ಉಡುಪಿ ಜಿಲ್ಲಾಧಿಕಾರಿಯಾಗಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಅಧಿಕಾರ ಸ್ವೀಕಾರ
ಉಡುಪಿ, ಫೆಬ್ರವರಿ. 22 : ಉಡುಪಿ ಜಿಲ್ಲಾ ಪಂಚಾಯಿತಿ ಸಿಇಓ ಆಗಿದ್ದ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಅವರು ಅದೇ ಉಡುಪಿ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಬುಧವಾರ ಅಧಿಕಾರ ಸ್ವೀಕರಿಸಿದರು.
ಸರ್ಕಾರದ ಸುತ್ತೋಲೆಯಂತೆ ಜಿಲ್ಲಾಧಿಕಾರಿ ಟಿ. ವೆಂಕಟೇಶ್ ಅವರನ್ನು ಸರ್ಕಾರದ ಅಧೀನದಲ್ಲಿರುವ ಮೈಸೂರು ಶುಗರ್ ಲಿಮಿಟೆಡ್ ಕಂಪೆನಿಯ ಆಡಳಿತ ನಿರ್ದೇಶಕರಾಗಿ ಆಗಿ ವರ್ಗಾವಣೆ ಮಾಡಲಾಗಿದೆ.
ಇವರ ಸ್ಥಾನಕ್ಕೆ ಪ್ರಿಯಾಂಕಾ ಅವರನ್ನು ನೂತನ ಜಿಲ್ಲಾಧಿಕಾರಿಯಾಗಿ ನೇಮಕ ಮಾಡಿ ರಾಜ್ಯ ಸರ್ಕಾರ ಮಂಗಳವಾರ ಆದೇಶ ಹೊರಡಿಸಿದೆ.
ಮೇರಿ ಫ್ರಾನ್ಸಿಸ್ ಬಗ್ಗೆ ಒಂದಿಷ್ಟು ಪರಿಚಯ: ಐಎಎಸ್ ಅಧಿಕಾರಿಯಾಗಿರುವ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ 2015 ರ ನವೆಂಬರ್ 10ರಂದು ಉಡುಪಿ ಜಿ.ಪಂ.ನ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿದ್ದರು.
ಕೇರಳ ಮೂಲದ ಇಂಜಿನಿಯರಿಂಗ್ ಪದವೀಧರೆಯಾಗಿರುವ ಪ್ರಿಯಾಂಕಾ 2009ರ ಬ್ಯಾಚ್ ನ ಐಎಎಸ್ ಅಧಿಕಾರಿ. ಬೆಳಗಾವಿಯ ಉಪವಿಭಾಗಾಧಿಕಾರಿಯಾಗಿ ಸೇವೆ ಆರಂಭಿಸಿದ ಇವರು ಉಡುಪಿಗೆ ಆಗಮಿಸುವ ಮುನ್ನ ಚಿಕ್ಕಮಗಳೂರು ಜಿ.ಪಂ.ನ ಸಿಇಒ ಆಗಿ ಕಾರ್ಯನಿರ್ವಹಿಸಿದ್ದರು.
ವೆಂಕಟೇಶ್ ವರ್ಗಾವಣೆಗೆ ಕಾರಣ?: 'ಉಡುಪಿ ಜಿಲ್ಲೆಯಲ್ಲಿರುವ ಅಕ್ರಮ ಮರಳುಗಾರಿಕೆ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಂಡಿರುವುದೇ ತನ್ನ ವರ್ಗಾವಣೆಗೆ ಕಾರಣ' ಎಂದು ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ್ದಾರೆ.
ಹೆಜಮಾಡಿ- ಸಾಸ್ತಾನ ಟೋಲ್ ಗೇಟ್ ವಿಚಾರದಲ್ಲಿ ಟೋಲ್ ಬೆಂಬಲಿಸುವ ಆರೋಪದಡಿ ವೆಂಕಟೇಶ್ ಅವರನ್ನು ಈ ಮೊದಲೇ ಸರ್ಕಾರ ವರ್ಗಾವಣೆ ಮಾಡುವ ನಿರ್ಧಾರ ಮಾಡಲಾಗಿತ್ತು.
ಅದಕ್ಕಾಗಿ ವೆಂಕಟೇಶ್ ಅವರು ಸುದ್ದಿಗೋಷ್ಟಿ ಕರೆದು ಜಿಲ್ಲಾಡಳಿತಕ್ಕೆ ಟೋಲ್ ಸಂಗ್ರಹಿಸುವ ನಿಲ್ಲಿಸುವ ಅಧಿಕಾರವಿಲ್ಲ, ನನ್ನ ಮೇಲೆ ಮಾಡಿರುವ ಆರೋಪ ಸುಳ್ಳು ಎಂದು ಸ್ಪಷ್ಟನೆ ನೀಡಿದ್ದರು. ಇದರ ನಡುವೆಯೇ ಇದೀಗ ವೆಂಕಟೇಶರನ್ನು ವರ್ಗಾವಣೆ ಮಾಡಲಾಗಿದೆ.