ಫೆ.24ರಂದು ಉಡುಪಿ ಶ್ರೀ ಕೃಷ್ಣ ಮಠಕ್ಕೆ ಮಾತಾ ಅಮೃತಾನಂದಮಯಿ ಭೇಟಿ
ಉಡುಪಿ, ಜನವರಿ. 17 : ಅಮ್ಮ ಎಂದು ಖ್ಯಾತಿ ಪಡೆದಿರುವ ಮಾತಾ ಅಮೃತಾನಂದಮಯಿ ಅವರು ಇದೇ ಮೊದಲ ಬಾರಿಗೆ ಫೆಬ್ರವರಿ 24ರಂದು ಉಡುಪಿಗೆ ಆಗಮಿಸಲಿದ್ದಾರೆ.
ಅಮ್ಮ ಅವರು ಫೆಬ್ರವರಿ 24ರಂದು ಉಡುಪಿಗೆ ಆಗಮಿಸಿ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡುವರು. ಫೆಬ್ರವರಿ 25ರಂದು ಎಂಜಿಎಂ ಮೈದಾನದಲ್ಲಿ ಸಾರ್ವಜನಿಕ ದರ್ಶನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು.
ಅದಕ್ಕೂ ಮೊದಲು ಫೆಬ್ರವರಿ 23ರಂದು ಮಂಗಳೂರಿನಲ್ಲಿರುವ ಬೋಳೂರಿನ ಬ್ರಹ್ಮಸ್ಥಾನಕ್ಕೆ ಆಗಮಿಸಿ ಸಾರ್ವಜನಿಕ ದರ್ಶನ ನೀಡುವರು.
ಅಂತಾರಾಷ್ಟ್ರೀಯ ಖ್ಯಾತಿಗೆ ಪಾತ್ರರಾದ ಅಮೃತಾನಂದಮಯಿ ಅಧ್ಯಾತ್ಮ ಜತೆ ಸಾಮಾಜಿಕ ಸೇವಾ ಚಟುವಟಿಕೆಗಳಿಂದ ವಿಶಿಷ್ಟ ಗೌರವಕ್ಕೆ ಪಾತ್ರರಾಗಿದ್ದಾರೆ.
ಮಂಗಳೂರಿನ ಶ್ರೀ ಮಂಗಳಾಮೃತ ಚೈತನ್ಯ ಸ್ವಾಮಿ ಅಮ್ಮನವರ ನೇತೃತ್ವದಲ್ಲಿ ಮಂಗಳೂರು ಸಮಿತಿ ಸಹಭಾಗಿತ್ವದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಜನೆ, ಕೀರ್ತನೆ, ಧ್ಯಾನ, ಅಮ್ಮದಿವ್ಯಾಲಿಂಗನ ನಡೆಯಲಿದೆ ಎಂದು ಮಾತಾ ಅಮೃತಾನಂದಮಯಿ ಸೇವಾ ಸಮಿತಿಯ ಸದಸ್ಯರು ತಿಳಿಸಿದ್ದಾರೆ.
ಮಾತಾ ಅಮೃತಾನಂದಮಯಿ ಅವರ ಸತ್ಸಂಗವು ಭಜನೆ, ಸಂಕೀರ್ತನೆ, ಧ್ಯಾನ ಸಹಿತವಾಗಿದ್ದು ಭಕ್ತರಲ್ಲಿ ಅಧ್ಯಾತ್ಮತೆಯನ್ನು ಗಾಢಗೊಳಿಸಿದೆ. ಸದ್ಗುರುವಾಗಿ ಅವರು ನೀಡುವ ಮಾರ್ಗದರ್ಶನ ಶೈಲಿಯೇ ಅನನ್ಯ.
ಭಾರತೀಯ ಧಾರ್ಮಿಕ, ಆಧ್ಯಾತ್ಮಿಕ ಕ್ಷೇತ್ರಕ್ಕೆ ನೀಡುತ್ತಿರುವ ಕೊಡುಗೆ ಆದರ್ಶಯುತ. ಕಡುಬಡವರು, ಶೋಷಿತರು, ಅನಾಥರಿಗೆ ಆಶಾಕಿರಣವಾಗಿದ್ದಾರೆ.