ಭಾಸ್ಕರ ಶೆಟ್ಟಿ ಕೊಲೆ ಪ್ರಕರಣ: ಪೊಲೀಸರ ಹೊಸ ಅವಾಂತರ?
ಉಡುಪಿ, ಆಗಸ್ಟ್ 13: ಉಡುಪಿಯ ಉದ್ಯಮಿ ಭಾಸ್ಕರ ಶೆಟ್ಟಿ ಕೊಲೆ ಪ್ರಕರಣದಲ್ಲಿ, ಆರೋಪಿಗಳನ್ನು ಪೊಲೀಸರೇ ರಕ್ಷಿಸುತ್ತಿದ್ದಾರೆನ್ನುವ ಸಾರ್ವಜನಿಕರ ಸಂಶಯದ ದೃಷ್ಟಿಯ ನಡುವೆ, ಬಹಿರಂಗಗೊಂಡ ವಿಡಿಯೋ ತುಣುಕೊಂದು ಹೊಸ ಅವಾಂತರ ಹುಟ್ಟು ಹಾಕಿದೆ.
ಕೊಲೆ ಪ್ರಕರಣದ ಆರೋಪಿಗಳಿಗೆ ಪೊಲೀಸರು ರಾಜ ಮರ್ಯಾದೆ ನೀಡುತ್ತಿದ್ದಾರೆ ಎನ್ನುವ ಆರೋಪದ ಮಧ್ಯೆ, ಆರೋಪಿಗಳನ್ನು ಪೊಲೀಸರು ಬಾರ್ ಆಂಡ್ ರೆಸ್ಟೋರೆಂಟಿಗೆ ಕರೆದುಕೊಂಡು ಹೋಗುತ್ತಿರುವ ವಿಡಿಯೋ ಸಾಮಾಜಿಕ ತಾಣದಲ್ಲಿ ಹರಿದಾಡುತ್ತಿದೆ. (ಭಾಸ್ಕರ ಶೆಟ್ಟಿ ಕೊಲೆ ಪ್ರಕರಣ, ಆತ ಗಂಡನಂತೆ ಎಲ್ಲಿದ್ದ)
ಉಡುಪಿ ಜಿಲ್ಲೆ ನಿಟ್ಟೆ ಬಳಿಯ ಮದ್ಯದ ಅಂಗಡಿಯಲ್ಲಿನ ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯ ಎಲ್ಲಡೆ ಹರಿದಾಡುತ್ತಿದ್ದು, ಉಡುಪಿ ಪೊಲೀಸರನ್ನು ತೀವ್ರ ಮುಜುಗರಕ್ಕೀಡಾಗುವಂತೆ ಮಾಡಿದೆ.
ಬುಧವಾರ (ಆ 10) ವಿಚಾರಣೆಗಾಗಿ ಆರೋಪಿಗಳನ್ನು ವಿವಿಧ ಸ್ಥಳಗಳಿಗೆ ಕರೆದುಕೊಂಡು ಹೋಗಬೇಕಾಗಿತ್ತು.
ಸಂಜೆ ನಾಲ್ಕು ಗಂಟೆಗೆ ಯಾವ ಹೋಟೇಲ್ ಸಿಗದ ಹಿನ್ನಲೆಯಲ್ಲಿ ಬಾರ್ ಆಂಡ್ ರೆಸ್ಟೋರೆಂಟಿಗೆ ಕರೆದುಕೊಂಡು ಹೋಗಿದ್ದು ಹೌದು ಎಂದು ತನಿಖಾಧಿಕಾರಿ ASP ಸುಮನಾ, ವಿಡಿಯೋ ಬಹಿರಂಗವಾಗುತ್ತಿದ್ದಂತೆಯೇ ಮಾಧ್ಯಮಗಳಿಗೆ ಹೇಳಿಕೆಯನ್ನು ನೀಡಿದ್ದಾರೆ.
ಇತ್ತೀಚೆಗೆ ಪ್ರಕರಣದ ಆರೋಪಿ ನವನೀತ್ ಶೆಟ್ಟಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವ ವೇಳೆ ತನಿಖಾಧಿಕಾರಿಯಾಗಿದ್ದ ಮಣಿಪಾಲ ಸರ್ಕಲ್ ಇನ್ಸ್ ಪೆಕ್ಟರ್ ಗಿರೀಶ್, ಜೀಪಿನಲ್ಲಿ ತಾನು ಕೂರಬೇಕಾದ ಸ್ಥಳದಲ್ಲಿ ಕುಳ್ಳಿರಿಸಿ ತೀವ್ರ ಟೀಕೆಗೆ ಒಳಗಾಗಿದ್ದರು. (ಪತಿಯನ್ನು ಯಜ್ಞಕುಂಡದಲ್ಲಿ ಹಾಕಿ ಸುಟ್ಟಳೇ ಪತ್ನಿ)
ಭಾಸ್ಕರ್ ಶೆಟ್ಟಿ ಕುಟುಂಬದಲ್ಲಿ ಹೊಂದಾಣಿಕೆ ಇರದೇ, ಗಂಡ ಹೆಂಡತಿಯ ನಡುವೆ ಮನಸ್ತಾಪವಿತ್ತು. ದಂಪತಿಗಳ ನಡುವೆ ಜಗಳ ನಡೆಯುತ್ತಿತ್ತು.
ಜ್ಯೋತಿಷಿ ನಿರಂಜನ್ ಭಟ್ ಮಾಟಮಂತ್ರದ ಹೆಸರಿನಲ್ಲಿ ತನ್ನ ಪತ್ನಿಯನ್ನು ಎಲ್ಲೆಲ್ಲಿಗೋ ಕರೆದೊಯ್ಯುತ್ತಿದ್ದ ವಿಷಯ ತಿಳಿದ ಭಾಸ್ಕರ್ ಶೆಟ್ಟಿ ಹೆಂಡತಿ ಮೇಲೆ ಹಲ್ಲೆ ನಡೆಸಿದ್ದರು.
ಈ ಸಂಬಂಧ ಕಳೆದ ಒಂದೂವರೆ ತಿಂಗಳ ಹಿಂದೆ ಇಲ್ಲಿನ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪೊಲೀಸರು ಇಬ್ಬರಿಂದಲೂ ಮುಚ್ಚಳಿಕೆ ಬರೆಸಿಕೊಂಡು, ಬುದ್ದಿಹೇಳಿ ಕಳುಹಿಸಿದ್ದರು ಎಂದು ತಿಳಿದು ಬಂದಿದೆ.