ಉಡುಪಿಯಲ್ಲಿ ರಾಜ್ಯದ ಪ್ರಪ್ರಥಮ ಒಳಾಂಗಣ ಟೆನಿಸ್ ಕೋರ್ಟ್
3.5 ಕೋಟಿ ವೆಚ್ಚದಲ್ಲಿ ಉಡುಪಿ ಜಿಲ್ಲೆಯ ಅಜ್ಜರಕಾಡಿನಲ್ಲಿ ರಾಜ್ಯದ ಪ್ರಪ್ರಥಮ ಅಂತಾರಾಷ್ಟ್ರೀಯ ಗುಣಮಟ್ಟದ ಒಳಾಂಗಣ ಟೆನ್ನಿಸ್ ಕೋರ್ಟ್ ನಿರ್ಮಾಣವಾಗುತ್ತಿದೆ.
ಉಡುಪಿ, ಮಾರ್ಚ್ 19 : ಉಡುಪಿ ಜಿಲ್ಲೆಯ ಅಜ್ಜರಕಾಡಿನಲ್ಲಿ ರಾಜ್ಯದ ಪ್ರಪ್ರಥಮ ಅಂತಾರಾಷ್ಟ್ರೀಯ ಗುಣಮಟ್ಟದ ಒಳಾಂಗಣ ಟೆನ್ನಿಸ್ ಕೋರ್ಟ್ ನಿರ್ಮಾಣವಾಗುತ್ತಿದೆ.
ಅಜ್ಜರಕಾಡಿನಲ್ಲಿರುವ ಈಜುಕೊಳದ ಎದುರಿನಲ್ಲಿರುವ 1.5 ಎಕರೆ ಜಾಗದಲ್ಲಿ ಸುಮಾರು 3.5 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಕ್ರೀಡಾಂಗಣ ನಿರ್ಮಾಣವಾಗುತ್ತಿದೆ. ಏಕಕಲಾಕ್ಕೆ ಸುಮಾರು 500 ಮಂದಿ ಪಂದ್ಯ ವೀಕ್ಷಿಸಬಹುದಾದ ಸುಸಜ್ಜಿತ ಗ್ಯಾರಿಯೂ ಇದರಲ್ಲಿದಲಿದೆ. [ಉಡುಪಿ: ಅಪಾಯದಂಚಿನಲ್ಲಿ ಅಂಗನವಾಡಿ ]
ಈ ಕುರಿತು ಮಾತನಾಡಿದ ಉಡುಪಿ ಜಿಲ್ಲಾ ಯುವಶಕ್ತಿ ಮತ್ತು ಕ್ರೀಡಾ ಅಧಿಕಾರಿ ರೋಶನ್ ಶೆಟ್ಟಿ, "ಟೆನಿಸ್ ಕೋರ್ಟ್ ನಿರ್ಮಾಣಕ್ಕೆ ಕ್ರೀಡಾ ಇಲಾಖೆಯಿಂದ 2.5 ಕೋಟಿ ರೂಪಾಯಿ ಬಿಡುಗಡೆಗೊಳ್ಳಲಿದೆ. ಸಂಸದ ಆಸ್ಕರ್ ಫೆರ್ನಾಂಡಿಸ್ , ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಿಂದ ಒಂದು ಕೋಟಿ ರೂಪಾಯಿ ನೀಡುವುದಾಗಿ ಭರವಸೆ ನೀಡಿದ್ದಾರೆ. ಈ ಮೂಲಕ ಉಡುಪಿಗೆ ಸಿಂಥೆಟಿಕ್ ಒಳಾಂಗಣ ಟೆನ್ನಿಸ್ ಕೋರ್ಟ್ ಲಭ್ಯವಾಗಲಿದೆ," ಎಂದು ಹೇಳಿದ್ದಾರೆ.
ಹಲವು ಸ್ಥಳಗಳಲ್ಲಿ ಸಿಂಥೆಟಿಕ್ ಟೆನ್ನಿಸ್ ಕೋರ್ಟುಗಳಿದ್ದರೂ ಅವೆಲ್ಲವೂ ಹೊರಾಂಗಣ ಟೆನ್ನಿಸ್ ಕೋರ್ಟುಗಳಾಗಿವೆ. ಹೊರಾಂಗಣ ಕೋರ್ಟಿನಲ್ಲಿ ಮಳೆಗಾಲದಲ್ಲಿ ಟೆನ್ನಿಸ್ ಪ್ರಾಕ್ಟಿಸ್ ಮಾಡಲಾಗುವುದಿಲ್ಲ. ಹೀಗಾಗಿ ಉಡುಪಿಯ ಟೆನಿಸ್ ಕೋರ್ಟ್ ವಿಶೇಷವೆನಿಸಿದೆ.
ಕಾಮಗಾರಿ ಪೂರ್ಣ
ಇಲಾಖೆಯು ಈಗಾಗಲೇ ಒಂದು ಕೋಟಿ ರೂ ಬಿಡುಗಡೆಗೊಳಿಸಿದ್ದು, ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಉಳಿದ 1.5 ಕೋಟಿ ರೂ ಬಿಡುಗಡೆ ಹಂತದಲ್ಲಿದೆ. ನಿರ್ಮಿತಿ ಕೇಂದ್ರ ಈ ಕ್ರೀಡಾಂಗಣದ ಕಾಮಗಾರಿ ನಡೆಸುತ್ತಿದೆ. ಮೇ ಅಂತ್ಯಕ್ಕೆ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ.
ಕ್ರೀಡಾಂಗಣದಲ್ಲಿ ಚೇಜಿಂಗ್ ರೂಮ್ ಗಳು, ಕೋಚ್ ರೂಮ್ ಗಳು ಮತ್ತು ಶೌಚಾಲಯ ಸೌಲಭ್ಯಗಳೂ ಇರಲಿವೆ. [ಉಡುಪಿ: ಚಿನ್ನದ ವ್ಯಾಪಾರಿಯ ದರೋಡೆ]
ಕುಂದಾಪುರ, ಬ್ರಹ್ಮಾವರ, ಎಸ್ಎಂಎಸ್ ಕಾಲೇಜು ಮತ್ತು ಅಂಬಲಪಾಡಿಯಲ್ಲಿ ಶಾಮಿಲಿ ಸಭಾಗೃಹದ ಹತ್ತಿರ ಸುಮಾರು 80 ಆಟಗಾರರು ಟೆನ್ನಿಸ್ ತರಬೇತಿ ಪಡೆಯುತ್ತಿದ್ದಾರೆ. 25 ವಿದ್ಯಾರ್ಥಿಗಳು ಪ್ರತಿನಿತ್ಯ ಪ್ರಾಕ್ಟಿಸ್ ನಡೆಸುತ್ತಿದ್ದಾರೆ. ಈ ಕೋರ್ಟ್ ಉದ್ಘಾಟನೆಗೊಂಡರೆ ರಾಜ್ಯ ಮತ್ತು ರಾಷ್ಟ್ರೀಯ ಟೆನ್ನಿಸ್ ಆಟಗಾರರಿಗೆ ಅಭ್ಯಾಸಕ್ಕೆ ಸೂಕ್ತ ಕ್ರೀಡಾಂಗಣ ಸಿಕ್ಕಂತಾಗುತ್ತದೆ.