ಉಡುಪಿ: ಕೊರಗ ಕುಟುಂಬದ ಮೇಲೆ ಗೋ ರಕ್ಷಕರ ದಾಳಿ
ಅಡುಗೆಗಳಲ್ಲಿ ಗೋ ಮಾಂಸ ಬಳಸಿದೆ ಎಂದು ಆರೋಪಿಸಿರುವ ಸ್ವಯಂ ಘೋಷಿತ ಗೋ ರಕ್ಷಕರಿಂದ ರಾತ್ರಿ ಊಟ ನಡೆಯುತ್ತಿದ್ದ ವೇಳೆಯೇ ದಾಳಿ.
ಉಡುಪಿ, ಏಪ್ರಿಲ್ 28: ರಾತ್ರಿ ಊಟ ಮಾಡುತ್ತಿದ್ದ ಕೊರಗ ಬುಡಕಟ್ಟು ಜನಾಂಗದ ಕುಟುಂಬವೊಂದರ ಮೇಲೆ ಏಕಾಏಕಿ ದಾಳಿ ನಡೆಸಿದ ಭಜರಂಗ ದಳದ ಕಾರ್ಯಕರ್ತರು ಮೂವರ ಮೇಲೆ ಹಲ್ಲೆ ನಡೆಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಏಪ್ರಿಲ್ 24ರಂದು ಈ ಕುಟುಂಬವು ತ್ರಾಸಿ ಬಳಿಯ ಅಂಗೋಡಿಯಲ್ಲಿನ ತಮ್ಮ ಮನೆಯಲ್ಲಿ ಬಂಧುಗಳು ಹಾಗೂ ಸ್ನೇಹಿತರನ್ನು ಕಲೆಹಾಕಿ ರಾತ್ರಿ ಪಾರ್ಟಿಯಲ್ಲಿ ನಿರತವಾಗಿತ್ತು.
ಸಾಮಾನ್ಯವಾಗಿ ಆ ಪಾರ್ಟಿಯ ಅಡುಗೆಯಲ್ಲಿ ಮಾಂಸಾಹಾರದ ನಾನಾ ಅಡುಗೆಗಳನ್ನು ಮಾಡಲಾಗಿತ್ತು. ಆದರೆ, ಈ ಅಡುಗೆಗಳಲ್ಲಿ ಗೋ ಮಾಂಸ ಬಳಸಿದೆ ಎಂದು ಆರೋಪಿಸಿರುವ ಸ್ವಯಂ ಘೋಷಿತ ಗೋ ರಕ್ಷಕರು ರಾತ್ರಿ ಊಟ ನಡೆಯುತ್ತಿದ್ದ ವೇಳೆಯೇ ದಾಳಿ ನಡೆಸಿದ್ದಾರೆ.
ಊಟ ಮಾಡುತ್ತಿದ್ದವರ ಮೇಲೆ ಯುವಕರ ಗುಂಪು ಹಲ್ಲೆ ಮಾಡಿತಲ್ಲದೆ ಅಲ್ಲಿದ್ದ ಅಡುಗೆಯನ್ನೆಲ್ಲಾ ಚೆಲ್ಲಿ ದಾಂಧಲೆ ನಡೆಸಿದ್ದಾರೆ. ಇದನ್ನು ತಡೆಯಲು ಬಂದ ಮೂವರು ಯುವಕರ ಮೇಲೆ ಹಲ್ಲೆಯನ್ನೂ ಮಾಡಿದ್ದಾರೆಂದು ಕೊರಗ ಕುಟುಂಬ ಪೊಲೀಸರಿಗೆ ನೀಡಿರುವ ದೂರಿನಲ್ಲಿ ವಿವರಿಸಿದ್ದಾರೆ.
ದೂರಿನ ಹಿನ್ನೆಲೆಯಲ್ಲಿ 13 ಜನರನ್ನು ಬಂಧಿಸಲಾಗಿದ್ದು, ಅವರ ವಿರುದ್ಧ ದಲಿತರ ವಿರುದ್ಧದ ದೌರ್ಜನ್ಯದ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ತಿಳಿಸಿದರು.