ಹುಬ್ಬಳ್ಳಿ ಬಸ್ ದುರಂತದಲ್ಲಿ ಕುಂದಾಪುರದ ಸುರೇಶ್ ಸಾವು
ಉಡುಪಿ, ಜುಲೈ 28 : ಬೆಂಗಳೂರಿನಿಂದ ಹುಬ್ಬಳ್ಳಿಗೆ ತೆರಳುತ್ತಿದ್ದ ಬಸ್ ಬೆಂಕಿಗೆ ಆಹುತಿಯಾದ ದುರಂತದಲ್ಲಿ ಕುಂದಾಪುರದ ಸುರೇಶ್ ಹೆಗಡೆ ಅವರು ಮೃತಪಟ್ಟಿದ್ದಾರೆ. ಈ ದುರಂತದಲ್ಲಿ ಮೂವರು ಪ್ರಯಾಣಿಕರು ಸಜೀವವಾಗಿ ದಹನವಾಗಿದ್ದರು ಮತ್ತು 9 ಜನರು ಗಾಯಗೊಂಡಿದ್ದರು.
ಕುಂದಾಪುರ ತಾಲೂಕಿನ ಬಸ್ರೂರು ಸಮೀಪದ ಮೇರ್ಡಿ ನಿವಾಸಿ ಸುರೇಶ್ ಹೆಗಡೆ (52) ಮೃತಪಟ್ಟವರು. ಮೆಡಿಸೆರ್ ಎಂಬ ಕಂಪನಿಯಲ್ಲಿದ್ದ ಕೆಲಸ ಮಾಡುತ್ತಿದ್ದ ಸುರೇಶ್ ಅವರು, ತಮ್ಮ ಮಾರ್ಕೆಟಿಂಗ್ ಕೆಲಸದ ನಿಮಿತ್ತ ಬೆಂಗಳೂರಿನಿಂದ ಹುಬ್ಬಳ್ಳಿಗೆ ತೆರಳುತ್ತಿದ್ದರು.[ಚಿತ್ರಗಳು : ಹುಬ್ಬಳ್ಳಿಯಲ್ಲಿ ಖಾಸಗಿ ಬಸ್ ಬೆಂಕಿಗಾಹುತಿ]
ಮೊದಲು ತರೀಕೆರೆಯಲ್ಲಿ ಸಹೋದರ ಜೊತೆ ಹೋಟೆಲ್ನಲ್ಲಿ ಕೆಲಸ ಮಾಡುತ್ತಿದ್ದ ಸುರೇಶ್ ನಂತರ ಮೆಡಿಸೆರ್ ಕಂಪನಿ ಸೇರಿದ್ದರು. ಪತ್ನಿ ಕೃಷ್ಣಲೀಲಾ ಮತ್ತು ಪುತ್ರನೊಂದಿಗೆ ಶಿವಮೊಗ್ಗದಲ್ಲಿ ವಾಸವಾಗಿದ್ದರು. ಸುರೇಶ್ ಗೋವಿಂದ ಹೆಗಡೆ ಮತ್ತು ಶಾರದಾ ಹೆಗಡೆ ದಂಪತಿಗಳ ದ್ವಿತೀಯ ಪುತ್ರರು.[ಹುಬ್ಬಳ್ಳಿ : ಖಾಸಗಿ ಬಸ್ಸಿಗೆ ಬೆಂಕಿ, ಮೂವರ ಸಜೀವ ದಹನ]
ಬೆಂಗಳೂರಿನಿಂದ ಹುಬ್ಬಳ್ಳಿಗೆ ತೆರಳುತ್ತಿದ್ದ ದುರ್ಗಾಂಬ ಟ್ರಾವೆಲ್ಸ್ಗೆ ಸೇರಿದ ಬಸ್ಸಿಗೆ ಬುಧವಾರ ಮುಂಜಾನೆ ಹುಬ್ಬಳ್ಳಿಯ ವರೂರು ಸಮೀಪ ಬೆಂಕಿ ಹೊತ್ತಿಕೊಂಡಿತ್ತು. ಮೂವರು ಈ ದುರಂತದಲ್ಲಿ ಸಜೀವವಾಗಿ ದಹನವಾಗಿದ್ದರು.