ಆಳ್ವಾಸ್ ಸಂಸ್ಥೆಯ ಹೆಸರಿಗೆ ಮಸಿ ಬಳಿಯಬೇಡಿ : ಕುಮಾರಸ್ವಾಮಿ
ಉಡುಪಿ, ಜುಲೈ 30: "ಆಳ್ವಾಸ್ ಕಾಲೇಜು ಮೂರು ಲಕ್ಷ ಕುಟುಂಬಕ್ಕೆ ನೆರವಾಗಿದೆ. ಸಾವಿರಾರು ವಿದ್ಯಾರ್ಥಿಗಳಿಗೆ ಆಳ್ವಾಸಲ್ಲಿ ಶಿಕ್ಷಣ ಸಿಗುತ್ತಿದೆ. ಇಂಥಹ ಸಂಸ್ಥೆಯಲ್ಲಿ ನಡೆದಿರುವ ಸಾವಿನ ಪ್ರಕರಣದ ಬಗ್ಗೆ ಸಮಾಜದಲ್ಲಿ ಚರ್ಚೆ ಆರಂಭವಾಗಿದೆ. ಸರ್ಕಾರ ಪ್ರಕರಣ ಸತ್ಯಾಸತ್ಯತೆ ಅರಿಯಬೇಕು. ಸರಿಯಾದ ಪಾರದರ್ಶಕ ತನಿಖೆಯಾಗಬೇಕು," ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಉಡುಪಿಯಲ್ಲಿ ಹೇಳಿದ್ದಾರೆ.
ಆಳ್ವಾಸ್ ಕಾಲೇಜ್ ವಿದ್ಯಾರ್ಥಿನಿ ನಿಗೂಢ ಸಾವಿನ ಸುತ್ತ 'ಅನುಮಾನ'ದ ಹುತ್ತ
ಈ ಸಂದರ್ಭದಲ್ಲಿ ಅವರು "ಮಾಧ್ಯಮಗಳ ಮೂಲಕ ಜಡ್ಜ್ ಮೆಂಟ್ ಯಾಕೆ ನೀಡುತ್ತಿದ್ದೀರಿ?" ಎಂದು ಪ್ರಶ್ನೆ ಮಾಡಿದ್ದಾರೆ. 'ಮೋಹನ ಆಳ್ವ ಮಾನಸಿಕವಾಗಿ ಹಿಂಸೆ ಅನುಭವಿಸುತ್ತಿದ್ದಾರೆ. ಟಿವಿಯಲ್ಲಿ ನಾನು ಅವರನ್ನು ನೋಡಿದೆ. ಅವರು ಸಂಪೂರ್ಣ ಕುಗ್ಗಿದಂತಿದೆ,' ಎಂದು ಹೇಳಿದರು.
"26 ಸಾವಿರ ಮಕ್ಕಳು ಹಾಸ್ಟೆಲ್ ನಲ್ಲಿದ್ದಾರೆ. 4 ಸಾವಿರ ಬಡ ಮಕ್ಕಳಿಗೆ ಉಚಿತ ಶಿಕ್ಷಣ ನೀಡುತ್ತಿದ್ದಾರೆ. ಯಾರ್ಯಾರೋ ಪ್ರಕರಣಕ್ಕೆ ರೆಕ್ಕೆ ಪುಕ್ಕ ಕಟ್ಟಿ ಅಪಪ್ರಚಾರ ಮಾಡುತ್ತಿದ್ದಾರೆ. ಒಳ್ಳೆಯ ಸಂಸ್ಥೆಯ ಹೆಸರಿಗೆ ಮಸಿ ಬಳಿಯಬೇಡಿ ಎಂದು ನಾನು ವಿನಂತಿ ಮಾಡುತ್ತಿದ್ದೇನೆ," ಎಂದು ಕುಮಾರಸ್ವಾಮಿ ಹೇಳಿದರು.
ಆತ್ಮಹತ್ಯೆಯೋ ಕೊಲೆಯೋ: ಕಾವ್ಯಾ ಪೋಷಕರ ಆರೋಪ, ಆಳ್ವ ಪ್ರತಿಕ್ರಿಯೆ
"ಎಲ್ಲಾ ಸಂಘಟನೆಗಳು ತಮ್ಮ ಕೆಟ್ಟ ರಾಜಕೀಯ ನಿಲ್ಲಿಸಬೇಕು. ಸತ್ಯಾಸತ್ಯತೆ ಅರಿತು ಮಾತುಗಳನ್ನು ಆಡಬೇಕು. ವಯಸ್ಸಾದವರು ಯಾರೋ ಹೋರಾಟಗಾರರಂತೆ ಮಾಧ್ಯಮಗಳಲ್ಲಿ ತರ್ಕ ಮಾಡುತ್ತಿದ್ದಾರೆ. ಅವರು ಯಾವ ಹೋರಾಟಗಾರರೋ ನನಗೆ ಗೊತಾಗುತ್ತಿಲ್ಲ," ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಮನಾಥ ರೈ ಹೆಬ್ಬೆಟ್ಟಿಗೆ ಮಾತ್ರ
ರಮಾನಾಥ ರೈ ಅವರು ಗೃಹ ಸಚಿವರಾಗುತ್ತಾರೆ ಎಂಬ ಮಾತು ಕೇಳಿ ಬರುತ್ತಿದೆ. ಆದರೆ ಅವರು ಹೆಬ್ಬೆಟ್ಟಿಗೆ ಮಾತ್ರ; ಕೆಲಸ ನಿರ್ವಹಿಸುವುದು ಪೂರ್ತಿ ಕೆಂಪಯ್ಯ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.
ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ ಅವರು ಸಿದ್ದರಾಮಯ್ಯ ಅವರಿಗೆ ಕೆಂಪಯ್ಯ ಏಕೆ ಅನಿವಾರ್ಯ? ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಗೆ ಈಗ ಮಾಡಿದ್ದುಣ್ಣೋ ಮಾರಾಯ ಎನ್ನುವ ಪರಿಸ್ಥಿತಿ ಬಂದಿದೆ. ಗುಜರಾತ್ ಶಾಸಕರನ್ನು ಕರೆತಂದು ರೆಸಾರ್ಟ್ ನಲ್ಲಿ ಇರಿಸಿದ್ದಾರೆ. ರಾಜ್ಯಸಭಾ ಚುನಾವಣೆಯಲ್ಲಿ ಜೆಡಿಎಸ್ ನ 7 ಶಾಸಕರನ್ನು ಹೈಜಾಕ್ ಮಾಡಿದ್ದರು. ಅದರ ಫಲ ಈಗ ಉಣ್ಣುತ್ತಿದ್ದಾರೆ ಎಂದು ಟೀಕಿಸಿದರು.
ರೆಸಾರ್ಟ್ ಗೆ ಹೆಚ್ಚುವರಿ ಭದ್ರತೆ ನೀಡಿಲು ಪೊಲೀಸರನ್ನು ನಿಯೋಜಿಸಲಾಗಿದೆ. ಅದರ ಬದಲು ರಾಜ್ಯದ ಜನತೆಗೆ ಭದ್ರತೆ ನೀಡಲಿ ಎಂದು ಅವರು ಹೇಳಿದರು.
ಇನ್ನೂ ಜೆಡಿಎಸ್ ಗೆದ್ದರೆ ಜಮೀರ್ ಅಹ್ಮದ್ ರುಂಡ ಕತ್ತರಿಸಿ ಕೊಡುತ್ತೇನೆ ಎಂದು ಹೇಳಿದ ಮಾತಿಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿಯವರು, ಯಾರ ರುಂಡಾನು ಯಾರು ಕತ್ತರಿವುದು ಬೇಡ. ಯಾರು ರುಂಡವನ್ನ ಕತ್ತರಿಸಿ ಕೊಡುವುದು ಬೇಡ ಎಂದು ಜಮೀರ್ ಅಹ್ಮದ್ ಗೆ ಟಾಂಗ್ ನೀಡಿದರು.