ಭಾಸ್ಕರ್ ಶೆಟ್ಟಿ ಹತ್ಯೆ ಪ್ರಕರಣ ಸಿಐಡಿಯಿಂದ ಚಾರ್ಜ್ ಶೀಟ್ ಸಲ್ಲಿಕೆ
ಜುಲೈ 28ರಂದು ಹತ್ಯೆಯಾಗಿದ್ದ ಉದ್ಯಮಿ ಭಾಸ್ಕರ್ ಶೆಟ್ಟಿ ಪ್ರಕರಣ ತನಿಖೆಯನ್ನು ಸಿಐಡಿ ತಂಡ ಪೂರ್ಣಗೊಳಿಸಿದ್ದು. ಸುಮಾರು 800 ಪುಟಗಳ ಜಾರ್ಜ್ ಶೀಟ್ ನ್ನು ಸಿಐಡಿ ಪೊಲೀಸರು ಬುಧವಾರ ಉಡುಪಿ ಜೆಎಂಸಿ ನ್ಯಾಯಲಯಕ್ಕೆ ಸಲ್ಲಿಸಿದೆ.
ಉಡುಪಿ, ನವೆಂಬರ್.02 : ಉದ್ಯಮಿ ಭಾಸ್ಕರ ಶೆಟ್ಟಿ ಕೊಲೆ ಪ್ರಕರಣದ ತನಿಖೆಯನ್ನು ಸಿಐಡಿ ಪೊಲೀಸರ ತಂಡ ಪೂರ್ಣಗೊಳಿಸಿದೆ. ಸುಮಾರು 800 ಪುಟಗಳ ಚಾರ್ಜ್ ಶೀಟ್ ನ್ನು ಉಡುಪಿ ಜೆಎಂಸಿ ನ್ಯಾಯಾಲಯಕ್ಕೆ ಬುಧವಾರ ಸಲ್ಲಿಸಿದೆ.
ಸಿಐಡಿ ಎಸ್ಪಿ ಮಾರ್ಟಿನ್ ಹಾಗೂ ಡಿವೈಎಸ್ ಪಿ ಚಂದ್ರಶೇಖರ್ ಅವರು ಉಡುಪಿ ಜೆಎಂಸಿ ನ್ಯಾಯಾಲಯಕ್ಕೆ ಬುಧವಾರ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದರು. ಪಳ್ಳಿ ನದಿಯಲ್ಲಿ ಪತ್ತೆಯಾದ ಮೂಳೆಯ ಚೂರುಗಳು ಭಾಸ್ಕರ ಶೆಟ್ಟಿಯವರದು ಎಂದು ಡಿಎನ್ಎ ವರದಿಯಿಂದ ದೃಢಪಟ್ಟಿದೆ ಎಂಬ ಸ್ಫೋಟಕ ಮಾಹಿತಿ ಚಾರ್ಜ್ ಶೀಟ್ ಒಳಗೊಂಡಿದೆ. ಈ ಪ್ರಕರಣದಲ್ಲಿ ಐವರು ಆರೋಪಿಗಳ ವಿರುದ್ಧ ಸಿಐಡಿ ಪೊಲೀಸರು ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದಾರೆಂದು ತಿಳಿದು ಬಂದಿದೆ. [ಉಡುಪಿ ಭಾಸ್ಕರ ಶೆಟ್ಟಿ ಕೊಲೆ ಪ್ರಕರಣ ಸಿಐಡಿ ತನಿಖೆಗೆ]
ಭಾಸ್ಕರ ಶೆಟ್ಟಿ ಪತ್ನಿ ರಾಜೇಶ್ವರಿ ಶೆಟ್ಟಿ (50), ಪುತ್ರ ನವನೀತ್ ಶೆಟ್ಟಿ (30), ಜ್ಯೋತಿಷಿ ನಿರಂಜನ್ ಭಟ್ (26), ನಿರಂಜನ್ ಭಟ್ ತಂದೆ ಶ್ರೀನಿವಾಸ ಭಟ್ (56), ಕಾರು ಚಾಲಕ ರಾಘವೇಂದ್ರ (26) ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆ ಮಾಡಲಾಗಿದೆ. ಶಾಕಿಂಗ್ : ಪತಿಯನ್ನು ಯಜ್ಞಕುಂಡದಲ್ಲಿ ಹಾಕಿ ಸುಟ್ಟಳೇ ಪತ್ನಿ]
ಸೌದಿ ಅರೇಬಿಯಾದಲ್ಲಿದ್ದ ಭಾಸ್ಕರ ಶೆಟ್ಟಿ ಅವರು ಜುಲೈ ತಿಂಗಳಿನಲ್ಲಿ ಉಡುಪಿಗೆ ಬಂದಿದ್ದರು. ಜುಲೈ 31ರಂದು ಅವರು ನಾಪತ್ತೆಯಾಗಿದ್ದಾರೆ ಎಂದು ತಾಯಿ ಗುಲಾಬಿ ಶೆಟ್ಟಿ ಪೊಲೀಸರಿಗೆ ದೂರು ನೀಡಿದ್ದರು.
ಮಣಿಪಾಲ ಪೊಲೀಸರು ತನಿಖೆ ಆರಂಭಿಸಿದ್ದರು. ರಾಜೇಶ್ವರಿ ಶೆಟ್ಟಿ, ಮತ್ತು ನವನೀನ್ ಬಂಧಿಸಿದ ಪೊಲೀಸರು ತೀವ್ರ ವಿಚಾರಣೆ ನಡೆಸಿದಾಗ ಭಾಸ್ಕರ ಶೆಟ್ಟಿ ಹತ್ಯೆಯಾಗಿರುವುದು ಬೆಳಕಿಗೆ ಬಂದಿತ್ತು.
ರಾಜೇಶ್ವರಿ ಶೆಟ್ಟಿ, ನವನೀತ್ ಶೆಟ್ಟಿ, ನಿರಂಜನ್ ಭಟ್ ಸೇರಿಕೊಂಡು ಜುಲೈ 28ರಂದು ಭಾಸ್ಕರ ಶೆಟ್ಟಿ ಅವರ ಕಣ್ಣಿಗೆ ಪೆಪ್ಪರ್ ಸ್ಟ್ರೇ ಹಾಕಿ, ಕಬ್ಬಿಣದ ಸಲಾಕೆಯಿಂದ ತಲೆಗೆ ಹೊಡೆದು ಹತ್ಯೆ ಮಾಡಿದ್ದರು.
ನಂತರ ಶವವನ್ನು ನಂದಳಿಕೆಗೆ ತೆಗೆದುಕೊಂಡು ಹೋಗಿ ನಿರಂಜನ್ ಭಟ್ ಮನೆಯ ಹೋಮಕುಂಡದಲ್ಲಿ ಶವವನ್ನು ಸುಟ್ಟು, ಅವೇಶಷಗಳನ್ನು ಸಮೀಪದ ನದಿಗೆ ಎಸೆದಿದ್ದಾರೆ ಎಂಬುದು ಆರೋಪ.
ಮೊದಲು ಮಣಿಪಾಲ ಪೊಲೀಸರು ಈ ಪ್ರಕರಣದ ತನಿಖೆ ನಡೆಸುತ್ತಿದ್ದರು. ನಂತರ ತನಿಖೆಯನ್ನು ಸರ್ಕಾರ ಸಿಐಡಿಗೆ ವಹಿಸಿ ಆದೇಶ ಹೊರಡಿಸಿತ್ತು. ಕೊಲೆ ಮತ್ತು ಸಾಕ್ಷ್ಯ ನಾಶಕ್ಕೆ ಸಹಕಾರ ನೀಡಿದ ಆರೋಪದ ಮೇಲೆ ನಿರಂಜನ್ ಭಟ್ ತಂದೆ ಶ್ರೀನಿವಾಸ ಭಟ್ ಮತ್ತು ಕಾರು ಚಾಲಕ ರಾಘವೇಂದ್ರ ಅವರನ್ನು ಬಂಧಿಸಲಾಗಿತ್ತು.