ಪೇಜಾವರ ಶ್ರೀ ಪೂಜೆ, ಕೃಷ್ಣನಾಮ ಸ್ಮರಣೆ, ಹುಲಿ ವೇಷದ ಮೆರುಗು...
ಉಡುಪಿ, ಆಗಸ್ಟ್ 26: ಉಡುಪಿಯಲ್ಲಿ ಕೃಷ್ಣ ವೇಷಧಾರಿಗಳು, ಹುಲಿ ವೇಷದ ಕುಣಿತ ತಂಡಗಳು ಹಾಗೂ ವಿವಿಧ ವೇಷಧಾರಿಗಳು ಶ್ರೀಕೃಷ್ಣ ಜನ್ಮಾಷ್ಟಮಿಯ ರಂಗನ್ನು ಹೆಚ್ಚಿಸಿದರು. ರಥಬೀದಿಯಲ್ಲಿ ಮಕ್ಕಳ ಆಟಿಕೆಗಳ ಮಾರಾಟ ಭರಾಟೆಯೂ ಜೋರಾಗಿತ್ತು. ಭಾರೀ ಸಂಖ್ಯೆಯಲ್ಲಿ ಜನರು ಕೃಷ್ಣ ಮಠದತ್ತ ಬಂದ ಕಾರಣ ವ್ಯಾಪಾರಿಗಳಿಗೆ ಅನುಕೂಲವಾಯಿತು.
ಶ್ರೀಕೃಷ್ಣ ಜನ್ಮಾಷ್ಟಮಿಯ ಅಂಗವಾಗಿ ಕೃಷ್ಣ ಮಠದ ರಾಜಾಂಗಣದಲ್ಲಿ ಮಕ್ಕಳಿಗಾಗಿ ಕೃಷ್ಣ ವೇಷ ಸ್ಪರ್ಧೆ ಏರ್ಪಡಿಸಲಾಗಿತ್ತು. ನೂರಾರು ಮಕ್ಕಳು ಈ ಸ್ಪರ್ಧೆಯಲ್ಲಿ ಭಾಗವಹಿಸಿ ಜನ್ಮಾಷ್ಟಮಿಯ ಸಂಭ್ರಮ ಇಮ್ಮಡಿಗೊಳಿಸಿದರು. ವಿವಿಧ ವಿಭಾಗಗಳಲ್ಲಿ ನಡೆದ ಸ್ಪರ್ಧೆಯನ್ನು ಕಣ್ತುಂಬಿಕೊಳ್ಳಲು ರಾಜಾಂಗಣದಲ್ಲಿ ಜನರು ಜಮಾಯಿಸಿದ್ದರು.[ವೇಷ ತೊಟ್ಟು ಫೋಟೋಗೆ ಪೋಸ್ ನೀಡಿದ ಕಿಟ್ಟುಮರಿಗಳು!]
ಬುಧವಾರ 40ಕ್ಕೆ ಮಾರಾಟವಾದ ಮಾರು ಹೂ ಗುರುವಾರ ಅಗ್ಗವಾಗಿತ್ತು. ಒಂದು ಮಾರು ಹೂ 30, 20ಕ್ಕೆ ಸಹ ಮಾರಾಟವಾಯಿತು. ಹಾಸನ, ಚಿಕ್ಕಮಗಳೂರು ಜಿಲ್ಲೆಗಳಿಂದ ಬಂದಿದ್ದ ಹೂ ವ್ಯಾಪಾರಿಗಳು ಸಂಜೆ ಊರಿಗೆ ತೆರಳಿದರು.
ವಿಶೇಷ ಅಲಂಕಾರ
ಕೃಷ್ಣ ಜನ್ಮಾಷ್ಟಮಿಯ ಅಂಗವಾಗಿ ಉಡುಪಿಯಲ್ಲಿ ಕೃಷ್ಣನಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು.
ಬೆಣ್ಣೆ ಕೃಷ್ಣಾನ, ಕೊಳಲು ಕೃಷ್ಣಾನ..
ಬೆಣ್ಣೆ ಕದಿಯುವ ಕೃಷ್ಣ, ಕೊಳಲು ಊದುವ ಕೃಷ್ಣ , ತುಂಟ ಕೃಷ್ಣರಾಗಿ ವೇದಿಕೆಗೆ ಬಂದ ಚಿಣ್ಣರು ಗಮನ ಸೆಳೆದರು. ಕೆಲವು ಮಕ್ಕಳು ಭಾರೀ ಜನಸ್ತೋಮ ನೋಡಿ ಆತಂಕಗೊಂಡು ಮರಳಿದ ಪ್ರಸಂಗವು ನಡೆಯಿತು. ಕೃಷ್ಣ ವೇಷ ಧಾರಿಗಳು ಸ್ವಾಮೀಜಿ ಅವರೊಂದಿಗೆ ಭಾವಚಿತ್ರ ತೆಗೆಸಿಕೊಂಡರು.
ಗಾಬರಿ ಕೃಷ್ಣ
ಜನರನ್ನು ನೋಡಿ ತುಸು ಗಾಬರಿಯಾದಂತೆ ಕಂಡ ಕೃಷ್ಣ ವೇಷಧಾರಿ.
ಕೃಷ್ಣಂ ವಂದೇ ಜಗದ್ಗುರುಂ
ಈ ಬಾರಿ ಪರ್ಯಾಯದಲ್ಲಿರುವ ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿ ಕೃಷ್ಣನಿಗೆ ಪೂಜೆ ಸಲ್ಲಿಸಿದರು.
ಎಷ್ಟ್ ಚೆಂದ ಕಾಣ್ತೀ ಮಗೂ..
ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿ ಸ್ಪರ್ಧೆಯನ್ನು ಕೆಲ ಕಾಲ ವೀಕ್ಷಿಸಿ ಸಂತಸಪಟ್ಟರು. ರಾಜಾಂಗಣ ಮಾತ್ರವಲ್ಲದೆ ಸಂಘಟನೆಗಳು ನಗರದ ವಿವಿಧ ಭಾಗಗಳಲ್ಲಿ ಏರ್ಪಡಿಸಿದ್ದ ಕೃಷ್ಣ ವೇಷ ಸ್ಪರ್ಧೆಯಲ್ಲಿ ಸಹ ಮಕ್ಕಳು ಭಾಗವಹಿಸಿದರು.
ಹುಲಿ ಕುಣಿತ
ಕೃಷ್ಣ ವೇಷಧಾರಿಗಳು ಅಂಗಡಿ ಹಾಗೂ ಮನೆಗಳಿಗೆ ತೆರಳಿ ಹಣ ಸಂಗ್ರಹಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ವಾಣಿಜ್ಯ ಸಂಕೀರ್ಣ ಹಾಗೂ ಮನೆಗಳ ಎದುರು ಹುಲಿ ವೇಷಧಾರಿಗಳ ಕುಣಿತ ಜೋರಾಗಿತ್ತು.