ಇಫ್ತಾರ್ ನಿಂದ ಹಿಂದೂ ಧರ್ಮದ ಶ್ರೇಷ್ಠತೆ ಹೆಚ್ಚಿದೆ - ಪೇಜಾವರ ಶ್ರೀ ತಿರುಗೇಟು
ಉಡುಪಿ, ಜೂನ್ 26: ಕೃಷ್ಣ ಮಠದಲ್ಲಿ ಮುಸ್ಲಿಂ ಬಾಂಧವರಿಗಾಗಿ ಆಯೋಜಿಸಿದ್ದ ಇಫ್ತಾರ್ ಕೂಟದಿಂದ 'ಹಿಂದೂ ಧರ್ಮಕ್ಕೆ ಯಾವುದೇ ರೀತಿಯ ಅಪಚಾರವಾಗಿಲ್ಲ. ಬದಲಿಗೆ ಹಿಂದೂ ಧರ್ಮದ ಶ್ರೇಷ್ಠತೆ ಹೆಚ್ಚಿದೆ," ಎಂದು ಪೇಜಾವರ ವಿಶ್ವೇಶ ತೀರ್ಥ ಸ್ವಾಮೀಜಿ ತಿರುಗೇಟು ನೀಡಿದ್ದಾರೆ.
ಕೃಷ್ಣ ಮಠದಲ್ಲಿ ಇಫ್ತಾರ್ ಮಾಡಿದ್ದಕ್ಕೆ ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಆಕ್ಷೇಪ ವ್ಯಕ್ತಪಡಿಸಿದ್ದರು. ಇದಕ್ಕೆ ಸ್ಪಷ್ಟನೆ ನೀಡಿರುವ ಸ್ವಾಮೀಜಿ, "ನಾವು ನಮ್ಮ ಧರ್ಮಕ್ಕೆ ಅಪಚಾರವಾಗದಂತೆ ಇತರ ಧರ್ಮದವರೊಂದಿಗೆ ಪ್ರೀತಿಯ ಸಂಬಂಧವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತಿದ್ದೇವೆ," ಎಂದು ಹೇಳಿದ್ದಾರೆ.
ಉಡುಪಿ ಕೃಷ್ಣ ಮಠದಲ್ಲಿ ಪೇಜಾವರರಿಂದ ಐತಿಹಾಸಿಕ ಇಫ್ತಾರ್ ಕೂಟ
"ಹಿಂದೂ ಧರ್ಮಕ್ಕೆ ನಿಷ್ಟರಾಗಿದ್ದುಕೊಂಡು ಹಿಂದೂ ಧರ್ಮಕ್ಕೆ ಅನ್ಯಾಯವಾದಾಗ ಹೋರಾಟ ಮಾಡಿದ್ದೇನೆ. ಮುಂದೇಯೂ ಮಾಡುತೇನೆ. ಇದೇ ವೇಳೆ ಇತರ ಧರ್ಮದವರೊಂದಿಗೆ ಸೌಹಾರ್ದತೆಯನ್ನು ಕಾಪಾಡುವುದು ಕೂಡ ಅಷ್ಟೆ ಮುಖ್ಯವಾಗಿದೆ," ಎಂದರು.
"ಉಪವಾಸ ಬಿಡುವ ವೇಳೆಯಲ್ಲಿ ನಮಾಝ್ ಮಾಡುವುದು ಅವರ ಧರ್ಮದ ಪದ್ಧತಿ ಅದಕ್ಕಾಗಿ ಅವರು ಸ್ಥಳವನ್ನು ಕೇಳಿದ್ದರು. ಅದರಂತೆ ಅನ್ನಛತ್ರದಲ್ಲಿ ಅವಕಾಶ ಕಲ್ಪಿಸಲಾಗಿತ್ತು. ಅದು ಸಾರ್ವಜನಿಕ ಸ್ಥಳವಾಗಿದೆ," ಎಂದು ಹೇಳಿದ್ದಾರೆ.
'ಗೋ ಹಂತಕರಿಗೆ ಇಫ್ತಾರ್ ಕೂಟ ಆಯೋಜಿಸಿರುವುದು ಶ್ರೀಗಳಿಗೆ ಶೋಭೆಯಲ್ಲ'
ಈ ನಡುವೆ ಗೋಮಾಂಸ ಭಕ್ಷಕರನ್ನು ಕರೆತಂದು ಮಠದ ಆವರಣದ ಒಳಗೆ ನಮಾಜ್ ಅವಕಾಶ ನೀಡಿರುವುದರ ಬಗ್ಗೆ ಮಾತನಾಡಿದ ಸ್ವಾಮೀಜಿವರು, "ಮುಸ್ಲಿಮರು ಗೋಮಾಂಸ ಭಕ್ಷಣೆ ಮಾಡುತ್ತಿದ್ದಾರೆ. ಅವರಂಥೆಯೇ ಕೆಲವೊಂದು ಹಿಂದೂಗಳು ಕೂಡ ಮಾಡುತ್ತಿದ್ದಾರೆ. ನಾವು ಕೇವಲ ಅವರಲ್ಲಿ ಗೋಮಾಂಸ ತಿನ್ನಬೇಡಿ ಎಂಬ ವಿನಂತಿ ಮಾಡಬಹುದೇ ವಿನಃ ಅದನ್ನೇ ಅವರ ಮೇಲೆ ಹೇರಲು ಸಾಧ್ಯವಿಲ್ಲ," ಎಂದರು.
"ಮುಸ್ಲಿಂ ಸಮುದಾಯ ಕೂಡ ಹಲವಾರು ಬಾರಿ ಕೃಷ್ಣ ಮಠದ ಪರವಾಗಿ ನಿಂತಿದೆ. ಉಡುಪಿ ಚಲೋ ಸಮಯದಲ್ಲಿ ಮಠಕ್ಕೆ ಮುತ್ತಿಗೆ ಹಾಕುವ ಬೆದರಿಕೆ ಒಡ್ಡಿದಾಗ ಮುಸ್ಲಿಂ ಸಮುದಾಯ ಮಠದ ಬೆಂಬಲಕ್ಕೆ ನಿಂತಿದ್ದರು. ಅಲ್ಲದೆ ಪರ್ಯಾಯ ಸಂದರ್ಭದಲ್ಲಿ ಅವರ ಸೇವೆ ಶ್ಲಾಘನಾರ್ಹವಾಗಿದೆ. ಅಂತೆಯೆ ರಮ್ಜಾನ್ ಹಬ್ಬದ ಉಪವಾಸದ ಸಮಯದಲ್ಲಿ ಅವರಿಗಾಗಿ ಸೌಹಾರ್ದ ಕೂಟವನ್ನು ನಾವು ಆಯೋಜಿಸಿದ್ದು ಕೇವಲ ನಮ್ಮ ಮತ್ತು ಅವರ ನಡುವೆ ಇರುವ ಅನೋನ್ಯತೆ ಮುಂದುವರೆಯಲಿ ಎಂಬ ಉದ್ದೇಶದಿಂದ ಮಾತ್ರ," ಎಂದು ಸ್ಪಷ್ಟಪಡಿಸಿದ್ದಾರೆ.
ಇದರ ಆಯೋಜನೆಯಿಂದ ಹಿಂದೂ ಧರ್ಮಕ್ಕೆ ಯಾವುದೇ ರೀತಿಯ ಅಪಚಾರವಾಗಿಲ್ಲ ಬದಲಾಗಿ ಹಿಂದೂ ಧರ್ಮದ ಶ್ರೇಷ್ಠತೆ ಹೆಚ್ಚಿದಂತಾಗಿದೆ ಎಂದರು.