ಕಂಬಳ ಉಳಿಸಲು ಬದ್ಧ-ಪ್ರಮೋದ್ ಮಧ್ವರಾಜ್
ಕಂಬಳದ ಉಳಿವಿಗಾಗಿ ಸರ್ವಪ್ರಯತ್ನ ಮಾಡಲಾಗುವುದು ಎಂದು ಮೀನುಗಾರಿಕೆ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ಉಡುಪಿಯಲ್ಲಿ ಒನ್ ಇಂಡಿಯಾಗೆ ತಿಳಿಸಿದ್ದಾರೆ.
ಉಡುಪಿ, ಜನವರಿ26: ಕಂಬಳದ ಉಳಿವಿಗಾಗಿ ಸರ್ವಪ್ರಯತ್ನ ಮಾಡಲಾಗುವುದು ಎಂದು ಮೀನುಗಾರಿಕೆ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ತಿಳಿಸಿದ್ದಾರೆ.
"ಕೃಷಿಯೊಂದಿಗೆ ನಂಟನ್ನು ಹೊಂದಿರುವ ಕರಾವಳಿಯ ಜಾನಪದ ಕ್ರೀಡೆ ಕಂಬಳವು ತಲೆ ತಲಾಂತರದಿಂದ ನಡೆದು ಬಂದ ಸಾಂಪ್ರದಾಯಿಕ ಕ್ರೀಡೆಯಾಗಿದೆ. ಕಂಬಳ ಉಳಿಸಲು ಸರ್ವ ಪ್ರಯತ್ನ ನಡೆಸಲಾಗುವುದು," ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಮಧ್ವರಾಜ್ ಹೇಳಿದರು.[ಕಂಬಳ ಉಳಿಸಲು ಮಂಗಳೂರಿನಲ್ಲಿ 'ಪೋಸ್ಟ್ ಕಾರ್ಡ್'ಚಳವಳಿ]
ಈಗಾಗಲೇ ಬೆಂಗಳೂರಲ್ಲಿ ಕಾನೂನು ಮಂತ್ರಿ ಟಿ.ಬಿ ಜಯಚಂದ್ರ, ಅರಣ್ಯ ಮಂತ್ರಿ ರಮಾನಾಥ ರೈ, ಪಶುಸಂಗೋಪನಾ ಮಂತ್ರಿ ಎ.ಮಂಜು, ನಾನು ಹಾಗೂ ಮಾಜಿ ಸಚಿವರಾದ ಅಭಯಚಂದ್ರ ಜೈನ್ ರವರ ಉಪಸ್ಥಿಯಲ್ಲಿ ಸಭೆ ನಡೆಸಲಾಗಿದೆ. ಸಭೆಯಲ್ಲಿ ಎಲ್ಲಾ ಇಲಾಖಾ ಅಧಿಕಾರಿಗಳೊಂದಿಗೆ ಚರ್ಚಿಸಿದ್ದೇವೆ. ಕಂಬಳ ಹೋರಾಟ ಸಮಿತಿಯ ವಿನಂತಿಯಂತೆ ನ್ಯಾಯಾಲಯದಲ್ಲಿ ಕಂಬಳದ ಪರವಾಗಿ ತೀರ್ಪು ಬರುವಂತೆ ಮಾಡಲು ಅಗತ್ಯವಿರುವ ಸರಕಾರಿ ಆದೇಶ ಹೊರಡಿಸಲಾಗಿದೆ ಎಂದರು.[ಕಂಬಳಕ್ಕೆ ಪ್ರತ್ಯೇಕ ಕಾನೂನಿಗೆ ರಾಜ್ಯ ಸರ್ಕಾರ ಚಿಂತನೆ -ಜಯಚಂದ್ರ]
ಈಗಾಗಲೆ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ನ್ಯಾಯಾಲದಲ್ಲಿ ಕಂಬಳದ ಪರವಾಗಿ ತೀರ್ಪು ಬರಲು ಬೇಕಾದ ಅಗತ್ಯ ಕ್ರಮವನ್ನು ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ ಎಂದು ಸಚಿವ ಪ್ರಮೋದ್ ಮಧ್ವರಾಜ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.