ಭಾಸ್ಕರ ಶೆಟ್ಟಿಯ ಹೋಟೆಲ್ ಉಸ್ತುವಾರಿಗೆ ಕೊಲೆ ಬೆದರಿಕೆ
ಭಾಸ್ಕರ್ ಶೆಟ್ಟಿ ಕೊಲೆ ಆರೋಪಿ ರಾಜೇಶ್ವರಿ ಶೆಟ್ಟಿ ಸಹೋದರಿ ರೂಪಾ ಭಾಸ್ಕರ ಶೆಟ್ಟಿ ಅವರ ಮೇಲೆ ಬಾಸ್ಟರ್ ಶೆಟ್ಟಿ ಹೋಟೆಲ್ ಉಸ್ತುವಾರಿ ಸಂದೇಶ್ ಶೆಟ್ಟಿ ಅವರು ಜೀವ ಬೆದರಿಕೆ ಪ್ರಕರಣ ದಾಖಲಿಸಿದ್ದಾರೆ.ಇದಕ್ಕೆ ಪ್ರತಿಯಾಗಿ ರೂಪಾ ದೂರು ನೀಡಿದ್ದಾರೆ.
ಉಡುಪಿ, ಡಿಸೆಂಬರ್. 20 : ಭಾಸ್ಕರ್ ಶೆಟ್ಟಿ ಕೊಲೆ ಆರೋಪಿ ರಾಜೇಶ್ವರಿ ಶೆಟ್ಟಿಯ ಸಹೋದರಿ ರೂಪಾ ಭಾಸ್ಕರ ಶೆಟ್ಟಿ, ಪುತ್ರ ಭಾರ್ಗವ ಶೆಟ್ಟಿ ಮತ್ತು ಇತರ ಐವರೊಂದಿಗೆ ಸೇರಿಕೊಂಡು ಕಬ್ಬಿಣದ ರಾಡ್ ನಿಂದ ಹಲ್ಲೆಗೆ ಯತ್ನಿಸಿ ಕೊಲೆ ಬೆದರಿಕೆ ಹಾಕಿದ್ದಾರೆಂದು ಸಂದೇಶ ಶೆಟ್ಟಿ ಅವರು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಬಹುಕೋಟಿ ಉದ್ಯಮಿ ಭಾಸ್ಕರ ಶೆಟ್ಟಿ ಅವರ ದುರ್ಗಾ ಇಂಟರ್ ನ್ಯಾಷನಲ್ ಲಾಡ್ಜಿಂಗ್ ಮತ್ತು ಬೋರ್ಡಿಂಗ್ ಉಸ್ತುವಾರಿಯನ್ನು ಸಂದೇಶ ಶೆಟ್ಟಿ ಅವರು ನೋಡುಕೊಳ್ಳುತ್ತಿದ್ದಾರೆ. [ಭಾಸ್ಕರ ಶೆಟ್ಟಿ ಕುಟುಂಬಸ್ಥರ ವಿರುದ್ಧ ಪ್ರತಿಬಂಧಕಾಜ್ಞೆ]
ರೂಪಾ ಶೆಟ್ಟಿಯ ಮಗ ಭಾರ್ಗವ ಶೆಟ್ಟಿ ಎಂಬವರು ಕಾರ್ ಪಾರ್ಕಿಂಗ್ ಸ್ಥಳಕ್ಕೆ ಸಂದೇಶ್ ಅವರಿಗೆ ಬರ ಹೇಳಿದ್ದು, ಅಲ್ಲಿಗೆ ಹೋದಾಗ ಅವಾಚ್ಯ ಶಬ್ದಗಳಿಂದ ನಿಂದಿಸಿ ಕಾರಿನಲ್ಲಿದ್ದ ರಾಡ್ ತೆಗೆದು ಮಾರಣಾಂತಿಕ ಹಲ್ಲೆಗೆ ಮುಂದಾಗಿದ್ದರು ಎಂದು ತಿಳಿಸಿದ್ದಾರೆ. [ಭಾಸ್ಕರ್ ಶೆಟ್ಟಿ ಹತ್ಯೆ ಪ್ರಕರಣ ಸಿಐಡಿಯಿಂದ ಚಾರ್ಜ್ ಶೀಟ್ ಸಲ್ಲಿಕೆ]
ಸಂದೇಶ ಶೆಟ್ಟಿಯವರನ್ನು ಹಿಡಿದುಕೊಂಡು ಹಲ್ಲೆಗೈಯುವ ಸಂದರ್ಭ ಅವರ ಸ್ನೇಹಿತರು ತಪ್ಪಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಸಂದೇಶ ಶೆಟ್ಟಿ ಅವರು ಕರಾರಿನಂತೆ ಹಣವನ್ನು ಭಾಸ್ಕರ ಶೆಟ್ಟಿಯವರು ಮೃತಪಟ್ಟ ನಂತರ ಅವರ ತಾಯಿ ಗುಲಾಬಿ ಶೆಡ್ತಿಯವರಿಗೆ ತಿಂಗಳಿಗೆ ಒಂದು ಲಕ್ಷ ರೂಪಾಯಿ ನೀಡುತ್ತಿದ್ದರು.
ಸಂದೇಶ ಅವರು ಒಂದು ವಾರದ ಹಿಂದೆ ಕೆಲಸದ ನಿಮಿತ್ತ ಬೆಂಗಳೂರಿಗೆ ಹೋದಾಗ ರೂಪಾ ಭಾಸ್ಕರ ಶೆಟ್ಟಿ ಮತ್ತು ಅವರ ಮಗ ಭಾರ್ಗವ ಶೆಟ್ಟಿ ಹಾಗೂ ಅವರೊಂದಿಗೆ 5 ಜನ ಆಡಿ ಕಾರಿನಲ್ಲಿ ಬಂದು ಆಫೀಸ್ ಬೀಗವನ್ನು ಬದಲಾಯಿಸಿದ್ದರು ಎನ್ನಲಾಗಿದೆ.
ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಕಲಂ: 143,147,341,324 504,506,ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.
ದೂರಿಗೆ ಪ್ರತಿ ದೂರು: ರೂಪಾ ಶೆಟ್ಟಿ ಜೀವ ಬೆದರಿಕೆ ಹಾಕಿದ್ದಾರೆಂದು ಸಂದೇಶ್ ಶೆಟ್ಟಿ ಅವರು ದೂರು ನೀಡಿರುವ ಬೆನ್ನಲ್ಲಿಯೇ ಇತ್ತ ರೂಪ ಶೆಟ್ಟಿ ಅವರು ಸಂದೇಶ್ ಹಾಗೂ ಮತ್ತಿತರ ವಿರುದ್ಧ ಪ್ರತಿ ದೂರು ನೀಡಿದ್ದಾರೆ.
ಉಡುಪಿ ನಗರ ಠಾಣೆಯಲ್ಲಿ ಇದೇ ಪ್ರಕರಣಕ್ಕೆ ಸಂಬಂಧಿಸಿ ಕೊಲೆ ಆರೋಪಿ ರಾಜೇಶ್ವರಿ ಸಹೋದರಿ ರೂಪಾ ಶೆಟ್ಟಿಯವರಿಗೆ ಮುಂದೆ ನೋಡಿಕೊಳ್ಳುವುದಾಗಿ ಸಂದೇಶ್ ಅವರು ಜೀವಬೆದರಿಕೆ ಹಾಕಿದ್ದಾರೆಂದು ರೂಪಾ ಶೆಟ್ಟಿ ಅವರು ನಗರ ಪೊಲೀಸರಿಗೆ ದೂರು ನೀಡಿದ್ದಾರೆ.
ದುರ್ಗಾ ಇಂಟರ್ ನ್ಯಾಷನಲ್ ಹೋಟೇಲ್ ನ ಮ್ಯಾನೇಜರ್ ಎನ್ನಲಾದ ಅಜಿತ್ ಕುಮಾರ್ ಅವರು ಸಂದೇಶ್, ಪ್ರದೀಪ್ ಪೈ, ಜಯರಾಜ್ ಹಾಗೂ ಅವರೊಂದಿಗೆ ಪರಿಚಯವಿಲ್ಲದ ನಾಲ್ಕು ಜನ ಒಮ್ಮೆಲೆ ಹೋಟೇಲ್ ಒಳಕ್ಕೆ ಅಕ್ರಮ ಪ್ರವೇಶ ಮಾಡಿ ತನಗೆ ಅವಾಚ್ಯ ಶಬ್ದಗಳಿಂದ ಬೈದು ಮುಂದೆ ನೋಡಿಕೊಳ್ಳುತ್ತೇನೆ ಎಂದು ಹೇಳಿ ಅಲ್ಲಿಂದ ಹೊರಟು ಹೋಗಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಬಗ್ಗೆ ಉಡುಪಿ ನಗರ ಠಾಣೆಯಲ್ಲಿ ಕಲಂ: 143,147,448,427,504,506,ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.