ದಲಿತನಿಗೆ ವೈಷ್ಣವ ದೀಕ್ಷೆ ನೀಡಿದ ಪೇಜಾವರಶ್ರೀ
ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ, ಗುರುವಾರದಂದು ಉಡುಪಿ ಕೃಷ್ಣ ಮಠದಲ್ಲಿ ಪಾಂಡು ಎಂಬುವವರಿಗೆ ವೈಷ್ಣವ ದೀಕ್ಷೆ ನೀಡಿ ಕೃಷ್ಣ ಮಂತ್ರವನ್ನು ಬೋಧಿಸಿದರು.
ಉಡುಪಿ, ಎಪ್ರಿಲ್ 7 : ಉಡುಪಿ ಜಿಲ್ಲೆಯ ಪಡುಬಿದ್ರೆ ನಿವಾಸಿ, ದಲಿತ ಸಮುದಾಯಕ್ಕೆ ಸೇರಿದ ಪಾಂಡು ಎಂಬುವವರು ಸ್ವ ಇಚ್ಛೆಯಿಂದ ವೈಷ್ಣವ ದೀಕ್ಷೆ ಸ್ವೀಕರಿಸಿದ್ದಾರೆ.
ಅವರಿಗೆ ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ, ಗುರುವಾರದಂದು ಉಡುಪಿ ಕೃಷ್ಣ ಮಠದಲ್ಲಿ ವೈಷ್ಣವ ದೀಕ್ಷೆ ನೀಡಿ ಕೃಷ್ಣ ಮಂತ್ರವನ್ನು ಬೋಧಿಸಿದರು. ಈ ಕುರಿತು ಮಾತನಾಡಿದ ಪೇಜಾವರ ಮಠಾಧೀಶ ಶ್ರೀ ವಿಶ್ವೇಶ ತೀರ್ಥರು, ' ಹಿಂದುಳಿದವರು, ದಲಿತರು ಸೇರಿ ಸಮಾಜದಲ್ಲಿರುವ ವಿವಿಧ ವರ್ಗದ ಜನರು ಅಪೇಕ್ಷಿಸಿದ್ದಲ್ಲಿ ನಾವು ದೀಕ್ಷೆ ನೀಡುತ್ತೇವೆ' ಎಂದರು.[ಉಡುಪಿಯಲ್ಲಿ ಜಿಲ್ಲಾಧಿಕಾರಿ ಮೇಲೆ ಹಲ್ಲೆ: ಪೇಜಾವರ ಶ್ರೀ ಖಂಡನೆ]
ಕೆಲ ತಿಂಗಳ ಹಿಂದೆ ಕೆಲವು ಪ್ರಗತಿಪರರು ಪೇಜಾವರ ಶ್ರೀಪಾದರು ದಲಿತರನ್ನ ತಮ್ಮ ಶಿಷ್ಯರನ್ನಾಗಿ ಸ್ವೀಕರಿಸಿ. ಉತ್ತರಾಧಿಕಾರ ನೀಡುವಂತೆ ಸವಾಲು ಹಾಕಿದ್ದರು. ಈ ವೇಳೆ ಪೇಜಾವರ ಶ್ರೀ, ' ಮಾಧ್ವರನ್ನ ಬಿಟ್ಟು ಬೇರೆ ಸಮುದಾಯದವರನ್ನ ಉತ್ತರಾಧಿಕಾರಿಯನ್ನಾಗಿ ಮಾಡಲು ಮಠದಲ್ಲಿ ಸಂಪ್ರದಾಯವಿಲ್ಲ' ಎಂದಿದ್ದನ್ನು ಇಲ್ಲಿ ಸ್ಮರಿಸಬಹುದು.
ಉತ್ತರಾಧಿಕಾರ ನೀಡುವ ಸಂಪ್ರದಾಯವಿಲ್ಲದಿದ್ದರೂ, ಭಕ್ತರಿಗೆ ವೈಷ್ಣವ ದೀಕ್ಷೆ ನೀಡಲು ತಾವು ಸಿದ್ಧರಿದ್ದೇವೆಂದು ಶ್ರೀಗಳು ಅಂದೂ ಹೇಳಿದ್ದರು. ಇದೀಗ ಅದನ್ನು ಪುನರುಚ್ಛರಿಸಿದ ಶ್ರೀಗಳು, ಈ ಮೂಲಕ ಅಸ್ಪ್ರಶ್ಯತೆಯನ್ನು ದೂರಮಾಡಿ, ಸಮಾನತೆಯಿಂದ ಬದುಕುವ ಕರೆ ನೀಡಿದ್ದಾರೆ.
ವೈಷ್ಣವ ದೀಕ್ಷೆ ಸ್ವೀಕರಿಸಿದವರು ಮದ್ಯಪಾನ, ಮಾಂಸಾಹಾರವನ್ನು ಕಟ್ಟುನಿಟ್ಟಾಗಿ ತ್ಯಜಿಸಬೇಕು ಎಂಬುದನ್ನೂ ಈ ಸಮಯದಲ್ಲಿ ನೆನಪಿಸಲಾಯಿತು.