ರೈಲು ರೋಕೋ: ಐವತ್ತು ಕರವೇ ಕಾರ್ಯಕರ್ತರ ಬಂಧನ
ಉಡುಪಿ, ಸೆಪ್ಟೆಂಬರ್ 15: ತಮಿಳುನಾಡಿಗೆ ಕಾವೇರಿ ನೀರು ಹರಿಸುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿದ ಹಿನ್ನೆಲೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ(ಪ್ರವೀಣ್ ಶೆಟ್ಟಿ ಬಣ) ಕಾರ್ಯಕರ್ತರು ರೈಲ್ ರೋಕೋ ನಡೆಸಲು ಮುಂದಾದ ಘಟನೆ ಗುರುವಾರ ನಡೆದಿದೆ. ವೇದಿಕೆಯ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ.
50ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿದ್ದ ಕರವೇ ಕಾರ್ಯಕರ್ತರು ಉಡುಪಿಯ ಇಂದ್ರಾಳಿ ರೈಲು ನಿಲ್ದಾಣದ ಬಳಿ ಬೆಳಗ್ಗೆ 10.15ಕ್ಕೆ ಬಂದ ಮಂಗಳೂರು- ಮಡಗಾಂವ್ ಇಂಟರ್ ಸಿಟಿ ರೈಲನ್ನು ತಡೆಯಲು ಒಳನುಗ್ಗಿದರು. ಆದರೆ ನಗರದ ಪೊಲೀಸ್ ಸಿಬ್ಬಂದಿ ಹಾಗೂ ರೈಲ್ವೆ ಪೊಲೀಸರು ನಿಲ್ದಾಣ ಪ್ರವೇಶಿಸದಂತೆ ತಡೆದರು.[ಕನ್ನಡ ಒಕ್ಕೂಟ ಕರೆ ನೀಡಿದ್ದ ರೈಲ್ವೆ ಬಂದ್ಗೆ ನೀರಸ ಪ್ರತಿಕ್ರಿಯೆ]
ಕರವೇ ಕಾರ್ಯಕರ್ತರು ಸರಕಾರದ ವಿರುದ್ದ ಘೋಷಣೆಗಳನ್ನು ಕೂಗುತ್ತಾ ಕರ್ನಾಟಕದ ವಿರುದ್ಧವಾಗಿ ತೀರ್ಪು ಬಂದಿರುವುದನ್ನು ಖಂಡಿಸಿ, ಆಕ್ರೋಶ ವ್ಯಕ್ತಪಡಿಸಿದರು. ಪೊಲೀಸರು ಎಲ್ಲಾ ಕಾರ್ಯಕರ್ತರನ್ನು ಬಂಧಿಸಿ ಮಣಿಪಾಲ ಪೊಲೀಸ್ ಠಾಣೆಗೆ ಕರೆದೊಯ್ದರು. ರೈಲು ಯಾವುದೇ ಅಡ್ಡಿ ಇಲ್ಲದೆ ಪ್ರಯಾಣ ಮುಂದುವರೆಸಿದೆ. ರೈಲ್ವೆ ನಿಲ್ದಾಣದಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.