ಕನಕ, ಸ್ವಾಭಿಮಾನದ ನಡೆ ಕಾರ್ಯಕ್ರಮಕ್ಕೆ ಉಡುಪಿ ಜಿಲ್ಲಾಡಳಿತ ಬ್ರೇಕ್
ಯುವಬ್ರಿಗೇಡ್ ವತಿಯಿಂದ ಭಾನುವಾರ ಅಕ್ಟೋಬರ್ 23ರಂದು ಉಡುಪಿ ಕೃಷ್ಣಮಠದ ಆಸುಪಾಸಿನಲ್ಲಿ ಆಯೋಜಿಸಲಾಗಿದ್ದ ಕನಕನಡೆ ಸ್ವಚ್ಛತಾ ಕಾರ್ಯಕ್ರಮಕ್ಕೆ ಜಿಲ್ಲಾಡಳಿತ ಅನುಮತಿ ನಿರಾಕರಿಸಿದೆ.
ಉಡುಪಿ, ಅ.22: ಯುವಬ್ರಿಗೇಡ್ ವತಿಯಿಂದ ಭಾನುವಾರ ಅಕ್ಟೋಬರ್ 23ರಂದು ಉಡುಪಿ ಕೃಷ್ಣಮಠದ ಆಸುಪಾಸಿನಲ್ಲಿ ಆಯೋಜಿಸಲಾಗಿದ್ದ ಕನಕನಡೆ ಸ್ವಚ್ಛತಾ ಕಾರ್ಯಕ್ರಮಕ್ಕೆ ಜಿಲ್ಲಾಡಳಿತ ಅನುಮತಿ ನಿರಾಕರಿಸಿದೆ.
ಶ್ರೀಕೃಷ್ಣಮಠದ ಆಸುಪಾಸಿನ ಬಡಗುಪೇಟೆ, ತೆಂಕುಪೇಟೆ, ಕನಕದಾಸ ರಸ್ತೆ, ವಾದಿರಾಜ ರಸ್ತೆ, ಕಲ್ಸಂಕ ಪಾರ್ಕಿಂಗ್ ಪ್ರದೇಶವನ್ನು ತಲುಪುವ ರಸ್ತೆ, ಅದಮಾರು ಮಠದ ಓಣಿಗಳಲ್ಲಿ 'ಕನಕನಡೆ' ಹೆಸರಿನಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ಯುವ ಬ್ರಿಗೇಡ್ ಆಯೋಜಿಸಿತ್ತು. (ಪೇಜಾವರ ಶ್ರೀಗಳಿಗೆ ದಿನೇಶ್ ಅಮಿನ್ ಬಹಿರಂಗ ಪತ್ರ)
ಇದಕ್ಕೆ ಪ್ರತ್ಯುತ್ತರವಾಗಿ ದಲಿತ ದಮನಿತರ ಸ್ವಾಭಿಮಾನಿ ಹೋರಾಟ ಸಮಿತಿ 'ಸ್ವಾಭಿಮಾನದ ನಡಿಗೆ' ಎನ್ನುವ ಹೆಸರಿನಲ್ಲಿ ಅದೇ ದಿನ, ಅದೇ ಹೊತ್ತಿನಲ್ಲಿ, ಅದೇ ಜಾಗದಲ್ಲಿ ಪ್ರತಿಭಟನಾ ಕಾರ್ಯಕ್ರಮ ಆಯೋಜಿಸುವ ಮೂಲಕ ತಿರುಗೇಟು ನೀಡಲು ಸಜ್ಜಾಗಿತ್ತು.
ನಗರದಲ್ಲಿ ಹಮ್ಮಿಕೊಳ್ಳಲಾಗಿದ್ದ ಈ ಎರಡು ಪ್ರತಿಭಟನೆಗಳ ಸೂಕ್ಷ್ಮತೆ ಅರಿತ ಪೊಲೀಸ್ ಇಲಾಖೆ ಮತ್ತು ಜಿಲ್ಲಾಡಳಿತ 'ಕನಕ ನಡೆ' ಕಾರ್ಯಕ್ರಮಕ್ಕೆ ಅನುಮತಿ ನಿರಾಕರಿಸಿದೆ. ಸ್ವಾಭಿಮಾನಿದ ನಡಿಗೆ ಪ್ರತಿಭಟನೆಗೆ ಈಗಾಗಲೇ ಅನುಮತಿ ಸಿಗಲಿಲ್ಲ ಎನ್ನುವ ಮಾಹಿತಿಯಿದೆ.
ಸ್ವಾಭಿಮಾನಿದ ನಡಿಗೆ ಪ್ರತಿಭಟೆನೆಯ ವೇಳೆ, ಉಡುಪಿ ಶ್ರೀಕೃಷ್ಣಮಠಕ್ಕೆ ಪ್ರತಿಭಟನಾಕಾರರು ಮುತ್ತಿಗೆ ಹಾಕುವ ಬಗ್ಗೆ ಮಾಹಿತಿ ಬಂದಿದೆ.
ಈ ಸಮಯದಲ್ಲಿ ಘರ್ಷಣೆಗಳು ಉಂಟಾಗುವ ಸಾಧ್ಯತೆಗಳಿರುವುದರಿಂದ ಸಾರ್ವಜನಿಕ ಸ್ಥಳದಲ್ಲಿ ಕಾರ್ಯಕ್ರಮಕ್ಕೆ ಅನುಮತಿ ನೀಡಬಾರದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಜಿಲ್ಲಾಡಳಿತಕ್ಕೆ ವರದಿ ನೀಡಿದ್ದರು.
ಈ ಹಿನ್ನೆಲೆಯಲ್ಲಿ ಕನಕನಡೆ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿಗಳು ಅನುಮತಿ ನಿರಾಕರಿಸಿದ್ದಾರೆ.
ಭಾನುವಾರ (ಅ.23) ಹಮ್ಮಿಕೊಂಡಿದ್ದ 'ಸ್ವಾಭಿಮಾನಿ ನಡಿಗೆ' ಹೋರಾಟವನ್ನು ಮುಂದೂಡಲಾಗಿದೆ. ಕಾನೂನು ಸುವ್ಯವಸ್ಥೆಗೆ ಧಕ್ಕೆ ಆಗಲಿದೆ ಎಂಬ ಕಾರಣ ನೀಡಿ ಜಿಲ್ಲಾಡಳಿತ ಎರಡೂ ಕಾರ್ಯಕ್ರಮಗಳಿಗೆ ಅನುಮತಿ ನಿರಾಕರಿಸಿರುವುದರಿಂದ, ಯಾರೂ ಸಹ ಉಡುಪಿಗೆ ಬರಬಾರದು ಎಂದು ಕೋಮು ಸೌಹಾರ್ದ ವೇದಿಕೆಯ ಪ್ರಧಾನ ಕಾರ್ಯದರ್ಶಿ ಕೆ.ಎಲ್. ಅಶೋಕ್ ಮನವಿ ಮಾಡಿದ್ದಾರೆ.
ಉಪವಾಸ ಕೂರುತ್ತೇನೆ: ಜಿಲ್ಲಾಡಳಿತ ಎರಡೂ ಕಾರ್ಯಕ್ರಮಕ್ಕೆ ಅನುಮತಿ ನಿರಾಕರಿಸುವ ಮುನ್ನ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದ ಪರ್ಯಾಯ ಮಠದ ಪೇಜಾವರ ಶ್ರೀಗಳು, ಎರಡೂ ಕಡೆಯವರು ಸಂಯಮದಿಂದ ವರ್ತಿಸಲಿ. ಈ ಕಾರ್ಯಕ್ರಮದಿಂದ ಶಾಂತಿಗೆ ಭಂಗವಾದರೆ, ನಾನು ಉಪವಾಸ ಕೂರಬೇಕಾಗುತ್ತದೆ ಎಂದು ಶ್ರೀಗಳು ಹೇಳಿದ್ದರು.