ಭಾಸ್ಕರ್ ಶೆಟ್ಟಿ ಹತ್ಯೆ, 2 ಕೋಟಿ ಹಣ ವರ್ಗಾವಣೆ ಬಗ್ಗೆ ತನಿಖೆ
ಉಡುಪಿ, ಆಗಸ್ಟ್ 16 : ಉದ್ಯಮಿ ಭಾಸ್ಕರ್ ಶೆಟ್ಟಿ ಹತ್ಯೆ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಪ್ರಕರಣವನ್ನು ತಿರುಚಲು, ಪೊಲೀಸರಿಗೆ ವಿತರಿಸಲು ಹಾಗೂ ವಕೀಲರ ಶುಲ್ಕಕ್ಕಾಗಿ ಆರೋಪಿ ರಾಜೇಶ್ವರಿ ಅವರು 2 ಕೋಟಿ ಹಣವನ್ನು ನೀಡಿರುವ ಅಂಶ ಈಗ ಬೆಳಕಿಗೆ ಬಂದಿದೆ.
ಹತ್ಯೆಯಾದ ಭಾಸ್ಕರ್ ಶೆಟ್ಟಿ ಅವರ ಪತ್ನಿ ರಾಜೇಶ್ವರಿ ಅವರು, ಸ್ಥಳೀಯ ಜನಪ್ರತಿನಿಧಿಯೊಬ್ಬರ ಪತಿ, ನಿಟ್ಟೂರು ಮೂಲದ ವ್ಯಕ್ತಿಯೊಬ್ಬರಿಗೆ 2 ಕೋಟಿಗೂ ಅಧಿಕ ಹಣ ನೀಡಿದ್ದರು. ತನ್ನ ನಿಕಟವರ್ತಿಯಾಗಿದ್ದ ಈತನನ್ನು ಸ್ವತಃ ಠಾಣೆಗೆ ಕರೆಸಿದ್ದ ರಾಜೇಶ್ವರಿ ಅವರು ಚೆಕ್ ನೀಡಿದ್ದರು ಎಂಬುದು ಸದ್ಯದ ಸುದ್ದಿ.[ಭಾಸ್ಕರ ಶೆಟ್ಟಿ ಶವ ಸುಡಲು 20 ಲೀಟರ್ ಪೆಟ್ರೋಲ್ ಬಳಕೆ!]
ಭಾಸ್ಕರ್ ಶೆಟ್ಟಿಯ ಕೊಲೆ ರಹಸ್ಯ ಬಯಲಾಗುವ ಮೊದಲು ಪೊಲೀಸರು ರಾಜೇಶ್ವರಿ ಹಾಗೂ ಆಕೆಯ ಪುತ್ರ ನವನೀತ್ ವಿಚಾರಣೆ ನಡೆಸಿದ್ದರು. ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸುತ್ತಾರೆ ಎಂಬ ಸುಳಿವು ಸಿಕ್ಕ ತಕ್ಷಣ, ರಾಜೇಶ್ವರಿ ಅವರು ಪೊಲೀಸರಿಗೆ ನೀಡಲು ಮತ್ತು ಪ್ರಕರಣದ ದಿಕ್ಕು ತಪ್ಪಿಸಲು ಮುಂದಾಗಿದ್ದರು.[ಭಾಸ್ಕರ ಶೆಟ್ಟಿ ಹತ್ಯೆ, ಮತ್ತಿಬ್ಬರು ಆರೋಪಿಗಳ ಬಂಧನ]
ಈ ಕೊಲೆ ಪ್ರಕರಣದ ತನಿಖಾಧಿಕಾರಿ ಮಣಿಪಾಲ ಠಾಣೆಯ ಇನ್ಸ್ಪೆಕ್ಟರ್ ಎಸ್.ವಿ. ಗಿರೀಶ್ ಜೊತೆ ಡೀಲ್ ಕುದುರಿಸಲು ಮುಂದಾದ ರಾಜೇಶ್ವರಿ ಅವರು, ಗಿರೀಶ್ ಜೊತೆ ಹೆಚ್ಚು ಓಡಾಟ ಇಟ್ಟುಕೊಂಡಿದ್ದ ಮಹಿಳಾ ಜನಪ್ರತಿನಿಧಿಯೊಬ್ಬರ ಪತಿ, ನಿಟ್ಟೂರಿನ ಉದ್ಯಮಿಯೂ ಆಗಿರುವ ವ್ಯಕ್ತಿಯನ್ನು ಠಾಣೆಗೆ ಕರೆಸಿ ಹಣದ ಚೆಕ್ ನೀಡಿದ್ದರು.[ಜ್ಯೋತಿಷಿ ನಿರಂಜನ್ ಭಟ್ ಆತ್ಮಹತ್ಯೆಗೆ ಯತ್ನ]
ಹಣ ಪಡೆದ ವ್ಯಕ್ತಿ ವಕೀಲರ ಫೀಸ್ ನೀಡುವುದು ಸಹಿತ ಪ್ರಕರಣದ ಹಲವು ಖರ್ಚು ವೆಚ್ಚಗಳನ್ನು ನೋಡಿಕೊಳ್ಳುತ್ತಿದ್ದ. ಈ ಪೈಕಿ ದೊಡ್ಡ ಮೊತ್ತವನ್ನು ಎಸ್. ವಿ. ಗಿರೀಶ್ ಸಹಿತ ಹಲವು ಪೊಲೀಸರಿಗೆ ನೀಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈಗಾಗಲೇ ಎಸ್.ವಿ.ಗಿರೀಶ್ ವಿರುದ್ಧ ಇಲಾಖಾ ಮಟ್ಟದ ತನಿಖೆಗೆ ಉಡುಪಿ ಎಸ್ಪಿ ಆದೇಶ ನೀಡಿದ್ದಾರೆ.
ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ಅಣ್ಣಾಮಲೈ ಅವರು ವರ್ಗಾವಣೆಗೊಂಡ ಬಳಿಕ ಹುದ್ದೆಯ ಜವಾಬ್ದಾರಿ ವಿಷ್ಣುವರ್ಧನ್ ಅವರ ಮೇಲೆ ಬಿದ್ದಿತ್ತು. ಅವರು ಕೂಡಾ ಈ ಪ್ರಕರಣದ ತನಿಖೆ ನಡೆಸಿದ್ದರು. ಅದಾದ ಬಳಿಕ ಎಸ್.ವಿ.ಗಿರೀಶ್ ಪ್ರಕರಣದ ತನಿಖಾಧಿಕಾರಿಯಾಗಿದ್ದರು.
ಈಗ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಕೆ.ಟಿ.ಬಾಲಕೃಷ್ಣ ಅವರು ಅಧಿಕಾರ ವಹಿಸಿಕೊಂಡಿದ್ದಾರೆ. ಎಸ್.ವಿ.ಗಿರೀಶ್ ಅವರ ವಿರುದ್ಧ ಆರೋಪ ಕೇಳಿಬರುತ್ತಿದ್ದಂತೆ ಅವರ ವಿರುದ್ಧ ಇಲಾಖಾ ತನಿಖೆಗೆ ಆದೇಶ ನೀಡಿದ್ದಾರೆ.