ಶಿಷ್ಟಾಚಾರದ ಹೆಸರಿನಲ್ಲಿ ಒಳ್ಳೆ ಚಾನ್ಸ್ ಮಿಸ್ ಮಾಡ್ಕೊಂಡ್ರಾ ಸಿದ್ದರಾಮಯ್ಯ?
ಶಿಷ್ಟಾಚಾರದ ಹೆಸರಿನಲ್ಲಿ ಉಡುಪಿಯ ಶ್ರೀಕೃಷ್ಣಮಠಕ್ಕೆ ಸಂಬಂಧಿಸಿದಂತೆ ಇದ್ದ ಭಿನ್ನಾಭಿಪ್ರಾಯ ತೆರೆಯೆಳೆಯಲು ಇದ್ದ ಸುವರ್ಣಾವಕಾಶವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಕೈಚೆಲ್ಲಿದ್ದಾರೆ.
ಅಸಲಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಇರುವ ಡಿಫರೆನ್ಸ್ ಯಾರ ಮೇಲೆ? ಪೊರೆದೊಡೆಯ ಉಡುಪಿ ಶ್ರೀಕೃಷ್ಣ ಮತ್ತು ಮುಖ್ಯಪ್ರಾಣನ ಮೇಲೋ, ಮಠದ ಸಂಪ್ರದಾಯದ ಮೇಲೋ ಅಥವಾ ಪ್ರಮುಖವಾಗಿ ಪೇಜಾವರ ಶ್ರೀಗಳ ಮೇಲೋ?
ಅಥವಾ ಇವೆಲ್ಲಕ್ಕಿಂತಲೂ ಮುಖ್ಯವಾಗಿ ಕೃಷ್ಣಮಠಕ್ಕೆ ಭೇಟಿ ನೀಡಿದರೆ, ಒಂದು ವರ್ಗದ ಕೋಪ ಎದುರಿಸಬೇಕಾದೀತು ಎನ್ನುವ ರಾಜಕೀಯ ಲೆಕ್ಕಾಚಾರವೋ? ಒಟ್ಟಿನಲ್ಲಿ ಶಿಷ್ಟಾಚಾರದ ಹೆಸರಿನಲ್ಲಿ ಕೃಷ್ಣಮಠಕ್ಕೆ ಸಂಬಂಧಿಸಿದಂತೆ ಇದ್ದ ಭಿನ್ನಾಭಿಪ್ರಾಯ ತೆರೆಯೆಳೆಯಲು ಇದ್ದ ಸುವರ್ಣಾವಕಾಶವನ್ನು ಸಿದ್ದರಾಮಯ್ಯ ಕೈಚೆಲ್ಲಿದ್ದಾರೆ.
ಧರ್ಮಸಂಕಟದಲ್ಲಿ ಸಿಎಂ ಸಿದ್ದರಾಮಯ್ಯ
ರಾಷ್ಟ್ರಪತಿಗಳು ಭಾಗವಹಿಸುವ ಕಾರ್ಯಕ್ರಮಗಳಲ್ಲಿ ಮುಖ್ಯಮಂತ್ರಿಗಳು ಹಾಜರಿರ ಬೇಕಾಗಿರುವುದು ಶಿಷ್ಟಾಚಾರವಾಗಿರುವುದರಿಂದ, ಸಿದ್ದರಾಮಯ್ಯ ಉಡುಪಿಗೆ ಭೇಟಿ ನೀಡಿದ್ದರೆ ಅಹಿಂದ ಸೇರಿದಂತೆ ಯಾವ ವರ್ಗದ ವಿರೋಧವೂ ವ್ಯಕ್ತವಾಗುವ ಸಾಧ್ಯತೆ ಕಮ್ಮಿಯಿರುತ್ತಿತ್ತು.
ಒಂದು ಮೂಲಗಳ ಪ್ರಕಾರ ಉಡುಪಿಗೆ ಭೇಟಿ ನೀಡುವಂತೆ ಸ್ವಪಕ್ಷೀಯ ಮುಖಂಡರ ತೀವ್ರ ಒತ್ತಡದ ನಡುವೆಯೂ, ಈ ಕಾರ್ಯಕ್ರಮದಿಂದ ದೂರ ಉಳಿಯಲು ಸಿದ್ದರಾಮಯ್ಯ ನಿರ್ಧರಿಸಿ, ತಾನು ಪಾಲಿಸಿಕೊಂಡು ಬಂದ ಸಿದ್ದಾಂತವನ್ನು ಮುಂದುವರಿಸಿಕೊಂಡು ಬಂದಿದ್ದಾರೆ.
ಚುನಾವಣೆ ಹತ್ತಿರ ಬರುತ್ತಿರುವ ವೇಳೆ, ಒಂದು ವರ್ಗವನ್ನು ಓಲೈಸಲು ಹೋಗಿ, ಇನ್ನೊಂದಷ್ಟು ವರ್ಗಗಳ ವಿರೋಧ ಕಟ್ಟಿಕೊಳ್ಳಲು ಉಡುಪಿ ಘಟನೆ ಕಾರಣವಾದರೂ ಆಗಬಹುದು ಎಂದು ವ್ಯಾಖ್ಯಾನಿಸಲಾಗುತ್ತಿದೆ. ಮುಂದೆ ಓದಿ..
ಸಿಎಂ ಕಾರ್ಯಕ್ರಮ ರಿಸರ್ವ್ ಆಗಿತ್ತು
ಮುಖ್ಯಮಂತ್ರಿಗಳ ಭಾನುವಾರದ (ಜೂ 18) ವೇಳಾಪಟ್ಟಿಯಲ್ಲಿ ಬೆಳಗ್ಗೆ ರಾಷ್ಟ್ರಪತಿಗಳನ್ನು ಎಚ್ಎಎಲ್ ವಿಮಾನನಿಲ್ದಾಣದಿಂದ ಉಡುಪಿಗೆ ಬೀಳ್ಕೊಟ್ಟ ನಂತರ, ಇಡೀ ದಿನದ ಕಾರ್ಯಕ್ರಮ 'reserved' ಎಂದು ಪ್ರಕಟವಾಗಿತ್ತು. ಹಾಗಾಗಿ, ಕೊನೇ ಕ್ಷಣದಲ್ಲಿ ಸಿಎಂ ಉಡುಪಿ ಕಾರ್ಯಕ್ರಮದಲ್ಲಿ ಭಾಗವಹಿಸಬಹುದೆಂದು ನಿರೀಕ್ಷಿಸಲಾಗಿತ್ತು.
ಪರಮೇಶ್ವರ್ ಜೊತೆ ಅಜ್ಞಾತ ಸ್ಥಳಕ್ಕೆ ಸಿಎಂ?
ಆದರೆ, ಮುಖ್ಯಮಂತ್ರಿಗಳು ಬೆಂಗಳೂರಿನ ಕಾವೇರಿ ನಿವಾಸಕ್ಕೆ ಡಾ. ಪರಮೇಶ್ವರ್ ಅವರನ್ನು ಕರೆಸಿಕೊಂಡು, ಬೆಂಗಾವಲು ವಾಹನ ಮತ್ತು ಭದ್ರತೆಯನ್ನು ವಾಪಸ್ ಕಳುಹಿಸಿ, ಅಜ್ಞಾತ ಸ್ಥಳಕ್ಕೆ ತೆರಳಿದರು ಎನ್ನುವ ಮಾಹಿತಿ ಲಭ್ಯವಾಗಿತ್ತು.
ಭಕ್ತರ ಭಾವನೆಗೆ ಅವಮಾನ
ಸಿದ್ದರಾಮಯ್ಯ ಉಡುಪಿ ಕಾರ್ಯಕ್ರಮಕ್ಕೆ ಗೈರಾಗಿ, ರಾಷ್ಟ್ರಪತಿಗಳಿಗೆ ಮತ್ತು ಶ್ರೀಕೃಷ್ಣನ ಲಕ್ಷಾಂತರ ಭಕ್ತರ ಭಾವನೆಗಳನ್ನು ಅವಮಾನಿಸಿದ್ದಾರೆಂದು ಈ ಭಾಗದಲ್ಲಿ ಸಾರ್ವಜನಿಕರು ಮಾತನಾಡಿಕೊಳ್ಳುತ್ತಿರುವುದು, ಒಂದು ಪಕ್ಷವಾಗಿ ಕಾಂಗ್ರೆಸ್ಸಿಗೆ ಮುಂಬರುವ ದಿನಗಳಲ್ಲಿ ಹಿನ್ನಡೆಯಾದರೂ ಆಗಬಹುದು.
ಇದ್ದ ಗೊಂದಲಕ್ಕೆ ಪೇಜಾವರ ಶ್ರೀಗಳು ಸ್ಪಷ್ಟನೆ ನೀಡಿದ್ದಾರೆ
ಕನಕ ಗೋಪುರ, ಕೃಷ್ಣಮಠದಲ್ಲಿನ ಪಂಕ್ತಿಭೇದ ಮತ್ತಿತರ ಕಾರಣಗಳಿಂದ ಉಡುಪಿಗೆ ಈ ಹಿಂದೆ ನಾಲ್ಕು ಬಾರಿ ಭೇಟಿ ನೀಡಿದರೂ, ಕೃಷ್ಣಮಠಕ್ಕಾಗಲಿ ಅಥವಾ ವಯೋವೃದ್ದ ಯತಿ ಪೇಜಾವರ ಶ್ರೀಗಳನ್ನು ಸಿದ್ದರಾಮಯ್ಯ ಭೇಟಿಯಾಗಿರಲಿಲ್ಲ. ಕನಕ ಗೋಪುರ, ಪಂಕ್ತಿಭೇದ ಮುಂತಾದ ಎಲ್ಲಾ ವಿಷಯಗಳಿಗೂ ಪೇಜಾವರ ಶ್ರೀಗಳು ಹಲವು ಬಾರಿ ಸ್ಪಷ್ಟನೆ ನೀಡಿದ್ದಾಗಿದೆ.
ಕೊನೆಗೂ ಸಿದ್ದು ಬರಲೇ ಇಲ್ಲ
ಭಾನುವಾರದ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಭಾಗವಹಿಸದೇ ಇದ್ದದ್ದಕ್ಕೆ, ಪಕ್ಷಾತೀತವಾಗಿ ಎಲ್ಲಾ ಮುಖಂಡರು ಬೇಸರ ವ್ಯಕ್ತಪಡಿಸಿದ್ದಾರೆ ಎನ್ನುವ ಮಾಹಿತಿಯಿದೆ. ಕೆಲವೊಂದು ಮುಖಂಡರ ಇಂತಹ ಹಠದ ನಿರ್ಧಾರದಿಂದ ನಮ್ಮ ರಾಜಕೀಯ ವ್ಯವಸ್ಥೆಯ ಮೇಲೆಯೇ ಸಾರ್ವಜನಿಕರು ಅಪಹಾಸ್ಯ ಮಾಡುವಂತ ಸಂದರ್ಭ ಬರಬಹುದು ಎಂದು ರಾಜಕೀಯ ವಲಯದಲ್ಲಿ ಚರ್ಚೆ ನಡೆಯುತ್ತಿದೆ.