ಭಾಸ್ಕರ್ ಶೆಟ್ಟಿ ಕೊಲೆ : ನವನೀತ್, ನಿರಂಜನ್ ಮಂಗಳೂರು ಜೈಲಿಗೆ
ಉಡುಪಿ, ಸೆಪ್ಟೆಂಬರ್ 07 : ಉದ್ಯಮಿ ಭಾಸ್ಕರ ಶೆಟ್ಟಿ ಕೊಲೆ ಪ್ರಕರಣದ ಆರೋಪಿಗಳ ನ್ಯಾಯಾಂಗ ಬಂಧನವನ್ನು ಸೆ. 19 ರವರೆಗೆ ವಿಸ್ತರಣೆ ಮಾಡಲಾಗಿದೆ. ಇದೇ ವೇಳೆ ಅಂಜಾರು ಕಾಜರಗುತ್ತು ಜೈಲಿನಲ್ಲಿದ ನವನೀತ ಶೆಟ್ಟಿ ಮತ್ತು ನಿರಂಜನ್ ಭಟ್ ಅವರನ್ನು ಮಂಗಳೂರು ಕಾರಾಗೃಹಕ್ಕೆ ಕಳುಹಿಸಲಾಗಿದೆ.
ಭಾಸ್ಕರ ಶೆಟ್ಟಿ ಕೊಲೆ ಪ್ರಕರಣದ ಆರೋಪಿಗಳಾದ ಭಾಸ್ಕರ ಶೆಟ್ಟಿ ಪತ್ನಿ ರಾಜೇಶ್ವರಿ ಶೆಟ್ಟಿ, ಪುತ್ರ ನವನೀತ್, ಜ್ಯೋತಿಷಿ ನಿರಂಜನ ಭಟ್, ನಿರಂಜನ್ ಭಟ್ ತಂದೆ ಶ್ರೀನಿವಾಸ ಭಟ್ ಮತ್ತು ಕಾರು ಚಾಲಕ ರಾಘವೇಂದ್ರನನ್ನು ಮಂಗಳವಾರ ಕೋರ್ಟ್ಗೆ ಹಾಜರುಪಡಿಸಲಾಗಿತ್ತು.[ಭಾಸ್ಕರ್ ಶೆಟ್ಟಿ ಹತ್ಯೆ, 2 ಕೋಟಿ ಹಣ ವರ್ಗಾವಣೆ ಬಗ್ಗೆ ತನಿಖೆ]
ಪ್ರಕರಣದ ಆರೋಪಿಗಳಾದ ನವನೀತ್ ಶೆಟ್ಟಿ, ನಿರಂಜನ ಭಟ್ ಒಂದೇ ಜೈಲಿನಲ್ಲಿದ್ದರೆ ಅವರು ಪರಸ್ಪರ ಚರ್ಚೆ ನಡೆಸಿ ತನಿಖೆಗೆ ತೊಡಕು ಉಂಟು ಮಾಡುವ ಸಾಧ್ಯತೆ ಇದೆ. ಅದಕ್ಕಾಗಿ ಇವರನ್ನು ಬೇರೆ-ಬೇರೆ ಜೈಲಿಗೆ ಸ್ಥಳಾಂತರಿಸಬೇಕು ಎಂದು ಸಹಾಯಕ ಅಭಿಯೋಜಕಿ ಮುಮ್ತಾಜ್ ವಾದ ಮಂಡಿಸಿದರು.[ಭಾಸ್ಕರ ಶೆಟ್ಟಿ ಹತ್ಯೆ: ಜ್ಯೋತಿಷಿ ನಿರಂಜನ್ ಭಟ್ ಅನ್ನೋ ಪ್ರಳಯಾಂತಕ]
ಪ್ರಕರಣದ 1ನೇ ಆರೋಪಿ ರಾಜೇಶ್ವರಿ ಶೆಟ್ಟಿ ಈಗಾಗಲೇ ಮಂಗಳೂರು ಜೈಲಿನಲ್ಲಿದ್ದಾರೆ. ಎರಡನೇ ಆರೋಪಿ ನವನೀತ ಶೆಟ್ಟಿ, ಮೂರನೇ ಆರೋಪಿ ನಿರಂಜನ್ ಭಟ್ ಕೂಡಾ ಮಂಗಳೂರು ಜೈಲಿಗೆ ಕಳಿಸುವಂತೆ ಆದೇಶಿಸಿದ ಕೋರ್ಟ್, ಉಳಿದ ಇಬ್ಬರು ಆರೋಪಿಗಳನ್ನು ಉಡುಪಿ ಜಿಲ್ಲಾ ಉಪಕಾರಾಗೃಹಕ್ಕೆ ಕಳಿಸುವಂತೆ ಆದೇಶ ನೀಡಿದರು.