ಲಿಂಗಾಯತ ಧರ್ಮ: 'ಅಲ್ಪಸಂಖ್ಯಾತರಾಗುವುದು ಸುಲಭವಲ್ಲ' - ಪೇಜಾವರ ಶ್ರೀ
ಉಡುಪಿ, ಜುಲೈ 24: "ಬಸವಣ್ಣ ವೇದವನ್ನು ಒಪ್ಪಿದ್ದಾರೆ ಕೆಲವು ವಿಚಾರದಲ್ಲಿ ಟೀಕೆ ಮಾಡಿದ್ದಾರೆ ಆದರೆ ಬಸವಣ್ಣ ಶಿವನನ್ನು ಆರಾಧಿಸಲಿಲ್ಲವೇ? ಶಿವನ ಆರಾಧನೆ ಮಾಡಿದ ಮೇಲೆ ಅವರೂ ಹಿಂದೂಗಳೇ," ಎಂದು ಉಡುಪಿಯಲ್ಲಿ ಪೇಜಾವರಶ್ರೀ ಹೇಳಿಕೆ ನೀಡಿದ್ದಾರೆ.
ಇಂದು ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, "ಮಠಾಧೀಶರಿಗೆ ವಿಘಟನೆ ಮಾಡುವ ಮನಸ್ಸಿಲ್ಲ. ಅಲ್ಪ ಸಂಖ್ಯಾತರಾಗುವ ಉದ್ದೇಶದಿಂದ ಲಿಂಗಾಯತರ ಹೋರಾಟ ನಡೆಯುತ್ತಿದೆ. ಆದರೆ ಅಲ್ಪಸಂಖ್ಯಾತರಾಗುವುದು ಸುಲಭದ ಮಾತಲ್ಲ," ಎಂದರು.
"ಸಮಾಜದಲ್ಲಿ ಜಾತಿ ವ್ಯವಸ್ಥೆ ಬೇಕು. ಆದರೆ ಎಲ್ಲರ ನಡುವೆ ಸಾಮರಸ್ಯ ಇರಬೇಕು. ಹಿಂದೂ ಧರ್ಮದ ವಿಭಜನೆ ಬೇಡ. ವೀರಶೈವ ಧರ್ಮದ ವಿಭಜನೆ ಸಲ್ಲದು. ಇದು ಸ್ವೀಕರಿಸಲು ಅರ್ಹ ವಿಚಾರವಲ್ಲ. ಪಂಚ ಪೀಠಾಧಿಪತಿಗಳಿಗೂ ವಿಭಜನೆ ಒಪ್ಪಿಗೆಯಿಲ್ಲ. ವಿರಕ್ತ ಮಠಾಧೀಶರಿಗೆ ಈ ಬೆಳವಣಿಗೆ ಸರಿ ಅನ್ನಿಸಿಲ್ಲ," ಎಂದರು.
"ನನ್ನ ಆಶಯದಲ್ಲಿ ರಾಜಕೀಯ ಉದ್ದೇಶ ಇಲ್ಲ. ಪಕ್ಷ, ರಾಜಕೀಯ ದೃಷ್ಟಿ ನನ್ನಲ್ಲಿ ಇಲ್ಲ. ಹಿಂದೂ ಸಮಾಜದ ಏಳಿಗೆಗೆ ಈ ಸಲಹೆ ಸೂಚನೆ ನೀಡುತ್ತಿದ್ದೇನೆ. ನಾನು ವೀರಶೈವ- ಲಿಂಗಾಯತ ಸಮಾಜದವ ಅಲ್ಲ. ನಾನು ಅವರ ಹಿತೈಷಿಯಾಗಿ ಈ ಸೂಚನೆ ನೀಡುತ್ತಿದ್ದೇನೆ," ಎಂದು ಹೇಳಿಕೆ ನೀಡಿದ್ದಾರೆ.