ್ಯವಹಾರಕ್ಕೆ ದೇಶ ಸಮೀಪಿಸುತ್ತಿದೆ ಎಂಬುದಕ್ಕೆ ಇದು ಉದಾಹರಣೆಯಾಗಿದೆ.
ನಗದುರಹಿತ ವ್ಯವಹಾರದಿಂದ ಕಪ್ಪುಹಣ ಮತ್ತು ಭ್ರಷ್ಟಾಚಾರ ನಿಯಂತ್ರಣ ಸಾಧ್ಯವಿದ್ದು, ದೇಶದ ಪ್ರಗತಿಗೆ ಅನುಕೂಲ ವಾಗಲಿದೆ ಎಂದು ಅವರು ಹೇಳಿದರು.
ಜಿಲ್ಲೆಯಲ್ಲಿ 2,34,000 ಗ್ಯಾಸ್ ಸಂಪರ್ಕಗಳಿದ್ದು, ಎಲ್ಲಾ ಗ್ರಾಹಕರನ್ನು ಈ ಸೇವೆಗೆ ಒಳಪಡಿಸಬೇಕು ಮತ್ತು ಜಿಲ್ಲೆಯಲ್ಲಿನ ಎಲ್ಲಾ ಗ್ರಾಮಾಂತರ ಪ್ರದೇಶದಲ್ಲಿ ಬ್ಯಾಂಕ್ನ ಪ್ರತಿನಿಧಿ ಗಳು ಮನೆ ಮನೆಗೆ ಭೇಟಿ ನೀಡಿ ನಗದುರಹಿತ ಸೇವೆ ಉಪಯೋಗಿಸುವ ಬಗ್ಗೆ ತರಬೇತಿ ನೀಡುವಂತೆ ಈಗಾಗಲೇ ಸೂಚನೆ ನೀಡಲಾಗಿದೆ.
2017ರ ಮಾರ್ಚ್ವರೆಗೆ ಜಿಲ್ಲೆಯ ಎಲ್ಲಾ ಸರಕಾರಿ ಸೇವೆಗಳ ವ್ಯವಹಾರಗಳನ್ನು ನಗದುರಹಿತವಾಗಿ ಮತ್ತು ಜಿಲ್ಲೆಯ ಇತರೆ ಸೇವೆಗಳಲ್ಲಿ ಶೇ.50 ಹಾಗೂ 2018ರ ಮಾರ್ಚ್ ವೇಳೆಗೆ ಜಿಲ್ಲೆಯಲ್ಲಿ ಸಂಪೂರ್ಣವಾಗಿ ನಗದುರಹಿತ ವ್ಯವಹಾರ ನಡೆಸುವಂತೆ ಕ್ರವು ಕೈಗೊಳ್ಳಲಾಗುವುದು ಎಂದರು.
ಎಚ್ಪಿಸಿಎಲ್ ನ ಮಾರ್ಕೆಟಿಂಗ್ ಮ್ಯಾನೇಜರ್ ನವೀನ್ ಕುಮಾರ್ ನಗದು ರಹಿತ ವ್ಯವಹಾರ ನಿರ್ವಹಿಸುವ ಕುರಿತು ಮಾಹಿತಿ ನೀಡಿದರು.ಮಾಜಿ ಶಾಸಕ ಲಾಲಾಜಿ ಆರ್.ಮೆಂಡನ್, ಎಚ್ಪಿಸಿಎಲ್ ನ ಹಿರಿಯ ಮಾರಾಟ ಅಧಿಕಾರಿ ಮಣಿಕಂಠನ್ ಉಪಸ್ಥಿತರಿದ್ದರು.