ಉಡುಪಿ ಮಠದಲ್ಲಿ ಇಫ್ತಾರ್: ಹೀಗೆ ಮಾಡಿದ್ದರೆ ಎಲ್ಲವೂ ಸರಿಹೋಗುತ್ತಿತ್ತು!
ಉಡುಪಿ ಕೃಷ್ಣಮಠದಲ್ಲಿ ಇಫ್ತಾರ್ ಆಯೋಜನೆಯ ವಿಚಾರ ಇನ್ನೂ ಭಾರೀ ಚರ್ಚೆಯಲ್ಲಿದೆ. ಇಫ್ತಾರ್ ವಿಚಾರದಲ್ಲಿ ಎಲ್ಲರೂ ಈ ರೀತಿ ಯೋಚಿಸಿದ್ದರೆ, ವಿವಾದಕ್ಕೆ ಈ ಮಟ್ಟಕ್ಕೆ ಬೆಳೆಯುತ್ತಿರಲಿಲ್ಲವೇನೋ?
ಬಹುಷ: ಪೇಜಾವರ ಶ್ರೀಗಳೇ ಮಠದಲ್ಲಿ ಇಫ್ತಾರ್ ಕೂಟ ಮತ್ತು ನಮಾಜಿಗೆ ಅವಕಾಶ ಮಾಡಿಕೊಟ್ಟ ವಿದ್ಯಮಾನ ಈ ಮಟ್ಟಿಗೆ ವಿವಾದ, ಚರ್ಚೆಯ ವಿಷಯ ಆಗುತ್ತಿದೆ ಎಂದು ಅಂದುಕೊಂಡಿರಕ್ಕಿಲ್ಲ.
ಯಾಕೆಂದರೆ ವಿವಾದ ಎನ್ನುವುದು ಪೇಜಾವರರಿಗೆ ಹೊಸದೇನಲ್ಲ. ದಲಿತರ ಕೇರಿಯಲ್ಲಿ ಪಾದಪೂಜೆ, ವೈಷ್ಣವ ಧರ್ಮದ ಬೋಧನೆ, ಗಾಯತ್ರಿಮಂತ್ರ ಉಪದೇಶ ಹೀಗೆ.. ಒಂದಲ್ಲಾ ಒಂದು ಘಟನೆಗಳ ಸುತ್ತು ಸುತ್ತುತ್ತಿದ್ದ ವಿವಾದಗಳ ಮಹಾಪೂರವನ್ನು ಸಮರ್ಥವಾಗಿ ಎದುರಿಸಿಕೊಂಡು ಬಂದವರು.
ಆದರೆ, ಕೃಷ್ಣಮಠದಲ್ಲಿ ಇಫ್ತಾರ್ ಕೂಟ ಆಯೋಜಿಸಿದ್ದು ಇವೆಲ್ಲಕ್ಕಿಂತಲೂ ಹೊರತಾದದ್ದು ಮತ್ತು ಸೂಕ್ಷ್ಮವಾದದ್ದು. ಪೇಜಾವರರ ಎಲ್ಲಾ ನಡೆಗೂ ಜೊತೆಯಾಗಿ ಇರುತ್ತಿದ್ದ ಅಸಂಖ್ಯಾತ ಶಿಷ್ಯವರ್ಗ ಮತ್ತು ಕೃಷ್ಣಮಠದ ಭಕ್ತರು, ಈ ವಿಚಾರದಲ್ಲಿ ಇಬ್ಬಗೆಯ ನಿಲುವನ್ನು ಹೊಂದಿದ್ದಾರೆ.
ಇಫ್ತಾರ್ ಘಟನೆ ನಡೆದು ನಾಲ್ಕು ದಿನವಾದರೂ, ಅದರ ಕಾವು ಇನ್ನೂ ಆರಿಲ್ಲ. ಈ ನಡುವೆ, ಪೇಜಾವರ ಶ್ರೀಗಳು ಕಾಲುಜಾರಿ ಬಿದ್ದು ಸಣ್ಣಮಟ್ಟಿನ ಗಾಯಾಮಾಡಿಕೊಂಡಿರುವುದು, ಆಡಿಕೊಳ್ಳುವವರ ಬಾಯಿಗೆ ಜೇನುತುಪ್ಪ ಸುರಿದಂತಾಗಿದೆ.
ತಾವೇ ಮಾರ್ಗದರ್ಶಕರಾಗಿರುವ ವಿಶ್ವಹಿಂದೂ ಪರಿಷತ್ ಸಂಘಟನೆಯ ಸದಸ್ಯರು ಮತ್ತು ಮುಖಂಡರು, ವಯೋವೃದ್ದ ಪೇಜಾವರ ಶ್ರೀಗಳ ಇಫ್ತಾರ್ ನಿಲುವಿಗೆ ಅತ್ತ ಸಮರ್ಥಿಸಿಕೊಳ್ಳದೇ ಇತ್ತ ಟೀಕಿಸಿದೆ ತಟಸ್ಥ ನಿಲುವನ್ನು ತಾಳಿವೆ. ಇಫ್ತಾರ್ ವಿಚಾರದಲ್ಲಿ ಎಲ್ಲರೂ ಈ ರೀತಿ ಯೋಚಿಸಿದ್ದರೆ, ವಿವಾದ ಈ ಮಟ್ಟಕ್ಕೆ ಬೆಳೆಯುತ್ತಿರಲಿಲ್ಲವೇನೋ, ಮುಂದೆ ಓದಿ..
ಮಠದ ಆವರಣದಲ್ಲಿ ಇಫ್ತಾರ್
ಮುಸ್ಲಿಂ ಸಮುದಾಯದ ವಿನಂತಿಯ ಮೇರೆಗೆ ಮಠದ ಆವರಣದಲ್ಲಿ ಪರ್ಯಾಯ ಪೇಜಾವರ ಮಠ, ನಮಾಜ್ ಮತ್ತು ಇಫ್ತಾರ್ ಕೂಟಕ್ಕೆ ಅನುಮತಿ ನೀಡಿತ್ತು. ಖುದ್ದು ಪೇಜಾವರ ಶ್ರೀಗಳೇ ಮುಸ್ಲಿಂ ಬಾಂಧವರಿಗೆ ಖರ್ಜೂರ, ಹಣ್ಣುಹಂಪಲು ನೀಡಿದ್ದರು.
ಕೃಷ್ಣ ಪ್ರಸಾದ ಸ್ವೀಕರಿಸಿ ಉಪವಾಸ ಅಂತ್ಯ
ಪವಿತ್ರ ರಂಜಾನ್ ಮಾಸದಲ್ಲಿ ಖರ್ಜೂರ, ಹಣ್ಣುಹಂಪಲು ತಿಂದು ಉಪವಾಸ ಅಂತ್ಯಗೊಳಿಸುವ ಪದ್ದತಿಯಿದೆ. ಹಾಗಾಗಿ, ಪೇಜಾವರ ಶ್ರೀಗಳು ನೀಡಿದ್ದ ಖರ್ಜೂರವನ್ನು, ಶ್ರೀಕೃಷ್ಣ ಪ್ರಸಾದ ಸ್ವೀಕರಿಸಿ ಮುಸ್ಲಿಂ ಬಾಂಧವರು ಉಪವಾಸ ಅಂತ್ಯಗೊಳಿಸಿದರು ಎಂದು ಎಲ್ಲರೂ ಯೋಚಿಸಿದ್ದರೆ, ಇಫ್ತಾರ್ ವಿಚಾರ ಈ ಮಟ್ಟಿಗೆ ವಿವಾದವಾಗಿ ಬೆಳೆಯುತ್ತಿರಲಿಲ್ಲವೋ ಏನು..
ರಾಜಕೀಯ ಲಾಭ ಹುಡುಕುವ ಮೂರು ರಾಜಕೀಯ ಪಕ್ಷಗಳು
ಎಂದಿನಂತೆ ಯಾವುದೇ ವಿಚಾರದಲ್ಲಿ ರಾಜಕೀಯ ಲಾಭ ಹುಡುಕುವ ರಾಜಕೀಯ ಪಕ್ಷಗಳು, ಪೇಜಾವರರ ಪರ ಮತ್ತು ಇಫ್ತಾರ್ ಆಯೋಜನೆಯ ವಿರುದ್ದ ನಿಲುವನ್ನು ತಾಳಿವೆ. ಕುಮಾರಸ್ವಾಮಿ, ಪೇಜಾವರರ ಬಗ್ಗೆ ಗೌರವದಿಂದ ನಡೆದುಕೊಳ್ಳಿ ಎಂದು ಎಚ್ಚರಿಸಿದ್ದೂ ಆಗಿದೆ.
ಶ್ರೀಗಳ ಪರವಾಗಿ ಕಾಂಗ್ರೆಸ್
ಇನ್ನು ನಿರೀಕ್ಷೆಯಂತೆ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್, ಸಚಿವರಾದ ಆಂಜನೇಯ, ದಿನೇಶ್ ಗುಂಡೂರಾವ್, ರಮಾನಾಥ ರೈ, ಯು ಟಿ ಖಾದರ್ ಮುಂತಾದವರು ಶ್ರೀಗಳ ಪರವಾಗಿ ನಿಂತಿದ್ದಾರೆ.
ಬಿಜೆಪಿಯಲ್ಲಿ ಗೊಂದಲ
ಬಿಜೆಪಿಯ ಜಗದೀಶ್ ಶೆಟ್ಟರ್, ಪ್ರಲ್ಹಾದ್ ಜೋಷಿ, ಪ್ರತಾಪ್ ಸಿಂಹ ಶ್ರೀಗಳನ್ನು ಸಮರ್ಥಿಸಿಕೊಂಡರೆ, ಸದಾನಂದ ಗೌಡ ಮತ್ತು ಶೋಭಾ ಕರಂದ್ಲಾಜೆ ಶ್ರೀಗಳ ಕ್ರಮಕ್ಕೆ ಸಹಮತ ವ್ಯಕ್ತಪಡಿಸಲಿಲ್ಲ.