ಅಗುಂಬೆ ಘಾಟಿ ರಸ್ತೆ ಕಾಮಗಾರಿ ಪೂರ್ಣ, ಜ.1ರಿಂದ ಸಂಚಾರ ಆರಂಭ
ಉಡುಪಿ, ಜನವರಿ 2: ಆಗುಂಬೆ ಘಾಟಿ ರಸ್ತೆ ದುರಸ್ತಿ ಕಾಮಗಾರಿ ಡಿಸೆಂಬರ್ 31 ಪೂರ್ಣಗೊಂಡಿದ್ದು, ಜನವರಿ 1ರಿಂದ ರಸ್ತೆ ಸಂಚಾರ ಆರಂಭವಾಗಿದೆ. ಸುಂದರವಾದ ರಸ್ತೆ ನಿರ್ಮಾಣಗೊಂಡಿದೆ. ಹೆಬ್ರಿ-ಸೋಮೇಶ್ವರ ಮಾರ್ಗವಾಗಿ ಆಗುಂಬೆ ಘಾಟಿ ಮೂಲಕ ಶಿವಮೊಗ್ಗ- ತೀರ್ಥಹಳ್ಳಿ ಸಂಪರ್ಕಿಸುವ ಘಾಟಿಯ ರಸ್ತೆ ಸಂಪೂರ್ಣ ಹಾಳಾಗಿದ್ದರಿಂದ ಡಿಸೆಂಬರ್ 1ರಿಂದ ಸಂಚಾರ ಸ್ಥಗಿತಗೊಳಿಸಲಾಗಿತ್ತು.
ಘಾಟಿಯ ಉದ್ದಕ್ಕೂ ಅಪಾಯಕಾರಿ ತಿರುವುಗಳಲ್ಲಿ ರಕ್ಷಣಾ ಗೋಡೆಗಳು ಕುಸಿದಿದ್ದವು. ಇವುಗಳ ನಿರ್ಮಾಣ ಮಾಡಲು ಡಿಸೆಂಬರ್ 1ರಿಂದಲೇ ದುರಸ್ತಿ ಕಾರ್ಯ ಆರಂಭಗೊಂಡಿತ್ತು. ಘಾಟ್ನಲ್ಲಿ ವಾಹನ ಸಂಚಾರ ಬಂದ್ ಆದ ಹಿನ್ನೆಲೆಯಲ್ಲಿ ಸದಾ ಪ್ರವಾಸಿಗರಿಂದ ಗಿಜಿಗುಡುತ್ತಿದ್ದ ಸೋಮೇಶ್ವರ ಪೇಟೆ ಬಿಕೋ ಎನ್ನುತ್ತಿತ್ತು.
ಪ್ರವಾಸಿಗರನ್ನೇ ನಂಬಿ ಕಾರ್ಯ ನಿರ್ವಹಿಸುತ್ತಿದ್ದ ಹತ್ತಾರು ಹೋಟೆಲ್ಗಳು, ದೂರದ ಊರಿನ ಪ್ರವಾಸಿಗರಿಗಾಗಿಯೇ ವಿಶಿಷ್ಟ ಬಗೆಯ ಕಾಡುತ್ಪತ್ತಿ, ಔಷಧೀಯ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಅಂಗಡಿಗಳು ಸಂಪೂರ್ಣ ಮುಚ್ಚಿದ್ದವು. ಈ ರಸ್ತೆ ಸಂಚಾರದ ಪುನರಾರಂಭವನ್ನೇ ಚಾತಕ ಪಕ್ಷಿಯಂತೆ ಕಾಯುತ್ತಿದ್ದವು.
ಈ ಕುರಿತು ಮಾಹಿತಿ ನೀಡಿದ ಲೋಕೋಪಯೋಗಿ ಇಲಾಖೆ (ಪಿಡಬ್ಲ್ಯುಡಿ) ಅಧೀಕ್ಷಕ ಬಿ. ಎಸ್ ಬಾಲಕೃಷ್ಣ, ಈ ರಸ್ತೆ ಅವ್ಯವಸ್ಥೆಯಿಂದ ವಾಹನ ಸವಾರರಿಗೆ ಹಾಗೂ ಪಾದಚಾರಿಗಳಿಗೆ ಬಹಳ ತೊಂದರೆಯಾಗುತ್ತಿತ್ತು. ಆಗುಂಬೆ ಫಾರೆಸ್ಟ್ ಗೇಟಿನಿಂದ ಶಿವಮೊಗ್ಗ ಉಪವಿಭಾಗ ವ್ಯಾಪ್ತಿಯ ಏಳನೇ ತಿರುವಿನವರೆಗಿನ ರಸ್ತೆ ಡಾಂಬರು ಕಾಮಗಾರಿ ಮಾಡಿ, ಕುಸಿದಿದ್ದ ರಕ್ಷಣಾ ಗೋಡೆ ನಿರ್ಮಿಸಲಾಗಿದೆ.
ಈ ಮಾರ್ಗದಲ್ಲಿ ವಾಹನ ಸಂಚಾರ ಕಡಿಮೆ ಆಗಿದ್ದರಿಂದಾಗಿ ಶಾಲಾ-ಕಾಲೇಜು ವಿಧ್ಯಾರ್ಥಿಗಳು ಮತ್ತು ನಿತ್ಯ ಸಂಚರಿಸುವ ಜನರಿಗೆ ಅಡಚಣೆಯಾಗಿತ್ತು. ಆಗುಂಬೆ ಸೋಮೇಶ್ವರ ಹೆಬ್ರಿ ಮುಂತಾದ ಕಡೆಗಳಲ್ಲಿ ವ್ಯಾಪಾರ ವ್ಯವಹಾರದ ಮೇಲೂ ಪರಿಣಾಮ ಬೀರಿತ್ತು. ಆದರೆ ಇದೀಗ ರಸ್ತೆ ದುರಸ್ತಿ ಕಾರ್ಯ ಪೂರ್ಣಗೊಂಡಿದೆ.
ಈ ರಸ್ತೆಯಲ್ಲಿ ವಾಹನ ಸಾಂದ್ರತೆ ದಿನಕ್ಕೆ ಸುಮಾರು 8,000 ಎಂದು ಅಂದಾಜಿಸಲಾಗಿದೆ. ಇನ್ನೂ ತಿರುವುಗಳ ಕಾಮಗಾರಿ ಬಾಕಿ ಇದ್ದು, ಮುಂದಿನ ಐದು ದಿನಗಳೊಳಗಾಗಿ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ತಿಳಿಸಿದರು.