ಉಡುಪಿ ಶ್ರೀಕೃಷ್ಣ ಮಠಕ್ಕೆ ಮುತ್ತಿಗೆ ಹಾಕಿದರೆ ಸುಮ್ನೆ ಬಿಡ್ತೀವಾ?
ಉಡುಪಿ, ಅ 15: ಇತ್ತೀಚೆಗೆ ನಡೆದ 'ಉಡುಪಿ ಚಲೋ' ಕಾರ್ಯಕ್ರಮದ ವೇಳೆ ಕೃಷ್ಣಮಠಕ್ಕೆ ಮುತ್ತಿಗೆ ಹಾಕುತ್ತೇವೆ ಎಂದಿದ್ದವರಿಗೆ ಕರವೇ ಜಿಲ್ಲಾಧ್ಯಕ್ಷರು ಮರು ಸವಾಲು ಹಾಕಿದ್ದಾರೆ.
ಈ ನಡುವೆ, ಉಡುಪಿ ಚಲೋ ಕಾರ್ಯಕ್ರಮದ ನಂತರ ಐತಿಹಾಸಿಕ ಕೃಷ್ಣಮಠಕ್ಕೆ ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸ್ ಬಂದೋಬಸ್ತ್ ಹೆಚ್ಚಿಸಲಾಗಿದೆ. ಹಬ್ಬ ರಜೆಯ ಸೀಸನ್ ಆಗಿರುವುದರಿಂದ ಭಕ್ತರ ಸಂಖ್ಯೆಯೂ ಗಣನೀಯವಾಗಿ ಹೆಚ್ಚಿದೆ. (ಚಲೋ ಉಡುಪಿ, ಜಿಗ್ನೇಶ್ ಮೆವಾನಿ ಪ್ರಖರ ಭಾಷಣ)
ಉಡುಪಿ ಚಲೋಗೆ ಪ್ರತಿಯಾಗಿ ಉಡುಪಿ ಸ್ವಚ್ಚ ಹೆಸರಿನಲ್ಲಿ 'ಕನಕನ ನಡೆ' ಕಾರ್ಯಕ್ರಮ ಯುವ ಬ್ರಿಗೇಡ್ ಹಮ್ಮಿಕೊಂಡಿರುವುದರಿಂದ ಮಠಕ್ಕೆ ಪೊಲೀಸರು ಭದ್ರತೆ ಹೆಚ್ಚಿಸಿದ್ದಾರೆ.
ಪಂಕ್ತಿಭೇದ ನಿಷೇಧಿಸದಿದ್ದರೆ ಕೃಷ್ಣಮಠ ಮುತ್ತಿಗೆ ಹಾಕುವುದಾಗಿ ಉಡುಪಿ ಚಲೋ ಕಾರ್ಯಕ್ರಮದಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಅವರಿಗೆ ಧೈರ್ಯವಿದ್ದರೆ, ಮುತ್ತಿಗೆ ಹಾಕಲಿ ಅವರನ್ನು ಹೇಗೆ ಓಡಿಸಬೇಕು ಎನ್ನುವುದು ನಮಗೆ ತಿಳಿದಿದೆ ಎಂದು ಕರವೇ ಜಿಲ್ಲಾಧ್ಯಕ್ಷ ಅನ್ಸಾರ್ ಅಹಮದ್ ಮರು ಸವಾಲು ಹಾಕಿದ್ದಾರೆ.
ಎರಡು ದಿನದ ಹಿಂದೆ ಕೃಷ್ಣಮಠಕ್ಕೆ ಕುಟುಂಬ ಸಮೇತ ಬಂದಿದ್ದ ಮಾಜಿ ರಾಜ್ಯ ಉಪಮುಖ್ಯಮಂತ್ರಿ ಆರ್ ಅಶೋಕ್ ಬಳಿ ಪೇಜಾವರ ಶ್ರೀಗಳು, ಉಡುಪಿ ಚಲೋ ಕಾರ್ಯಕ್ರಮದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದರು. (ಮಠಕ್ಕೆ ಮುತ್ತಿಗೆ ಹಾಕಿದರೆ ಉಪವಾಸ ಮಾಡ್ತೀನಿ)
ಕೃಷ್ಣಮಠಕ್ಕೆ ಮುತ್ತಿಗೆ, ಯಾರು ಏನು ಹೇಳಿದರು, ಮುಂದೆ ಓದಿ..
ಕರವೇ ಸವಾಲು
ಗುಜರಾತಿನಿಂದ ಕರೆತಂದ ವ್ಯಕ್ತಿಯ ಮೂಲಕ ಉಡುಪಿಯ ಸೌಹಾರ್ದತೆ ಕೆಡೆಸಲು ಪ್ರಯತ್ನಿಸಬೇಡಿ. ಕೃಷ್ಣಮಠ ಮುತ್ತಿಗೆ ಅಥವಾ ಅವರ ಯಾವ ಕೆಲಸಕ್ಕೂ ಉಡುಪಿಯಲ್ಲಿ ಅವಕಾಶ ನೀಡುವುದಿಲ್ಲ. ಕೃಷ್ಣಮಠದ ಬಗ್ಗೆ ಅವರಿಗೇನು ಗೊತ್ತಿದೆ - ಕರವೇ ಜಿಲ್ಲಾಧ್ಯಕ್ಷ.
ಪೇಜಾವರರು ಮಾಡಿದಷ್ಟು ಅವರು ಮಾಡಿದ್ದಾರಾ?
ಪೇಜಾವರ ಶ್ರೀಗಳ ಬಗ್ಗೆ ಅವಹೇಳನಕಾರಿ ಭಾಷಣ ಮಾಡಲಾಗಿದೆ. ಪೇಜಾವರ ಶ್ರೀಗಳು ಮಾಡಿದಷ್ಟು ದಲಿತಪರ ಕೆಲಸ ಅವರುಗಳು ಮಾಡಿದ್ದಾರಾ? ಶ್ರೀಗಳ ಜೊತೆ ಚರ್ಚಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳುವುದು.
ಸಮಾಜಮುಖಿ ಕೆಲಸ
ಪೇಜಾವರ ಶ್ರೀಗಳು ಅನೇಕ ಸಮಾಜಮುಖಿ ಕೆಲಸಗಳನ್ನು ಮಾಡಿಕೊಂಡು ಬಂದಿದ್ದಾರೆ. ಅವರ ಬಗ್ಗೆ ವೃಥಾ ಆರೋಪ ತಪ್ಪು. ಸಮಾಜದ ಎಲ್ಲಾ ವರ್ಗದ ಜನರಿಗೆ ಶ್ರೀಗಳ ಮೇಲೆ ಗೌರವವಿದೆ. ಇಳಿವಯಸ್ಸಿನಲ್ಲಿ ಅವರಿಗೇಕೆ ತೊಂದರೆ ಕೊಡುತ್ತಿದ್ದೀರಿ - ರಾಘವೇಶ್ವರ ಶ್ರೀ.
ಪಂಕ್ತಿಭೇದ ಇಲ್ಲ
ಉಡುಪಿ ಕೃಷ್ಣಮಠದಲ್ಲಿ ಪಂಕ್ತಿಭೇದ ಇಲ್ಲ. ಸುಮ್ಮನೇ ಶ್ರೀಗಳ ಮೇಲೆ ಆರೋಪ ಹೊರಿಸುವುದು ಸರಿಯಲ್ಲ. ಮಠಕ್ಕೆ ಮುತ್ತಿಗೆ ಹಾಕುವ ಮಾತು ಬೇಡ, ಇದು ದೊಡ್ಡತಪ್ಪು - ಯಡಿಯೂರಪ್ಪ.
ಯಾವ ಕಾರಣಕ್ಕೆ ಹೇಳಿದ್ದಾರೆ?
ಪೇಜಾವರ ಶ್ರೀಗಳು ಯಾವ ಕಾರಣಕ್ಕೆ ಉಪವಾಸ ಕೂಡುವ ಹೇಳಿಕೆ ನೀಡಿದ್ದಾರೆ ಎನ್ನುವುದು ತಿಳಿಯದು. ದೇಶದಲ್ಲಿ ಎಲ್ಲಿಯೂ ಪಂಕ್ತಿಭೇದ ಮಾಡಬಾರದು. ಶ್ರೀಗಳು ದಲಿತರ ಕೇರಿಗೆ ಹೋಗಿ ಜಾಗೃತಿ ಮೂಡಿಸುವ ಕೆಲಸವನ್ನು ಮಾಡಿದ್ದಾರೆ - ಸಚಿವ ಆಂಜನೇಯ.
ಸೋಶಿಯಲ್ ಡೆಮೊಕ್ರಟಿಕ್ ಪಾರ್ಟಿ
ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದ್ದು ಯಾವುದೇ ಧರ್ಮ, ಜಾತಿಯಂದಲ್ಲ. ದೇಶದಲ್ಲಿ ಕೋಮುವಾದಿ ಶಕ್ತಿಗಳ ಅಟ್ಟಹಾಸ ಹೆಚ್ಚಾಗುತ್ತಿದೆ. ಈ ಸಮಯದಲ್ಲಿ ನಾವೆಲ್ಲಾ ಒಗ್ಗಟ್ಟಾಗಿರಬೇಕಾಗಿದೆ - ಉಡುಪಿಯಲ್ಲಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಲತೀಫ್ ಪುತ್ತೂರು.