ಪರ್ಯಾಯ ಕೌಂಟ್ ಡೌನ್ : ಉಡುಪಿಗೆ ಹರಿದು ಬಂತು ಜನಸಾಗರ
ಉಡುಪಿ, ಜ 17: ನಭೂತೋ ನಭವಿಷ್ಯತಿ ಎನ್ನುವ ಹಾಗೇ, ಹೊರ ಕಾಣಿಕೆಯ ಪ್ರವಾಹವೇ ಹರಿದು ಬಂದ ನಂತರ, ಕರಾವಳಿ ನಗರ ಉಡುಪಿಯಲ್ಲಿ ಎಲ್ಲೆಲ್ಲಿ ನೋಡಿದರೂ ಈಗ ಜನಸಾಗರ.
ದಣಿವರಿಯದ ಯತಿ, ಪೇಜಾವರ ಅಧೋಕ್ಷಜ ಮಠದ ಶ್ರೀವಿಶ್ವೇಶ್ವರತೀರ್ಥ ಶ್ರೀಗಳ ಪಂಚಮ ಪರ್ಯಾಯಕ್ಕೆ ಕ್ಷಣಗಣನೆ ಆರಂಭವಾಗುತ್ತಿದ್ದಂತೇ, ಈಗಾಗಲೇ ಉಡುಪಿ ನಗರ ಜನ, ಭಕ್ತರಿಂದ ತುಂಬಿ ಹೋಗಿದೆ.
ಮೈಸೂರು ದಸರಾದಂತೆ ಈ ಭಾಗದಲ್ಲಿ ಎರಡು ವರ್ಷಕ್ಕೊಮ್ಮೆ ನಾಡಹಬ್ಬದ ರೀತಿಯಲ್ಲಿ ಆಚರಿಸಲಾಗುವ ಪರ್ಯಾಯದ ವಿದಿವಿಧಾನ ಇನ್ನೇನು ಕೆಲವೇ ಗಂಟೆಗಳಲ್ಲಿ (ಜ 18, ನಸುಕಿನ 2.30ಕ್ಕೆ) ಆರಂಭವಾಗಲಿದೆ. (ಪರ್ಯಾಯ: ಪುತ್ತಿಗೆ ಶ್ರೀ ವಿವಾದ)
ಪರ್ಯಾಯದ ಮುನ್ನಾದಿನವಾದ ಭಾನುವಾರ (ಜ 17) ಮುಸ್ಲಿಂ ಸೌಹಾರ್ದ ಸಮಿತಿ ನಗರದ ಸಂಸ್ಕೃತ ಕಾಲೇಜಿನಲ್ಲಿ ರಕ್ತದಾನ ಶಿಬಿರ ಆಯೋಜಿಸಿತ್ತು. ಸ್ಥಳಕ್ಕೆ ಭೇಟಿ ನೀಡಿದ ಪೇಜಾವರ ಶ್ರೀಗಳು ಸಮಿತಿಯ ಕೆಲಸವನ್ನು ಶ್ಲಾಘಿಸಿದ್ದಾರೆ. ಮುಸ್ಲಿಂ ಸಮುದಾಯದ ಭಾವೈಕ್ಯತೆಯ ಕೆಲಸ ವ್ಯಾಪಕ ಪ್ರಶಂಸೆಗೊಳಗಾಯಿತು.
ಎಸ್ಪಿ ಅಣ್ಣಾಮಲೈ ನೇತೃತ್ವದಲ್ಲಿ ಉಡುಪಿ ಜಿಲ್ಲಾ ಪೊಲೀಸರು ಭಾರೀ ಬಂದೋಬಸ್ತ್ ಮಾಡಿದ್ದು, ಉಡುಪಿಯ ಜನತೆ ಈ ಮಟ್ಟಿನ ಖಾಕಿ ಕಾವಲನ್ನು ನೋಡಿದ್ದು ಇದೇ ಮೊದಲು ಎನ್ನಬಹುದು. ಉಡುಪಿ ಪರ್ಯಾಯ ಮೆರವಣಿಗೆ, ಪರ್ಯಾಯ ದರ್ಬಾರಿನ ತಾಜಾ ಸುದ್ದಿ (ಜ 18) ನಮ್ಮಲ್ಲಿ ಪ್ರಕಟವಾಗಲಿದೆ.
ಉಡುಪಿಗೆ ಆಗಮಿಸಿದ ಉಮಾಭಾರತಿ, ಮುಂದಿನ ಪುಟದಲ್ಲಿ..
ಪೇಜಾವರ ಶ್ರೀಗಳ ಮನವಿ
ಪರ್ಯಾಯ ಪೀಠವನ್ನೇರಲಿರುವ ಪೇಜಾವರ ಹಿರಿಯ ಶ್ರೀಗಳು, ಉತ್ಸವ ಮತ್ತು ಕಾರ್ಯಕ್ರಮದಲ್ಲಿ ಭಾಗವಹಿಸುವ ಎಲ್ಲಾ ಭಕ್ತಾದಿಗಳು ಶಾಂತಿ, ಸೌಹಾರ್ದತೆ, ಶುಚಿತ್ವ ಕಾಪಾಡಿಕೊಂಡು ಬಂದು, ಪೊಲೀಸರು ನೀಡುವ ಸೂಚನೆಯನ್ನು ಪಾಲಿಸಲು ಮನವಿ ಮಾಡಿದ್ದಾರೆ.
ಉಮಾಭಾರತಿ ಆಗಮನ
ಗುರುಗಳ ಪರ್ಯಾಯಕ್ಕೆ ಖುದ್ದು ಸಾಕ್ಷಿಯಾಗಲು ಕೇಂದ್ರ ಸಚಿವೆ ಉಮಾಭಾರತಿ ಈಗಾಗಲೇ ಉಡುಪಿಗೆ ಆಗಮಿಸಿದ್ದಾರೆ. ಸ್ಥಳೀಯ ಸಂಸದೆ ಶೋಭಾ ಕರಂದ್ಲಾಜೆ ಉಮಾ ಭಾರತಿಯವರನ್ನು ಸ್ವಾಗತಿಸಿದ್ದಾರೆ.
ಪರ್ಯಾಯದ ಮುನ್ನಾ ದಿನ ಲಕ್ಷ ಜನರಿಗೆ ಭೋಜನ ವ್ಯವಸ್ಥೆ
ಅನ್ನಬ್ರಹ್ಮನ ಕ್ಷೇತ್ರವೆಂದು ಪ್ರಸಿದ್ದಿ ಪಡೆದಿರುವ ಉಡುಪಿಯ ಪರ್ಯಾಯದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಎನ್ನುವಂತೆ ಮುನ್ನಾದಿನವಾದ ಭಾನುವಾರ (ಜ 17) ರಾತ್ರಿ ಹೊರೆ ಉಗ್ರಾಣದ ಪಕ್ಕದ ಪೆಂಡಾಲಿನಲ್ಲಿ ಒಂದು ಲಕ್ಷ ಜನರಿಗೆ ಭೋಜನದ ವ್ಯವಸ್ಥೆ ಮಾಡಲಾಗಿದೆ.
ಐದನೇ ಬಾರಿಯ ಪರ್ಯಾಯ
1952, 1968, 1984, 2000 ನಂತರ ಐದನೇ ಬಾರಿಗೆ ಪೇಜಾವರ ಶ್ರೀಗಳು ಸರ್ವಜ್ಞ ಪೀಠವನ್ನೇರಲಿದ್ದಾರೆ. ರಾಜ್ಯ ಗೃಹ ಸಚಿವ ಪರಮೇಶ್ವರ್ ಈಗಾಗಲೇ ಉಡುಪಿಯಲ್ಲಿ ಭದ್ರತಾ ಪರಿಶೀಲನೆ ನಡೆಸಿ, ಐಜಿ ಮತ್ತು ಎಸ್ಪಿ ಜೊತೆ ಮಾತುಕತೆ ನಡೆಸಿದ್ದಾರೆ.
ಅಭೂತಪೂರ್ವ ಭದ್ರತೆ
ಎಸ್ಪಿ ಅಣ್ಣಾಮಲೈ ಅವರಿಗೆ ಮೂರು ಜಿಲ್ಲೆಗಳ ಎಸ್ಪಿ, 11 ಡಿವೈಎಸ್ಪಿ, 21 ಸಿಪಿಐ, 21 ಆರ್ಪಿಐ, 115 ಪಿಎಸೈ, 105 ಎ ಎಸೈ, 905 ಹೆಡ್ ಕಾನ್ಸ ಸ್ಟೇಬಲ್, 90 ಮಹಿಳಾ ಸಿಬ್ಬಂದಿ, 250 ಹೋಂಗಾರ್ಡ್, 6 ಕೆಎಸ್ಆರ್ಟಿಸಿ ಪ್ಲಟೂನು, 9 ಡಿಎಆರ್ ತುಕುಡಿ, 5ಎ ಎಸ್ಟಿ, 2 ಬಾಂಬ್ ಡಿಟೆಕ್ಟೀವ್ ಪಡೆ, 50 ಗರುಡಾ ವಾಹನ, 50 ಎ ಎನ್ ಎಫ್ ಕಮಾಂಡೋ, 5 ಅಗ್ನಿಶಾಮಕ ದಳ, 10 ಅಂಬುಲೆನ್ಸ್ ಮತ್ತು 300 ವಾಕಿಟಾಕಿಗಳು ಭದ್ರತೆಗಾಗಿ ಕೆಲಸ ಮಾಡಲಿವೆ.