ಹಾಜಿ ಆಸ್ಪತ್ರೆ ಖಾಸಗೀಕರಣಕ್ಕೆ ವಿರೋಧಿಸಿ ಜ.6ರಂದು ಪ್ರತಿಭಟನೆ
ಉಡುಪಿ, ಜನವರಿ 4 : ಉಡುಪಿ ಜಿಲ್ಲಾ ಸರ್ಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯನ್ನು ಖಾಸಗಿಯವರಿಗೆ ಪರಭಾರೆ ಮಾಡುವ ರಾಜ್ಯ ಸರ್ಕಾರದ ನಿರ್ಧಾರಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಆಸ್ಪತ್ರೆ ಉಳಿವಿಗಾಗಿ ನಾಗರಿಕರ ಒಕ್ಕೂಟದ ವತಿಯಿಂದ ಜನವರಿ 6ರ ಸಂಜೆ 4 ಕ್ಕೆ ಪ್ರತಿಭಟನಾ ಮೆರವಣಿಗೆ ಮತ್ತು ನಗರದ ಚಿತ್ತರಂಜನ್ ವೃತ್ತದಲ್ಲಿ ಸಾರ್ವಜನಿಕ ಪ್ರತಿಭಟನಾ ಸಭೆಯನ್ನು ಆಯೋಜಿಸಲಾಗಿದೆ.
ಪ್ರತಿಭಟನೆಯ ಜೊತೆಗೆ ಸರ್ಕಾರದ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರುವುದಕ್ಕೆ ಸಿದ್ಧತೆಗಳನ್ನು ನಡೆಸಿದೆ. ಬಡವರ ಆರೋಗ್ಯ ಸೇವೆಯನ್ನು ಪಡೆಯುವ ಮೂಲಭೂತ ಹಕ್ಕಾಗಿರುವ ಈ ಆಸ್ಪತ್ರೆ ಮತ್ತು ಆಸ್ಪತ್ರೆ ಇರುವ 3 ಎಕರೆ ಭೂಮಿ ದಿವಂಗತ ಹಾಜಿ ಅಬ್ದುಲ್ಲಾ ಸಾಹೇಬರ ಒಡೆತನದ್ದು. ಅವರು ಅದನ್ನು 1929ರಲ್ಲಿ ಆಸ್ಪತ್ರೆಗೆಂದೇ ಸರ್ಕಾರಕ್ಕೆ ದಾನ ನೀಡಿದ್ದರು. ಅದನ್ನು ಯಾವುದೇ ಕಾರಣಕ್ಕೂ ಪರಭಾರೆ ಮಾಡಬಾರದು ಎಂದು ವಿಲ್ನಲ್ಲಿ ಷರತ್ತನ್ನೂ ವಿಧಿಸಿದ್ದಾರೆ.
ಆದರೆ, ಸರ್ಕಾರ ಈ ಷರತ್ತನ್ನು ಉಲ್ಲಂಘಿಸಿ ಅದನ್ನು ಖಾಸಗಿಯವರಿಗೆ ನೀಡುತ್ತಿದೆ. ಆದ್ದರಿಂದ ಬಡವರ ಅನುಕೂಲವಾಗಿರುವ ಈ ಆಸ್ಪತ್ರೆಯನ್ನು ಉಳಿಸಿಕೊಳ್ಳುಲು ಪ್ರತಿಭಟನೆಯ ನಡೆಯಲಿದೆ.
ಈಗಾಗಲೇ ಈ ಬಗ್ಗೆ ಒಂದು ಸುತ್ತಿನ ಪ್ರತಿಭಟನೆ ನಡೆಸಲಾಗಿದೆ. ಆದರೂ ಈ ಆಸ್ಪತ್ರೆಯ ಗುತ್ತಿಗೆ ವಹಿಸಿಕೊಂಡಿರುವ ಅನಿವಾಸಿ ಭಾರತೀಯ ಉದ್ಯಮಿ ಬಿ.ಆರ್.ಶೆಟ್ಟಿ ಅವರೊಂದಿಗೆ ಕಾನೂನಾತ್ಮಕ ಒಪ್ಪಂದವನ್ನು ಮಾಡಿಕೊಳ್ಳದೇ, ತರಾತುರಿಯಲ್ಲಿ ಮುಖ್ಯಮಂತ್ರಿ ಮತ್ತು ಆರೋಗ್ಯ ಸಚಿವರು ಉಡುಪಿಗೆ ಬಂದು ಈ ಭೂಮಿಯಲ್ಲಿ ಬಿ.ಆರ್. ಶೆಟ್ಟಿ ಅವರ ಖಾಸಗಿ ಆಸ್ಪತ್ರೆಗೆ ಶಂಕುಸ್ಥಾಪನೆ ಮಾಡಿದ್ದಾರೆ.
ಈ ಬಗ್ಗೆ ಮಾಹಿತಿ ಹಕ್ಕಿನಂತೆ ಅರ್ಜಿಗಳನ್ನು ಸಲ್ಲಿಸಿದರೂ ಸರ್ಕಾರ ಅನೇಕ ಮಾಹಿತಿಗಳನ್ನು ನೀಡುತ್ತಿಲ್ಲ. ನೀಡಿರುವ ಮಾಹಿತಿಗಳೂ ಅಧಿಕೃತವಾಗಿಲ್ಲ. ಮಾಹಿತಿ ಹಕ್ಕಿನಡಿ ಅರ್ಜಿ ಸಲ್ಲಿಸಿದವರಿಗೆ ಗುತ್ತಿಗೆದಾರರು ನೋಟಿಸ್ ನೀಡಿದ ಘಟನೆಗಳೂ ನಡೆದಿವೆ.
ಉದ್ಯಮಿ ಮತ್ತು ಸರ್ಕಾರದ ನಡುವೆ ಇನ್ನೂ ಅಧಿಕೃತ ಒಪ್ಪಂದ ಆಗಿಲ್ಲ. ಆಸ್ಪತ್ರೆ ನಡೆಸುವುದಕ್ಕೆ ಖಾಸಗಿ ಉದ್ಯಮಿಗೆ ಇರುವ ಅರ್ಹತೆಯನ್ನು ಸರ್ಕಾರ ಪರಿಶೀಲಿಸಿಲ್ಲ. ಸರ್ಕಾರದ ಈ ಎಲ್ಲ ನಡೆಗಳು ಸಂಶಯಾಸ್ಪದವಾಗಿದ್ದು, ಪ್ರತಿಭಟನೆಯ ಜೊತೆಗೆ ಸರ್ಕಾರದ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರುವುದಕ್ಕೆ ನಾಗರಿಕರ ಒಕ್ಕೂಟ ಸಿದ್ದತೆ ನಡೆಸಿದೆ.