ಸಂಪ್ರದಾಯಬದ್ಧ ಕಂಬಳ ಆಚರಣೆಗೆ ಹೈಕೋರ್ಟ್ ಗ್ರೀನ್ ಸಿಗ್ನಲ್
ಉಡುಪಿ, ನವೆಂಬರ್ 5: ಸಂಪ್ರದಾಯಬದ್ಧ ಕಂಬಳ ಆಚರಣೆಗೆ ಹೈಕೋರ್ಟ್ ಅವಕಾಶ ನೀಡಿರುವುದು ಕಂಬಳ ಪ್ರಿಯರಲ್ಲಿ ಸಂತಸಕ್ಕೆ ಕಾರಣವಾಗಿದೆ. ಈ ಬಾರಿ ಕಂಬಳ ಮಹೋತ್ಸವದ ಮೇಲೆ ಸುಪ್ರೀಂಕೋರ್ಟ್ ಆದೇಶ ತೂಗುಕತ್ತಿಯಂತೆ ಮುಂದುವರೆದಿತ್ತು. ಅಲ್ಲದೆ ಉಡುಪಿ ಜಿಲ್ಲಾಧಿಕಾರಿ ನ್ಯಾಯಾಲಯದ ಆದೇಶ ಮೀರದಂತೆ ಅಧಿಸೂಚನೆ ಕೂಡ ಹೊರಡಿಸಿದ್ದರು.
ಇದೀಗ ಕಂಬಳ ಆಚರಣೆಗೆ ಹೈಕೋರ್ಟ್ ಗ್ರೀನ್ ಸಿಗ್ನಲ್ ನೀಡಿರುವುದರಿಂದ ಕಂಬಳಪ್ರಿಯರಲ್ಲಿ ಸಂತಸ ಮನೆ ಮಾಡಿದೆ. ಕೋಣಕ್ಕೆ ಬೆತ್ತದಿಂದ ಹೊಡೆಯಬಾರದು ಎಂದು ಸುಪ್ರೀಂಕೋರ್ಟ್ ನೀಡಿದ ಆದೇಶದಿಂದ ಕಂಬಳಪ್ರಿಯರು ಆತಂಕಕ್ಕೆ ಸಿಲುಕಿದ್ದರು. ಕರಾವಳಿಯ ರೈತರ ಜನಪ್ರಿಯ ಕ್ರೀಡೆ ಎಂದೇ ಮಾನ್ಯತೆ ಪಡೆದ ಕಂಬಳ ನಡೆಯುವುದು ಸಂಶಯ ಎಂಬ ಮಾತು ಕೂಡ ಸಾರ್ವಜನಿಕ ವಲಯದಿಂದ ಕೇಳಿಬರುತ್ತಿತ್ತು.
ಆದರೆ, ಇದೀಗ ಸರಕಾರವೇ ಸಮ್ಮತಿ ನೀಡಿದ ಕಾರಣದಿಂದ ಎಲ್ಲ ಸಂಶಯಗಳಿಗೆ ತೆರೆ ಬಿದ್ದಂತೆ ಆಗಿದೆ. ಸಾಂಪ್ರದಾಯಿಕ ಕ್ರೀಡೆಯಾಗಿರುವ ಕಂಬಳವನ್ನು ಹಲವಾರು ವರ್ಷಗಳಿಂದ ನಡೆಸಿಕೊಂಡು ಬರಲಾಗುತ್ತಿದೆ. ಉಡುಪಿ ಜಿಲ್ಲಾ ಸಂಪ್ರದಾಯಬದ್ಧ ಕಂಬಳ ಸಮಿತಿ ಕಂಬಳ ನಡೆಸಲು ಉಡುಪಿ ಜಿಲಾಧಿಕಾರಿಯವರಲ್ಲಿ ಅವಕಾಶ ನೀಡುವಂತೆ ಮನವಿ ಮಾಡಿತ್ತು. ಆದರೆ ಅವರು ಮನವಿಯನ್ನು ನಿರಾಕರಿಸಿದ್ದರು.
ಇದನ್ನು ಪ್ರಶ್ನಿಸಿ ಮಾಜಿ ಸಂಸದ ಜಯಪ್ರಕಾಶ ಹೆಗ್ಗಡೆಯವರ ಮಾರ್ಗದರ್ಶನದಂತೆ ರಾಜ್ಯ ಹೈಕೋರ್ಟ್ನಲ್ಲಿ ಉಡುಪಿ ಜಿಲ್ಲಾ ಕಂಬಳ ಸಮಿತಿಯ ಪ್ರಧಾನ ಕಾರ್ಯದರ್ಶಿ ಚೇರ್ಕಾಡಿ ಅಶೋಕ್ ಕುಮಾರ್ ರಿಟ್ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ನೀಡಿದ ಆದೇಶಕ್ಕೆ ತಡೆಯಾಜ್ಞೆ ನೀಡಲಾಗಿದೆ. 2015ರ ಡಿ. 17ರ ಸರಕಾರದ ಆದೇಶದಂತೆ ಕಂಬಳವನ್ನು ಸಂಪ್ರದಾಯಬದ್ಧವಾಗಿ ಆಚರಣೆ ಮಾಡಲು ರಾಜ್ಯ ಹೈಕೋರ್ಟ್ ಅವಕಾಶ ಮಾಡಿಕೊಟ್ಟಿದೆ.