ಉಡುಪಿ ಬಸ್ಸಿಗಾಗಿ ಕಾಯುತ್ತಿದ್ದ ತಾಯಿ-ಮಗು ಸ್ಮಶಾನ ಸೇರಿದರು
ಉಡುಪಿ, ನವೆಂಬರ್. 14 : ರಾಷ್ಟ್ರೀಯ ಹೆದ್ದಾರಿ 66ರ ಪಾಂಗಾಳ ಬಸ್ ನಿಲ್ದಾಣದಲ್ಲಿ ಉಡುಪಿಗೆ ತೆರಳುವ ಬಸ್ಸಿಗಾಗಿ ಕಾಯುತ್ತಿದ್ದ ತಾಯಿ-ಮಗುವಿಗೆ ಸ್ವಿಫ್ಟ್ ಕಾರೊಂದು ಡಿಕ್ಕೆ ಹೊಡೆದ ಪರಿಣಾಮ ಇಬ್ಬರೂ ಮೃತಪಟ್ಟ ಘಟನೆ ಭಾನುವಾರ ಕಾಪು ಪೊಲೀಸ್ ಠಾಣಾ ವ್ಯಾಪ್ತಿಯ ನೆಡದಿದೆ.
ಮೃತರನ್ನು ಇನ್ನಂಜೆ ಮುಂಡೇಡಿಯ ಪುಷ್ಪ (36) ಹಾಗೂ ಆಕೆಯ ಮೂರು ವರ್ಷದ ಮಗ ತಕ್ಷ್ ಎಂದು ಗುರುತಿಸಲಾಗಿದೆ. ನಿರಂಜನ್ ಎಂಬವರ ಪತ್ನಿ ಪುಷ್ಪ ಅಂಗನವಾಡಿ ಸಹಾಯಕಿಯಾಗಿದ್ದು, ಮಗನೊಂದಿಗೆ ಉಡುಪಿಗೆ ತೆರಳಲು ಪಾಂಗಾಳ ಬಸ್ ನಿಲ್ದಾಣದಲ್ಲಿ ಬಸ್ಗಾಗಿ ಕಾಯುತ್ತಿದ್ದಾಗ ಕಾರೊಂದು ಡಿಕ್ಕೆ ಹೊಡೆದಿದೆ.
ಸ್ಥಳದಲ್ಲಿ ಸೇರಿದ ಸಾರ್ವಜನಿಕರು ತಕ್ಷಣ ತಾಯಿ-ಮಗುವನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ಕೊಂಡೊಯ್ದರು. ಅಷ್ಟರಲ್ಲಿಯೇ ತಾಯಿ ಮತ್ತು ಮಗ ಇಬ್ಬರು ಮೃತಪಟ್ಟಿರುವುದನ್ನು ವೈದ್ಯರು ದೃಢಪಡಿಸಿದರು.
ಕೇರಳ ಮೂಲದ ಸ್ವಿಫ್ಟ್ ಕಾರು ಮಂಗಳೂರಿನಿಂದ ಉಡುಪಿಯತ್ತ ಅತೀ ವೇಗವಾಗಿ ಸಾಗುತ್ತಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಅಪಘಾತದ ಬಳಿಕ ಕಾರು ಪಾಂಗಾಳ ಪೇಟೆ ಸಮೀಪದ ಹೊಂಡಕ್ಕೆ ಇಳಿದಿದೆ. ಈ ಬಗ್ಗೆ ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.