ಭಾಸ್ಕರ ಶೆಟ್ಟಿ ಹತ್ಯೆ : ತನಿಖೆಯ ಹೊಣೆ ಅಣ್ಣಾಮಲೈ ಹೆಗಲಿಗೆ?
ಉಡುಪಿ, ಆಗಸ್ಟ್ 11: ಬಹುಕೋಟಿ ಉದ್ಯಮಿ ಭಾಸ್ಕರ ಶೆಟ್ಟಿ ಹತ್ಯೆ ಪ್ರಕರಣದ ತನಿಖೆ ಸರಿಯಾದ ದಾರಿಯಲ್ಲಿ ಸಾಗುತ್ತಿಲ್ಲ ಎನ್ನುವ ಸಾರ್ವಜನಿಕ ಆಕ್ರೋಶದ ನಡುವೆ ತನಿಖಾಧಿಕಾರಿಯನ್ನೇ ಬದಲಾಯಿಸಿರುವ ಮಹತ್ವದ ಬೆಳವಣಿಗೆ ನಡೆದಿದೆ.
ಆರೋಪಿಗಳು ಮತ್ತು ಪೊಲೀಸರ ನಡುವೆ ಭಾರೀ ದುಡ್ಡಿನ ವ್ಯವಹಾರ ನಡೆದಿದೆ ಎನ್ನುವ ಮಾತು ಕೇಳಿ ಬರುತ್ತಿರುವ ಮಧ್ಯೆ, ತನಿಖೆಯ ಹೊಣೆ ಹೊತ್ತಿದ್ದ ಮಣಿಪಾಲದ ಸರ್ಕಲ್ ಇನ್ಸ್ ಪೆಕ್ಟರ್ ಜಾಗಕ್ಕೆ ಕಾರ್ಕಳದ ASP ಅವರನ್ನು ತನಿಖಾಧಿಕಾರಿಯಾಗಿ ನೇಮಿಸಲಾಗಿದೆ. (ಭಾಸ್ಕರ್ ಶೆಟ್ಟಿ ಹತ್ಯೆಯ ಸಂಪೂರ್ಣ ವಿವರ)
ಇವೆಲ್ಲದರ ನಡುವೆ ತನಿಖೆಯ ಸಂಪೂರ್ಣ ಹೊಣೆಯನ್ನು ದಕ್ಷ ಪೊಲೀಸ್ ಅಧಿಕಾರಿ, ಕೆಲವೇ ದಿನಗಳ ಹಿಂದೆ ಉಡುಪಿಯಿಂದ ಚಿಕ್ಕಮಗಳೂರಿಗೆ ವರ್ಗವಾಗಿರುವ ಎಸ್ಪಿ ಅಣ್ಣಾಮಲೈ ಅವರಿಗೆ ವರ್ಗಾಯಿಸುವ ಬಗ್ಗೆ ಮೀನುಗಾರಿಕಾ ಸಚಿವ ಮತ್ತು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಸುಳಿವು ನೀಡಿದ್ದಾರೆ.
ಭಾಸ್ಕರ ಶೆಟ್ಟಿ ಕೊಲೆ ಪ್ರಕರಣ ಪಾರದರ್ಶಕವಾಗಿ, ನಿಷ್ಫಕ್ಷಪಾತ ತನಿಖೆಯಾಗ ಬೇಕೆಂದು ಒತ್ತಾಯಿಸಿ, ಉಡುಪಿಯಲ್ಲಿ ಬುಧವಾರ (ಆ 10) ಜಿಲ್ಲಾ ಸಮಸ್ತ ಬಂಟರ ಸಂಘ ಅಮ್ಮಣ್ಣ ರಮಣಿ ಹಾಲ್ ನಲ್ಲಿ ಆಯೋಜಿಸಿದ್ದ ಬೃಹತ್ ಪ್ರತಿಭಟನಾ ಸಭೆಯಲ್ಲಿ ಸಚಿವ ಪ್ರಮೋದ್ ಮಧ್ವರಾಜ್ ಈ ಭರವಸೆ ನೀಡಿದ್ದಾರೆ.
ಉಡುಪಿ ಪೊಲೀಸರಿಂದ ಸರಿಯಾದ ತನಿಖೆ ಆಗುತ್ತಿಲ್ಲ ಎಂದು ಕಂಡು ಬಂದರೆ ಪ್ರಕರಣವನ್ನು ಸಿಓಡಿಗೆ ಒಪ್ಪಿಸಲು ಗೃಹ ಸಚಿವರಿಗೆ ಮನವಿ ಮಾಡೋಣ. ಉಡುಪಿ ಪೊಲೀಸ್ ಅಧಿಕಾರಿಗಳಿಗೆ ಹಣ ಸಂದಾಯವಾದ ದೂರಿನ ಬಗ್ಗೆ ಪ್ರತ್ಯೇಕ ತನಿಖೆ ನಡೆಯುತ್ತಿದೆ ಎಂದು ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ. (ಭಾಸ್ಕರ ಶೆಟ್ಟಿ ಹತ್ಯೆ: ಲೇಟೆಸ್ಟ್ ಅಪ್ಡೇಟ್)
ತುಂಬಿದ ಸಭೆಯಲ್ಲಿ ಕಣ್ಣೀರಿಟ್ಟು ಸಚಿವರಿಗೆ ಮನವಿ ಮಾಡಿದ ಭಾಸ್ಕರ್ ಶೆಟ್ಟಿ ತಾಯಿ, ಸ್ಲೈಡಿನಲ್ಲಿ ಮುಂದುವರಿಸಲಾಗಿದೆ..
ಭಾಸ್ಕರ ಶೆಟ್ಟಿ ತಾಯಿ
ನನ್ನ ಮಗನ ಸಾವಿಗೆ ನ್ಯಾಯ ದೊರಕಿಸಿಕೊಡಿ ಎಂದು ಭಾಸ್ಕರ್ ಶೆಟ್ಟಿ ತಾಯಿ ಗುಲಾಬಿ ಶೆಟ್ಟಿ ತುಂಬಿದ ಸಭೆಯಲ್ಲಿ ಕಣ್ಣೀರು ಹಾಕುತ್ತಾ ಸಚಿವ ಪ್ರಮೋದ್ ಮಧ್ವರಾಜ್ ಅವರಲ್ಲಿ ಬೇಡಿಕೊಂಡಾಗ ಇಡೀ ಸಭಾಂಗಣದಲ್ಲಿ ಮೌನ ಆವರಿಸಿತ್ತು.
ಪ್ರಮೋದ್ ಮಧ್ವರಾಜ್
ಬಂಟರ ಸಂಘ ನೀಡಿದ ಮನವಿಯನ್ನು ಸ್ವೀಕರಿಸಿ ಮಾತನಾಡುತ್ತಿದ್ದ ಪ್ರಮೋದ್ ಮಧ್ವರಾಜ್, ಈಗಾಗಲೇ ತನಿಖಾ ತಂಡವನ್ನು ಬದಲಾಯಿಸಲಾಗಿದೆ. ಕಾರ್ಕಳದ ಎಎಸ್ಪಿ ಸುಮನಾ ಅವರಿಗೆ ಭಾಸ್ಕರ್ ಶೆಟ್ಟಿಯವರ ಕೊಲೆ ಪ್ರಕರಣದ ತನಿಖೆಯ ಜವಾಬ್ದಾರಿಯನ್ನು ನೀಡಲಾಗಿದೆ ಎಂದು ಪ್ರಮೋದ್ ಹೇಳಿದ್ದಾರೆ.
ಎಸ್ಪಿ ಅಣ್ಣಾಮಲೈ
ಚಿಕ್ಕಮಗಳೂರಿಗೆ ವರ್ಗವಾಗಿರುವ ಅಣ್ಣಾಮಲೈ ಅವರಿಂದ ಈ ಪ್ರಕರಣದ ತನಿಖೆ ಮಾಡಿಸುವುದಕ್ಕೆ ಅವಕಾಶ ಇದೆಯೇ ಎಂದು ಗೃಹ ಸಚಿವರಲ್ಲಿ ವಿಚಾರಿಸುತ್ತೇನೆ. ಆ ಮೂಲಕ ಹಣದ ಪ್ರಭಾವ ಈ ಕೇಸಿನ ಮೇಲೆ ಬೀಳದಂತೆ ತಡೆಯಲು ಪ್ರಯತ್ನಿಸುತ್ತೇನೆ - ಪ್ರಮೋದ್ ಮಧ್ವರಾಜ್
ಎರಡು ಕೋಟಿ
ಭಾಸ್ಕರ ಶೆಟ್ಟಿಯವರ ಬ್ಯಾಂಕ್ ಖಾತೆಯಿಂದ ಎರಡು ಕೋಟಿ ಹಣ ಡ್ರಾ ಮಾಡಲಾಗಿದೆ. ಈ ಹಣ ಎಲ್ಲಿಗೆ ಹೋಯಿತು ಎನ್ನುವುದರ ಬಗ್ಗೆ ತನಿಖೆ ನಡೆಸಲಾಗುವುದು. ತನಿಖೆ ಸರಿಯಾದ ದಾರಿಯಲ್ಲಿ ಸಾಗದಿದ್ದರೆ ಸಿಐಡಿ, ಅದೂ ಇಲ್ಲದಿದ್ದರೆ ಸಿಬಿಐಗೆ ಹಸ್ತಾಂತರಿಸೋಣ - ಪ್ರಮೋದ್ ಮಧ್ವರಾಜ್
ನವನೀತ್ ಶೆಟ್ಟಿ
ಸಭೆಯ ಮಧ್ಯೆ ಆರೋಪಿ ಮತ್ತು ಭಾಸ್ಕರ್ ಶೆಟ್ಟಿ ಪುತ್ರ ನಿರಂಜನ್ ಶೆಟ್ಟಿಗೆ ಪೊಲೀಸರು ರಾಜೋಪಚಾರ ನೀಡುತ್ತಿದ್ದ ವಿಡಿಯೋವನ್ನು ಸಚಿವರಿಗೆ ತೋರಿಸಲಾಯಿತು. ಈ ವಿಡಿಯೋವನ್ನು ಸಚಿವರು ಬೆಂಗಳೂರು ಐಜಿಪಿಗೆ ವೇದಿಕೆಯಿಂದಲೇ ವಾಟ್ಸಪ್ ಮೂಲಕ ಕಳುಹಿಸಿದರು.