ಕೊಲ್ಲೂರು ಕ್ಷೇತ್ರದ ಅಭಿವೃದ್ಧಿಗೆ ಮಾಸ್ಟರ್ ಪ್ಲ್ಯಾನ್ : ಲಮಾಣಿ
ತಮ್ಮ ಜನ್ಮ ದಿನದ ಪ್ರಯುಕ್ತ ಕೊಲ್ಲೂರಿಗೆ ಭೇಟಿ ನೀಡಿ ದೇವರಿಗೆ ಪೂಜೆ ಸಲ್ಲಿಸಿದ ಬಳಿಕ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು. ಈ ಸಂದರ್ಭದಲ್ಲಿ ಮಾಸ್ಟರ್ ಪ್ಲಾನ್ ಮೂಲಕ ಕೊಲ್ಲೂರು ಅಭಿವೃದ್ಧಿಪಡಿಸಲಾಗುವುದು ಎಂದರು.
ಉಡುಪಿ, ಮೇ 25: ಕೊಲ್ಲೂರು ಶ್ರೀ ಮೂಕಾಂಬಿಕಾ ಕ್ಷೇತ್ರವನ್ನು ದಕ್ಷಿಣ ಭಾರತದ ಪ್ರಸಿದ್ದ ಯಾತ್ರಾ ಸ್ಥಳವಾಗಿ ಅಭಿವೃದ್ಧಿಪಡಿಸಲಾಗುವುದು. ಈ ದಿಸೆಯಲ್ಲಿ ಮಾಸ್ಟರ್ ಪ್ಲ್ಯಾನ್ ರೂಪಿಸಿ ಕಾರ್ಯಯೋಜನೆ ಹಮ್ಮಿಕೊಳ್ಳಲಾಗುವುದು ಎಂದು ರಾಜ್ಯ ಮುಜರಾಯಿ ಹಾಗೂ ಜವುಳಿ ಖಾತೆ ಸಚಿವ ರುದ್ರಪ್ಪ ಲಮಾಣಿ ಹೇಳಿದ್ದಾರೆ.
ತಮ್ಮ ಜನ್ಮ ದಿನದ ಪ್ರಯುಕ್ತ ಕೊಲ್ಲೂರಿಗೆ ಭೇಟಿ ನೀಡಿ ದೇವರಿಗೆ ಪೂಜೆ ಸಲ್ಲಿಸಿದ ಬಳಿಕ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.[ಉಡುಪಿಯಲ್ಲಿ ಜೂನ್ ನಲ್ಲಿ ಜಿಲ್ಲಾಡಳಿತದಿಂದ ಸಾವಯವ ಸಂತೆ]
"ಅಂದಾಜು 26 ಕೋಟಿ ರೂ ವೆಚ್ಚದಲ್ಲಿ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಅಭಿವೃದ್ಧಿಗಾಗಿ ಮಾಸ್ಟರ್ ಪ್ಲಾನ್ ರೂಪಿಸಲಾಗಿದೆ. 76 ಕೋಟಿ .ರೂ. ವೆಚ್ಚದಲ್ಲಿ ಮೈಸೂರಿನ ಚಾಮುಂಡಿ ಕ್ಷೇತ್ರ ಹಾಗೂ ಸವದತ್ತಿ ಕ್ಷೇತ್ರದಲ್ಲಿ 246 ಕೊಠಡಿಗಳ ವಸತಿ ಗೃಹ ಸೇರಿದಂತೆ ವಿವಿಧ ಅಭಿವೃದ್ಧಿ ಕೆಲಸಗಳಿಗೆ ಚಾಲನೆ ನೀಡಲಾಗಿದೆ. ರಾಜ್ಯದಲ್ಲಿ ಎ ಹಾಗೂ ಬಿ ದರ್ಜೆಯ ದೇವಾಲಯಗಳಿಂದ ಬರುವ ಆದಾಯಗಳನ್ನು ಕ್ರೋಢೀಕರಿಸಿಕೊಂಡು ಅಂದಾಜು 400 ಕೋಟಿ ರೂಪಾಯಿ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕೆಲಸಗಳನ್ನು ಮಾಡಲಾಗುವುದು" ಎಂದರು.[ಉಚ್ಚಿಲ ರುದ್ರಭೂಮಿ ವಿವಾದ: ಪೇಜಾವರ ಶ್ರೀ ಮಧ್ಯಸ್ಥಿಕೆಗೆ ಮನವಿ]
"ಕೊಲ್ಲೂರು ದೇವಸ್ಥಾನದಲ್ಲಿ ತಾತ್ಕಾಲಿಕ ನೆಲೆಯಲ್ಲಿ ಸೇವೆ ಸಲ್ಲಿಸುತ್ತಿರುವ 74 ನೌಕರರು ಸೇರಿದಂತೆ ರಾಜ್ಯದ ವಿವಿಧ ಮುಜರಾಯಿ ದೇವಸ್ಥಾನದಲ್ಲಿ ತಾತ್ಕಾಲಿಕ ನೆಲೆಯಲ್ಲಿ ಸೇವೆ ಸಲ್ಲಿಸುತ್ತಿರುವ ನೌಕರರನ್ನು ಖಾಯಂಗೊಳಿಲು ಕಾನೂನು ತಜ್ಞರ ಅಭಿಪ್ರಾಯಗಳನ್ನು ತೆಗೆದುಕೊಳ್ಳಲಾಗುವುದು. 1977 ಸೆಕ್ಷನ್ 8ರಂತೆ ಎ ಹಾಗೂ ಬಿ ದರ್ಜೆಯ ನೌಕರರ ವೇತನವನ್ನು ಸ್ಲಾಬ್ ನಿರ್ಧಾರ ಮಾಡಲಾಗುವುದು. ನೌಕರರ ಹುದ್ದೆಗೆ ಸಮಾನವಾದ ವಿದ್ಯಾರ್ಹತೆ, ವೇತನ ತಾರತಮ್ಯ ಹಾಗೂ ವೃಂದ ನಿಯಮಾವಳಿಗಳ ರೂಪಣೆಗಾಗಿ ಸೇವಾ ಹಾಗೂ ಕಾನೂನು ತಜ್ಞರ ಅಭಿಪ್ರಾಯವನ್ನು ಪಡೆದುಕೊಂಡು ರಾಜ್ಯಾದ್ಯಾಂತ ಏಕರೂಪದ ನೀತಿಯನ್ನು ಜಾರಿಗೊಳಿಸಲು ಪ್ರಯತ್ನಿಸಲಾಗುವುದು" ಎಂದರು.