ವ್ಯಕ್ತಿಯನ್ನು ಕೊಲೆ ಮಾಡಿ ಮಸೀದಿಗೆ ಕಲ್ಲು ತೂರಿದ್ದ ಆರೋಪಿ ಬಂಧನ
ಉಡುಪಿ, ಫೆಬ್ರವರಿ. 01 : ಉಡುಪಿಯ ಕರಾವಳಿ ಜಂಕ್ಷನ್ ಸಮೀಪ ನಡೆದ ರಿಕ್ಷಾ ಚಾಲಕ ಹನೀಫ್ ಕೊಲೆ ಹಾಗೂ ಉಡುಪಿಯಲ್ಲಿ ಅದೇ ದಿನ ರಾತ್ರಿ ನಡೆದ ಮಸೀದಿಗೆ ಕಲ್ಲು ತೂರಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತನೋರ್ವನನ್ನು ಬಂಧಿಸುವಲ್ಲಿ ಉಡುಪಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತನನ್ನು ಮಂಗಳೂರು ಕುಂಪಲ ನಿವಾಸಿ, ಹಿಂದು ಜಾಗರಣಾ ವೇದಿಕೆಯ ಕಾರ್ಯಕರ್ತ ಅಂಕೀತ್ ಪೂಜಾರಿ ಎಂದು ಗುರುತಿಸಲಾಗಿದೆ.[ಕ್ಷುಲ್ಲಕ ಕಾರಣಕ್ಕೆ ಚೂರಿಯಿಂದ ಇರಿದು ರಿಕ್ಷಾ ಚಾಲಕನ ಕೊಲೆ]
ಸಂಘಪರಿವಾರದ ಸಕ್ರೀಯ ಕಾರ್ಯಕರ್ತನಾಗಿರುವ ಈತನ ವಿರುದ್ಧ ಮಂಗಳೂರು ಮತ್ತು ವಿಟ್ಲ ಸೇರಿದಂತೆ ಹಲವು ಕಡೆ ಕೊಲೆಯತ್ನ, ಕೋಮು ಅಪರಾಧಗಳು ದಾಖಲಾಗಿವೆ.
ಜನವರಿ 28ರಂದು ರಾತ್ರಿ 12.14ರ ಸುಮಾರಿಗೆ ಮಸೀದಿಗೆ ಕಲ್ಲೆಸೆದು ಬೈಕಿನಲ್ಲಿ ಪರಾರಿಯಾಗುತ್ತಿದ್ದ ವೇಳೆ ಈತ ಕರವಾಳಿ ಬೈಪಾಸ್ ಬಳಿ ರಾಂಗ್ ಸೈಡ್ ವಿಚಾರದಲ್ಲಿ ರಿಕ್ಷಾ ಚಾಲಕ ಹನೀಫ್ ಎಂಬವರೊಂದಿಗೆ ಜಗಳಕ್ಕೆ ಇಳಿದಿದ್ದನು.
ರಿಕ್ಷಾ ಚಾಲಕ ಹನೀಫ್ ಮತ್ತು ಭಾಮೈದ ಶಬ್ಬೀರ್ ಗೆ ಚೂರಿಯಿಂದ ಇರಿದು ಪರಾರಿಯಾಗಿದ್ದನು. ಇದರಿಂದ ಗಂಭೀರವಾಗಿ ಗಾಯಗೊಂಡ ಹನೀಫ್ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟಿದ್ದ.
ಅಷ್ಟೇ ಅಲ್ಲದೆ ಈ ಪೂಜಾರಿ ಚೂರಿ ಇರಿದು ನೇರ ಪಂದುಬೆಟ್ಟಿಗೆ ಬರುವ ವೇಳೆ ಅಲ್ಲೇ ಇದ್ದ ಮಸೀದಿಗೆ ಕಲ್ಲು ತೂರಿ ಎರಡು ಗಾಜು ಪುಡಿಗೈದಿದ್ದ.
ಆರೋಪಿ ಮಸೀದಿಗೆ ಕಲ್ಲೆಸೆಯುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿರುವುದರಿಂದ ಆ ಚಿತ್ರವನ್ನು ಚೂರಿ ಇರಿತದಿಂದ ಗಾಯಗೊಂಡಿರುವ ಶಬ್ಬೀರ್ ಗೆ ತೋರಿಸಲಾಗಿದೆ. ಹೌದು ಚೂರಿ ಇರಿದಿದ್ದು ಈತನೇ ಎಂದು ಶಬ್ಬೀರ್ ಗುರುತಿಸಿದ್ದಾನೆ.
ಎರಡು ಕೃತ್ಯ ಎಸಗಿರುವವ ಒಬ್ಬನೆ ವ್ಯಕ್ತಿ ಎಂಬುದನ್ನು ಖಚಿತಪಡಿಸಿಕೊಂಡು ತನಿಖೆ ಆರಂಭಿಸಿದ್ದ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.