ಉಡುಪಿಯ ಮಿಲಾಗ್ರಿಸ್ ಕೆಥೆಡ್ರೆಲ್ ಚರ್ಚ್ ನ ಅಮೃತಮಹೋತ್ಸವ
ಉಡುಪಿ, ಡಿಸೆಂಬರ್. 09 : 300 ವರ್ಷ ಇತಿಹಾಸ ಹೊಂದಿರುವ ಉಡುಪಿಯ ಕಲ್ಯಾಣ್ ಪುರ್ ಮಿಲಾಗ್ರಿಸ್ ಕೆಥೆಡ್ರೆಲ್ ಚರ್ಚ್ ತನ್ನ ಅಮೃತಮಹೋತ್ಸವದ ಆಚರಣೆಯನ್ನು ಡಿಸೆಂಬರ್ 09ರಿಂದ ಡಿ.12ರವರೆಗೆ ವಿಜೃಂಭಣೆಯಿಂದ ಆಚರಿಸಲಿದೆ.
ಈ ಅಮೃತಮಹೋತ್ಸವಕ್ಕೆ ಗೌರವಾನ್ವಿತ ಅತಿಥಿಗಳಾಗಿ ಬ್ಯಾಪ್ಟಿಸ್ಟ್ ಮಿನೇಜಸ್, ಮೀನುಗಾರಿಕೆ ಮತ್ತು ಕ್ರೀಡೆ ಸಚಿವ ಪ್ರಮೋದ್ ಮಧ್ವರಾಜ್, ವಿಧಾನ ಸಭೆ ಮುಖ್ಯ ಸಚೇತಕ ಐವನ್ ಡಿಸೋಜಾ, ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್ ,ಶಾಸಕ ಜೆ.ಆರ್.ಲೋಬೊ ಹಾಗೂ ಉಡುಪಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು ಆಗಮಿಸಲಿದ್ದಾರೆ.
ಅಮೃತ ಮಹೋತ್ಸವ ಅಂಗವಾಗಿ, ವಿವಿಧ ಅಭಿವೃದ್ಧಿ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ಅಮೃತ ಮಹೋತ್ಸವ ಹಿನ್ನಲೆಯಲ್ಲಿ ಚರ್ಚ್ನ ಮುಂಭಾಗವನ್ನು ಹೊಸದಾಗಿ ರೂಪಿಸಲಾಗಿದೆ. ಇದಲ್ಲದೆ ಚರ್ಚ್ನ ಮೇಲ್ಛಾವಣಿಯನ್ನು ದುರಸ್ತಿ ಮಾಡಲಾಗಿದೆ.
ಇದೇ ಬರುವ ಡಿ. 12ರಂದು ಉಡುಪಿ ಕ್ಯಾಥೊಲಿಕ್ ಡಯಾಸಿಸ್ನ ಬಿಷಪ್ ಆಗಿರುವ ಡಾ ಜೆರಾಲ್ಡ್ ಐಸಾಕ್ ಲೋಬೊ ರವರು ಹೊಸದಾಗಿ ನಿರ್ಮಿಸಿದ ಚರ್ಚ್ನ ಮುಂಭಾಗವನ್ನು ಆಶೀರ್ವದಿಸಲಿದ್ದಾರೆ. ನಂತರ ಸ್ತೋತ್ರ ಸಲ್ಲಿಸುವ ಪ್ರಾರ್ಥನೆ ನಡೆಯಲಿದೆ.
ಇದಲ್ಲದೆ 300 ವರ್ಷದ ಇತಿಹಾಸ ಇರುವ ಈ ಚರ್ಚ್ನ ಆಚರಣೆಯ ಸಂದರ್ಭ ಊಟದ ವ್ಯವಸ್ಥೆಯನ್ನು ಮಾಡಲಾಗಿದೆ. ಕಾರ್ಯಕ್ರಮಕ್ಕೆ ಮತ್ತಷ್ಟು ಮೆರಗು ನೀಡಲು ಕುಂದಾಪುರದಿಂದ ಕಲಾಮೃತ ತಂಡ ಕೊಂಕಣಿ ನಾಟಕ, "ಕೊನಿ ಕಾಯ್ ಉನ್ಯರ್ ನಾ" ಪ್ರದರ್ಶನ ಮಾಡಲಿದೆ.