ಉಡುಪಿ ತಾಯಿ-ಮಗ ಸಾವು: ಕ್ವಾರಿ ಗುತ್ತಿಗೆದಾರನ ಮೇಲೆ ಕ್ರಿಮಿನಲ್ ಕೇಸು
ದುರ್ಗಾನಗರದಲ್ಲಿ ತಾಯಿ ಮಗುವಿನ ಸಾವಿಗೆ ಕಾರಣವಾದ ಕಲ್ಲಿನ ಕ್ವಾರಿಯ ಗುತ್ತಿಗೆದಾರನ ವಿರುದ್ಧ ಕ್ರಿಮಿನಲ್ ಕೇಸು ದಾಖಲಿಸಿ ತನಿಖೆ ನಡೆಸಿ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳಿಗೆ ಉಡುಪಿ ಜಿಲ್ಲಾಧಿಕಾರಿ ಆದೇಶ ನೀಡಿದ್ದಾರೆ.
ಉಡುಪಿ, ಏಪ್ರಿಲ್ 27: ದುರ್ಗಾನಗರದಲ್ಲಿ ತಾಯಿ ಮಗುವಿನ ಸಾವಿಗೆ ಕಾರಣವಾದ ಕಲ್ಲಿನ ಕ್ವಾರಿಯ ಗುತ್ತಿಗೆದಾರನ ವಿರುದ್ಧ ಕ್ರಿಮಿನಲ್ ಕೇಸು ದಾಖಲಿಸಿ ತನಿಖೆ ನಡೆಸಲಾಗುವುದು ಎಂದು ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಹೇಳಿದ್ದಾರೆ.
ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳಿಗೆ ಕೂಡಲೇ ಗುತ್ತಿಗೆದಾರನ ನಿರ್ಲಕ್ಷ್ಯದ ವಿರುದ್ಧ ಕ್ರಮಕೈಗೊಳ್ಳಿ ಎಂದು ಆದೇಶ ನೀಡಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ಈ ಕಲ್ಲಿನ ಕ್ವಾರಿ ಕಾರ್ಯ ನಿರ್ವಹಿಸುತ್ತಿತ್ತು.[ಉಡುಪಿಯಲ್ಲಿ ಕ್ವಾರಿಗೆ ಬಿದ್ದು ತಾಯಿ-ಮಗ ದುರ್ಮರಣ]
ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲಾ ಕಲ್ಲು ಕ್ವಾರಿಗಳು ಮುಂದಿನ 15 ದಿನಗಳ ಒಳಗೆ ಸೂಕ್ತ ರೀತಿಯಲ್ಲಿ ಬೇಲಿ ಹಾಕದೇ ಇದ್ದಲ್ಲಿ ನೀಡಿರುವ ಲೈಸನ್ಸ್ ರದ್ದು ಪಡಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪರವಾನಿಗೆ ಇಲ್ಲದ ಕ್ವಾರಿ ಸರ್ವೆ ನಡೆಸಿ ಅವುಗಳನ್ನು ಮುಚ್ಚುವಂತೆ ಕೆಆರ್ಐಡಿಎಲ್ ಅಧಿಕಾರಿಗಳಿಗೆ ಈ ಸಂದರ್ಭ ಅವರು ಸೂಚಿಸಿದರು. ಎರಡು ದಿನಗಳಲ್ಲಿ ಈ ಸಂಬಂಧ ವರದಿ ನೀಡಬೇಕು. ಒಂದೊಮ್ಮೆ ಕಲ್ಲುಕ್ವಾರಿಗಳನ್ನು ಮುಚ್ಚಿದ್ದರೂ ಅವುಗಳನ್ನು ಹಿಂದೆ ನಿರ್ವಹಿಸುತ್ತಿದ್ದ ಮಾಲಕರೇ ಬೇಲಿ ಹಾಕುವಂತೆ ನೋಡಿಕೊಳ್ಳಿ. ಸೂಕ್ತ ಬೇಲಿ ಹಾಕದೇ ಇದ್ದಲ್ಲಿ ಲೈಸನ್ಸ್ ರದ್ದುಗೊಳಿಸಿ. ಜತೆಗೆ ದಂಡ ವಿಧಿಸಿ ಎಂದು ಇಲಾಖೆ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.[ಉಡುಪಿ: ಅಕ್ರಮ ಕಸಾಯಿಖಾನೆ ಮೇಲೆ ದಾಳಿ, ಮೂವರ ಬಂಧನ]
ಇನ್ನು ದುರ್ಗಾನಗರದ ಕಲ್ಲಿನ ಕ್ವಾರಿ ಘಟಕವು ನಾಲ್ಕು ವರ್ಷಗಳ ಹಿಂದೆ ಸ್ಥಗಿತಗೊಂಡಿತ್ತು. ಅದಕ್ಕೆ ಬೇಲಿ ಹಾಕುವಂತೆ ಸೂಚಿಸಲಾಗಿತ್ತು. ಆದರೆ ಗುತ್ತಿಗೆದಾರನ ನಿರ್ಲಕ್ಷ್ಯದಿಂದಾಗಿ ಇದೀಗ ತಾಯಿ, ಮಗು ಸಾವನ್ನಪ್ಪುವಂತಾಗಿದೆ.