ಉಡುಪಿ: ಓಡೋಡಿ ಬಂದು ಬಾವಿಗೆ ಬಿದ್ದ ಕರಿ ಚಿರತೆ ರಕ್ಷಣೆ
ಉಡುಪಿ, ಮೇ 09 : ಜಿಲ್ಲೆಯ ಕಾರ್ಕಳ ತಾಲೂಕಿನ ಹಿರ್ಗಾನದ ಬಾಳೆಹಿತ್ಲು ಸಮೀಪ ಕರಿ ಚಿರತೆಯೊಂದು ನಾಯಿಯನ್ನು ಬೆನ್ನಟ್ಟಿ ಬಂದು ಬಾವಿಗೆ ಬದ್ದಿದೆ.
ಚಿರತೆ ಬಾವಿಗೆ ಬಿದ್ದು ನೀರಿನಲ್ಲಿ ಈಜುತ್ತ ಮೇಲಕ್ಕೆ ಬರಲಾಗದೇ ಘರ್ಜಿಸುತ್ತಿರುವುದನ್ನು ಕಂಡ ಬಾವಿ ಮಾಲೀಕ ರಾಜಾರಾಮ್ ಅವರು ಇಣುಕಿ ನೋಡಿ ಹೌಹಾರಿ ಕೂಡಲೇ ಅರಣ್ಯ ಇಲಾಖೆಗೆ ಮಾಹಿತಿ ತಲುಪಿಸಿದ್ದಾರೆ.
ಮಾಹಿತಿ ತಿಳಿದು ಕೂಡಲೇ ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿಗಳು ಅಡಿಕೆ ಸೋಗೆಯ ಏಣಿ ನಿರ್ಮಿಸಿ ಬಾವಿಗೆ ಬಿಟ್ಟು ಚಿರತೆಯನ್ನು ಮೇಲಕ್ಕೆತ್ತಲಾಯ್ತು. ಆ ಕೂಡಲೇ ಚಿರತೆಯನ್ನು ಬೋನತ್ತ ಸರಿಸಿ ಸೆರೆ ಹಿಡಿಯುವಲ್ಲಿ ಯಶಸ್ವಿಯಾದರು.
ಈ ಅಪರೂಪದ ಕರಿ ಚಿರತೆಯನ್ನು ನೋಡಲು ಜನಸ್ತೋಮವೇ ನೆರೆದಿತ್ತು. ಸಾಮಾನ್ಯವಾಗಿ ಕಾಡುವಾಸಿಗಳ ಕಣ್ಣಿಗೂ ಅಷ್ಟಾಗಿ ಬೀಳದ ಬಲು ಅಪರೂಪದ ಕಪ್ಪು ಚಿರತೆಯನ್ನು ಇಲ್ಲಿ ಕಾಣ ಸಿಕ್ಕಿದ್ದು ಅಚ್ಚರಿಯೇ ಸರಿ.
ಬಾವಿಗೆ ಬಿದ್ದ ಚಿರತೆಗೆ ಸಣ್ಣಪುಟ್ಟ ಗಾಯಗಳಾಗಿದ್ದು ಚಿಕಿತ್ಸೆ ನೀಡಿ ಮೇಲಾಧಿಕಾರಿಗಳ ಮಾರ್ಗದರ್ಶನದಂತೆ ನಿಗದಿಪಡಿಸಿದ ಕಾಡಿಗೆ ಬಿಡಲಾಗುವುದು ಎಂದು ಅರಣ್ಯ ಇಲಾಖೆಯ ಮೂಲಗಳು ತಿಳಿಸಿವೆ.