ಭಾಸ್ಕರ್ ಶೆಟ್ಟಿ ಕೊಲೆ ತನಿಖೆಗಾಗಿ ಮೂರು ತಂಡ ರಚನೆ
ಉಡುಪಿ, ಆಗಸ್ಟ್ 12: ಮಂಗಳೂರು ಉದ್ಯಮಿ ಭಾಸ್ಕರ್ ಶೆಟ್ಟಿ ಸೆನ್ಸೇಷನಲ್ ಕೊಲೆ ಪ್ರಕರಣವನ್ನು ಬೆನ್ನಟ್ಟಿರುವ ಪೊಲೀಸ್ ಇಲಾಖೆ, ಮೂರು ತಂಡವನ್ನು ರಚಿಸಿದೆ.
ಒಂದು ತಂಡವು ಶುಕ್ರವಾರ ಉಡುಪಿಗೆ ಭೇಟಿ ನೀಡುವ ಡಿಎನ್ ಎ ತಜ್ಞರಿಗೆ ನೆರವು ನೀಡಿದರೆ, ಮತ್ತೊಂದು ತಂಡಕ್ಕೆ ಹೇಳಿಕೆಗಳನ್ನು ದಾಖಲಿಸುವ ಜವಾಬ್ದಾರಿ ವಹಿಸಲಾಗಿದೆ. ಇನ್ನು ಮೂರನೇ ತಂಡವು ಅಗತ್ಯ ಸಾಕ್ಷ್ಯಾಧಾರಗಳನ್ನು ಕಲೆಹಾಕಲು ವಿಚಾರಣಾಧಿಕಾರಿ ಎ ಎಸ್ ಪಿ ಡಿ.ಪಿ.ಸುಮನ್ ಅವರ ನೇತೃತ್ವದಲ್ಲಿ ಕೆಲಸ ನಿರ್ವಹಿಸುತ್ತದೆ.
ಎಲ್ಲೆಲ್ಲಿ ಸಾಕ್ಷ್ಯಗಳನ್ನು ಸಂಗ್ರಹಿಸಬೇಕು ಎಂಬ ಬಗ್ಗೆ ಡಿಎನ್ ಎ ತಜ್ಞರ ಜತೆ ಈಗಾಗಲೇ ಪೊಲೀಸ್ ಅಧಿಕಾರಿಗಳು ಚರ್ಚಿಸಿದ್ದಾರೆ ಎಂದು ತಿಳಿದುಬಂದಿದೆ.
ಬಹುಕೋಟಿ ಉದ್ಯಮಿ ಭಾಸ್ಕರ ಶೆಟ್ಟಿ ಹತ್ಯೆ ಪ್ರಕರಣದ ತನಿಖೆ ಸರಿಯಾದ ದಾರಿಯಲ್ಲಿ ಸಾಗುತ್ತಿಲ್ಲ ಎನ್ನುವ ಸಾರ್ವಜನಿಕ ಆಕ್ರೋಶದ ನಡುವೆ ತನಿಖಾಧಿಕಾರಿಯನ್ನೇ ಬದಲಾಯಿಸಲಾಗಿತ್ತು.
ಭಾಸ್ಕರ್ ಶೆಟ್ಟಿ ಅವರ ಪತ್ನಿ ರಾಜೇಶ್ವರಿ ಹಾಗೂ ಮಗ ನವನೀತ್ ಪೊಲೀಸ್ ಕಸ್ಟಡಿ ಅವಧಿ ಆ.12ಕ್ಕೆ ಕೊನೆಗೊಳ್ಳಲಿದೆ. ಈ ಅವಧಿಯನ್ನು ಇನ್ನೂ 6 ದಿನಗಳಿಗೆ ವಿಸ್ತರಿಸುವಂತೆ ಕೋರ್ಟ್ ನಲ್ಲಿ ಕೋರಲು ಪೊಲೀಸರು ನಿರ್ಧರಿಸಿದ್ದಾರೆ.
ಈ ಮಧ್ಯೆ, ನಿರಂಜನ್ ಭಟ್ ಹೊಟ್ಟೆಯಲ್ಲಿದ್ದ ಕಿವಿಯೋಲೆಯೊಂದನ್ನು ಹೊರತೆಗೆಯಲಾಗಿದೆ. ಶುಕ್ರವಾರ ಮಣಿಪಾಲದ ಕಸ್ತೂರಬಾ ಆಸ್ಪತ್ರೆಯಲ್ಲಿ ಒಡವೆ ಹೊರಬಂದಿದ್ದು, ಆತನ ಹೊಟ್ಟೆಯಲ್ಲಿದ್ದ ಮೂರೂ ಒಡವೆಗಳನ್ನು ಹೊರತೆಗೆಯಲಾಗಿದೆ. ವಜ್ರದ ಉಂಗುರ, ಒಂದು ಜೊತೆ ಕಿವಿಯೋಲೆ ನುಂಗಿ ನಿರಂಜನ್ ಭಟ್ ಆತ್ಮಹತ್ಯೆಗೆ ಯತ್ನಿಸಿದ್ದ.