ಶಾಕಿಂಗ್ : ಪತಿಯನ್ನು ಯಜ್ಞಕುಂಡದಲ್ಲಿ ಹಾಕಿ ಸುಟ್ಟಳೇ ಪತ್ನಿ
ಉಡುಪಿ, ಆಗಸ್ಟ್ 8: ಹಣದ ದುರಾಸೆಗೆ ಬಿದ್ದ ಜನ, ಮನುಷ್ಯ ಸಂಬಂಧವನ್ನೇ ಮರೆತು ಪೈಶಾಚಿಕ ಕೃತ್ಯಕ್ಕೆ ಮುಂದಾಗುತ್ತಿರುವ ಬಹಳಷ್ಟು ಘಟನೆಗಳು ನಡೆಯುತ್ತಲೇ ಇವೆ. ಈ ಪಟ್ಟಿಗೆ ವಿದ್ಯಾವಂತರ ನಾಡು ಎಂದೇ ಹೆಸರಾಗಿರುವ ಉಡುಪಿಯಲ್ಲಿ ನಡೆದ ಭೀಭತ್ಸ ಘಟನೆಯೊಂದು ಸೇರ್ಪಡೆಯಾಗಿದೆ.
ನಿಗೂಢವಾಗಿ ನಾಪತ್ತೆಯಾಗಿದ್ದ ಬಹುಕೋಟಿ ಉದ್ಯಮಿ, ಸೌದಿ ಅರೇಬಿಯಾದಲ್ಲಿದ್ದ ಉಡುಪಿಯ ಭಾಸ್ಕರ್ ಶೆಟ್ಟಿ ಕೊಲೆಯಾಗಿರುವುದು ಬಹುತೇಕ ಖಚಿತವಾಗಿದ್ದು, ಈ ಸಂಬಂಧ ಭಾಸ್ಕರ್ ಶೆಟ್ಟಿಯವರ ಪತ್ನಿ ಮತ್ತು ಪುತ್ರನನ್ನು ಉಡುಪಿ ಪೊಲೀಸರು ಬಂಧಿಸಿದ್ದಾರೆ.
ಉಡುಪಿಯ ದುರ್ಗಾ ಇಂಟರ್ನ್ಯಾಷನಲ್ ಹೋಟೇಲಿನ ಮಾಲೀಕರೂ ಆಗಿರುವ ಭಾಸ್ಕರ್ ಶೆಟ್ಟಿ, ಜುಲೈ 28ರಂದು ನಗರದ ಇಂದ್ರಾಳಿ, ಹಯಗ್ರೀವ ನಗರದಲ್ಲಿರುವ ತಮ್ಮ ನಿವಾಸದಿಂದ ನಿಗೂಢವಾಗಿ ನಾಪತ್ತೆಯಾಗಿದ್ದರು.
ಆಸ್ತಿಗಾಗಿ ಸೊಸೆ ಮತ್ತು ಮೊಮ್ಮಗನೇ ತನ್ನ ಮಗನನ್ನು ಅಪಹರಿಸಿ, ಕೊಲೆ ಮಾಡಿದ್ದಾರೆಂದು ಭಾಸ್ಕರ್ ಶೆಟ್ಟಿಯವರ ತಾಯಿ ಗುಲಾಬಿ ಶೆಟ್ಟಿ ದೂರು ನೀಡಿದ್ದರು. ದೂರಿನನ್ವಯ ತನಿಖೆ ಆರಂಭಿಸಿದ್ದ ಪೊಲೀಸರಿಗೆ ಮಹಜರು ವೇಳೆ ಶೆಟ್ಟಿಯವರ ಮನೆಯಲ್ಲೇ ರಕ್ತದ ಕಲೆ ಪತ್ತೆಯಾಗಿತ್ತು.
ಸೌದಿಯಿಂದ ಬಂದಿದ್ದ ಭಾಸ್ಕರ್ ಶೆಟ್ಟಿಯವರ ಜೊತೆ ಅವರ ಪತ್ನಿ ರಾಜೇಶ್ವರಿ ಮತ್ತು ಪುತ್ರ ನವನೀತ್ ಆಸ್ತಿವಿಚಾರಕ್ಕೆ ಸಂಬಂಧಿಸಿದಂತೆ ಜಗಳವಾಡುತ್ತಿದ್ದರು. ಪತ್ನಿಯ ವರ್ತನೆಯಿಂದ ಬೇಸತ್ತಿದ್ದ ಶೆಟ್ಟಿ ಡೈವೋರ್ಸ್ ನೀಡಲು ಮುಂದಾಗಿದ್ದರು ಎನ್ನುವ ಮಾಹಿತಿ ಲಭ್ಯವಾಗಿದೆ.
ಭಾಸ್ಕರ್ ಶೆಟ್ಟಿಯವರನ್ನು ಯಜ್ಞಕುಂಡದಲ್ಲಿ ಹಾಕಿ ಸುಟ್ಟು, ಹೆಣವನ್ನು ಗೋಣಿಚೀಲದಲ್ಲಿ ತುರುಕಿ ನದಿಗೆ ಎಸೆದಿದ್ದಾರೆಂದು ಭಾಸ್ಕರ್ ಶೆಟ್ಟಿ ಸಂಬಂಧಿಕರು ಆರೋಪಿಸುತ್ತಿದ್ದಾರೆ.
ಈ ನಡುವೆ ಭಾಸ್ಕರ್ ಶೆಟ್ಟಿಯವರ ಪತ್ನಿ ಮತ್ತು ಪುತ್ರನನ್ನು ಸೋಮವಾರ (ಆ 8) ಕೋರ್ಟಿಗೆ ಹಾಜರು ಪಡಿಸಲಾಗಿದ್ದು, ಆಗಸ್ಟ್ 12ರ ವರೆಗೆ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.
ಘಟನೆಯ ಸಂಪೂರ್ಣ ವಿವರವನ್ನು ಸ್ಲೈಡಿನಲ್ಲಿ ಮುಂದುವರಿಸಲಾಗಿದೆ..
ಭಯಭೀತರಾಗಿದ್ದ ಶೆಟ್ಟಿ
ಸೌದಿಯಿಂದ ಕೆಲವು ದಿನಗಳ ಹಿಂದೆ ಭಾಸ್ಕರ್ ಶೆಟ್ಟಿ ಉಡುಪಿಗೆ ಆಗಮಿಸಿದ್ದರು. ಬಂದ ಎರಡೇ ದಿನದಲ್ಲಿ ಪತ್ನಿ ಮತ್ತು ಮಗನೊಂದಿಗೆ ಆಸ್ತಿಗೆ ಸಂಬಂಧಿಸಿದಂತೆ ಜಗಳವಾಗಿತ್ತು. ಪುತ್ರ ನವನೀತ್ ತಂದೆಯ ಮೇಲೆ ಹಲ್ಲೆ ನಡೆಸಿದ್ದ. ಇದರಿಂದ ಭಯಭೀತರಾಗಿದ್ದ ಶೆಟ್ಟಿ, ತನ್ನ ಒಡೆತನದ ದುರ್ಗಾ ಇಂಟರ್ನ್ಯಾಷನಲ್ ಹೋಟೇಲಿನಲ್ಲೇ ತಂಗುತ್ತಿದ್ದರು. (ಚಿತ್ರದಲ್ಲಿ ಶೆಟ್ಟಿ ಪತ್ನಿ ಮತ್ತು ಪುತ್ರ)
ಜುಲೈ 28ರಂದು ನಾಪತ್ತೆ
ಬೆಳಗ್ಗೆ ಸ್ನಾನಕ್ಕೆಂದು ಮಾತ್ರ ಮನೆಗೆ ಬರುತ್ತಿದ್ದ ಶೆಟ್ಟಿಯವರನ್ನು ಜುಲೈ 28ರಂದು, ಮುಖಕ್ಕೆ ಪೆಪ್ಪರ್ ಸ್ಪ್ರೇ ಹಾಕಿ, ಕಬ್ಬಿಣದ ಸಲಾಕೆಯಿಂದ ಹೊಡೆದು, ಬಾತ್ ರೂಂಗೆ ತಳ್ಳಿ ಹತ್ಯೆ ಮಾಡಲಾಗಿತ್ತು. ನಂತರ ಶವವನ್ನು ಕಾರಿನಲ್ಲಿ ನಂದಳಿಕೆ ಎನ್ನುವ ಊರಿಗೆ ಕೊಂಡೊಯ್ಯಲಾಗಿತ್ತು ಎಂದು ತಿಳಿದು ಬಂದಿದೆ.
ಯಜ್ಞಕುಂಡದಲ್ಲಿ ಶವ ಸುಟ್ಟರು
ನಂದಳಿಕೆಯ ಬಳಿ ಹೋಮಕುಂಡದಲ್ಲಿ ಶವವನ್ನು ಸುಟ್ಟು, ನಂತರ ಬೂದಿ ಮತ್ತು ಶವದ ಅವಶೇಷವನ್ನು ಪಕ್ಕದ ನದಿಗೆ ಬಿಸಾಕಲಾಗಿತ್ತು. ಭಾಸ್ಕರ್ ಶೆಟ್ಟಿ ನಾಪತ್ತೆಯಾದ ದಿನದಿಂದ ನಂದಳಿಕೆಯ ಜ್ಯೋತಿಷಿ ನಿರಂಜನ್ ಭಟ್ ಎನ್ನುವವರೂ ನಾಪತ್ತೆಯಾಗಿದ್ದಾರೆ. ನಿರಂಜನ್ ಭಟ್ ಜೊತೆ ಶೆಟ್ಟಿಯವರ ಪತ್ನಿ ನಿರಂತರ ಸಂಪರ್ಕದಲ್ಲಿದ್ದರು. (ಚಿತ್ರದಲ್ಲಿ ನಿರಂಜನ್ ಭಟ್)
ನದಿಯಲ್ಲಿ ಸಿಗಲಿಲ್ಲ
ಶವವನ್ನು ನದಿಗೆ ಬಿಸಾಕಲಾಗಿದೆ ಎನ್ನುವ ಗುಮಾನಿ ಇದ್ದದ್ದರಿಂದ ನದಿಯಲ್ಲಿದ್ದ ಹಲವು ಚೀಲಗಳನ್ನು ಪೊಲೀಸರು ಪರಿಶೀಲಿಸಿದ್ದಾರೆ. ಗೋಣಿ ಚೀಲಗಳಲ್ಲಿ ಸಾಮಾನ್ಯ ಹೋಮಕ್ಕೆ ಬಳಸುವ ವಸ್ತುಗಳು ಮಾತ್ರವೇ ಇತ್ತು. ಅಲ್ಲಿ ಯಾವುದೇ ಸಂಶಯಾಸ್ಪದ ವಸ್ತುಗಳು ಇರಲಿಲ್ಲ ಎಂದು ಮೂಲಗಳಿಂದ ತಿಳಿದು ಬಂದಿದೆ.
ಭಾಸ್ಕರ್ ಶೆಟ್ಟಿ ಮಾವನ ಹೇಳಿಕೆ
ಭಾಸ್ಕರ್ ಶೆಟ್ಟಿಯವರದ್ದು ಕೊಲೆ ಎಂದು ಪೊಲೀಸರು ಅನೌಪಚಾರಿಕವಾಗಿ ಹೇಳುತ್ತಿದ್ದರೂ ಅಧಿಕೃತವಾಗಿ ಹೇಳಿಕೆ ಅವರಿಂದ ಬರಬೇಕಷ್ಟೇ. ನಂದಳಿಕೆಯಲ್ಲಿ ಭಾಸ್ಕರ್ ಶೆಟ್ಟಿಯವರನ್ನು ಸುಟ್ಟು ಹಾಕಿ ಹತ್ಯೆ ಮಾಡಲಾಗಿದೆ, ಎನ್ನುವ ಮಾಹಿತಿಯನ್ನು ಪೊಲೀಸರು ನೀಡಿದ್ದಾರೆ ಎಂದು ಭಾಸ್ಕರ್ ಶೆಟ್ಟಿಯವರ ಮಾವ ಹೇಳಿದ್ದಾರೆ.
ಉಡುಪಿ ಎಸ್ಪಿ ಹೇಳಿಕೆ
ಭಾಸ್ಕರ್ ಶೆಟ್ಟಿಯವರ ದೇಹ ಇನ್ನೂ ಸಿಗದಿರುವುದರಿಂದ ಅವರು ಕೊಲೆಯಾಗಿದ್ದಾರೆಂದು ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಅವರ ಪತ್ನಿ ಮತ್ತು ಮಗನನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಲಾಗಿದೆ. ನಾಪತ್ತೆಯಾಗಿರುವ ನಿರಂಜನ್ ಭಟ್ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಉಡುಪಿ ಹೆಚ್ಚುವರಿ ಪೊಲೀಸ್ ಆಯುಕ್ತ ವಿಷ್ಣುವರ್ಧನ್ ಭಾನುವಾರ (ಆ 7) ಹೇಳಿದ್ದಾರೆ.[ಭಾಸ್ಕರ್ ಶೆಟ್ಟಿ ಹತ್ಯೆ: ಪೊಲೀಸ್ ವಶದಲ್ಲಿ ಜ್ಯೋತಿಷಿ ನಿರಂಜನ್ ಭಟ್]