ಉಡುಪಿ: ತನ್ನ ಪತ್ನಿಗೆ ನ್ಯಾಯ ದೊರಕಿಸಿ ಎಂದಿದ್ದ ಪೇದೆ ಸಸ್ಪೆಂಡ್!
ಉಡುಪಿ, ಏಪ್ರಿಲ್ 09 : ಇಲ್ಲಿನ ಮಲ್ಪೆ ಪೊಲೀಸ್ ಠಾಣಾ ಸಿಬ್ಬಂದಿ ಪ್ರಕಾಶ್ ಅವರ ಪತ್ನಿ ಜತೆ ಅಸಭ್ಯವಾಗಿ ವರ್ತಿಸಿ, ಕಿರುಕುಳ ನೀಡಿದ ಆರೋಪಿಗೆ ಥಳಿಸಿದಕ್ಕೆ ಸಚಿವ ಪ್ರಮೋದ್ ಮಧ್ವರಾಜ್ ಪ್ರಭಾವದಿಂದ ಪೇದೆಯನ್ನು ಸಸ್ಪೆಂಡ್ ಮಾಡಲಾಗಿದೆ.
ಏಪ್ರಿಲ್ 5 ರಂದು ಪ್ರಕಾಶ್ ಪತ್ನಿ ಜ್ಯೋತಿ ಗರ್ಭಿಣಿಯಾಗಿದ್ದರಿಂದ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದ ವೇಳೆ ಕುಮಾರ್ ಎಂಬಾತ ಕಣ್ಣೊಡೆದು ಮೈಮುಟ್ಟಿದ್ದಾನೆ.
ಇದರಿಂದ ಕೋಪಗೊಂಡ ಪತಿ ಪ್ರಕಾಶ್ ಕುಮಾರ್ ನಿಗೆ ಎರಡೇಟು ಕೊಟ್ಟಿದ್ದಾರೆ. ನಂತರ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ ಅಲ್ಲಿ ಕೂಡಾ ಏಟು ನೀಡಿದ್ದರು.
ಹಲ್ಲೆಗೊಳಗಾದ ವ್ಯಕ್ತಿ ನೀಡಿದ ದೂರಿನಂತೆ ಮಲ್ಪೆ ಪೊಲೀಸ್ ಠಾಣೆಯ ಕಾನ್ಸ್ಟೆಬಲ್ ಪ್ರಕಾಶ್ ಅವರನ್ನು ಅಮಾನತು ಮಾಡಲಾಗಿದೆ ಎಂದು ಎಸ್ಪಿ ಕೆ.ಟಿ. ಬಾಲಕೃಷ್ಣ ತಿಳಿಸಿದ್ದಾರೆ.
ಆದರೆ ಇಡೀ ಘಟನೆ ರಾಜಕೀಯ ಪ್ರೇರಿತ. ಜಿಲ್ಲಾ ಉಸ್ತುವಾರಿ ಸಚಿವರು ಒತ್ತಡ ತಂದು ನನ್ನನ್ನು ಅಮಾನತು ಮಾಡಿಸಿದ್ದಾರೆ ಎಂದು ಪೊಲೀಸ್ ಕಾನ್ಸ್ಟೆಬಲ್ ಪ್ರಕಾಶ್ ತಿಳಿಸಿದ್ದಾರೆ.
ಸಚಿವರ ಫಿಶ್ಮೀಲ್ ಕಂಪೆನಿಯಲ್ಲಿರುವ ಕಾರ್ಮಿಕರಿಬ್ಬರು ತನ್ನ ಪತ್ನಿಯನ್ನು ಚುಡಾಯಿಸಿದ್ದು, ಅವರನ್ನು ರಕ್ಷಿಸಿ ತನ್ನ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಆರೋಪಿಸಿದ್ದಾರೆ.
ನಮ್ಮ ಕಂಪನಿಯ ಕಾರ್ಮಿಕನ ಮೇಲೆ ಪೇದೆ ಹಲ್ಲೆ ನಡೆಸಿದ್ದು ಸರಿಯಲ್ಲ. ಹಲ್ಲೆಯಿಂದಾಗಿ ಕಂಪನಿಯ ಟ್ರ್ಯಾಕ್ಟರ್ ಚಾಲಕ ಕುಮಾರ್ ಬೆನ್ನು ಮೂಳೆಗೆ ಪೆಟ್ಟಾಗಿದೆ. ಪೊಲೀಸರು ಆ ರೀತಿ ದಬ್ಬಾಳಿಕೆ ಮಾಡುವುದು ಸರಿಯಲ್ಲ.
ಸಸ್ಪೆಂಡ್ ಮಾಡಿದ ಮೇಲೆ ಪೇದೆ ಪತ್ನಿ ಕಂಪ್ಲೆಂಟ್ ಮಾಡಿರಬಹುದು. ಚಾಲಕ ಕುಮಾರ್ ತಪ್ಪು ಮಾಡಿದರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಿ. ನಾವು ನಮ್ಮ ಕಂಪನಿಯಿಂದಲೇ ಆತನ ಪರವಾಗಿ ದೂರು ನೀಡಿದ್ದೇವೆ ಎಂದು ಸಚಿವ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.